ಬೆಂಗಳೂರು, ಏ.6-ವಿದ್ಯಾರ್ಥಿನಿ ಗೌತಮಿ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಂತಕ ಮಹೇಶ್ನ ನಿಗೂಢ ಹೆಜ್ಜೆಗಳ ಸುಳಿವು ಭೇದಿಸಲು ಪೊಲೀಸರು ಶತಪ್ರಯತ್ನ ಮುಂದುವರೆಸಿದ್ದಾರೆ. ಅವನು ಗುಂಡು ಹಾರಿಸಿದ ಪಿಸ್ತೂಲು ಎಲ್ಲಿಂದ ತಂದ ಎಂಬುದೇ ಇದೀಗ ಪೊಲೀಸರ ತಲೆಕೆಡಿಸುತ್ತಿರುವ ಪ್ರಮುಖ ವಿಷಯ. ಈ ಸಂಬಂಧ ನಿನ್ನೆ ಅವನ ಹುಟ್ಟೂರು ಆಗುಂಬೆ ಸಮೀಪದ ಕೆಂದಾಳು ಬಯಲಿಗೆ ಕರೆದುಕೊಂಡು ಹೋಗಿ ವಿಚಾರಣೆ ಕೈಗೊಂಡ ಪೊಲೀಸರಿಗೆ ವಿಶೇಷ ಮಾಹಿತಿಗಳೇನು ಲಭಿಸಿಲ್ಲ. ಮಹೇಶನಿಗೆ ಸಮಾಜಘಾತುಕ ಶಕ್ತಿಗಳ ಬೆಂಬಲ ಇದೆಯೇ ಎಂಬ
ಬಗ್ಗೆಯೂ ಪೊಲೀಸರು ತನಿಖೆ ನಡೆಸಿದರಾದರೂ ಈ ಸಂಬಂಧವೂ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮಹೇಶ ಓದಿದ ಶಾಲೆ ಮತ್ತು ಕಾಲೇಜುಗಳಲ್ಲಿ ಅವನ ವರ್ತನೆಯ ಬಗ್ಗೆ ವಿಚಾರಿಸಿದಾಗ ಅವನು ತುಂಬಾ ಮೃದು ಸ್ವಭಾವದವನು ಹಾಗೂ ಯಾರೊಂದಿಗೂ ಹೆಚ್ಚು ಮಾತನಾಡದ ಮಿತಭಾಷಿ ಎಂದು ಹೇಳಿದ್ದಾರೆ.
ಅವನನ್ನು ತೀರಾ ಹತ್ತಿರದಿಂದ ಬಲ್ಲವರನ್ನು ವಿಚಾರಿಸಿದಾಗ, ಮಹೇಶ ಈ ರೀತಿಯ ಕೃತ್ಯವೆಸಗಿದ್ದಾನೆ ಎಂದರೆ ನಂಬಲಿಕ್ಕೆ ಸಾಧ್ಯವಿಲ್ಲ ಎಂದು ಅವರೆಲ್ಲಾ ಆತಂಕ ವ್ಯಕ್ತಪಡಿಸಿದ್ದಾರೆ.
ಆಗುಂಬೆ ಸಮೀಪದ ಗುಡ್ಡದಕೇರಿ ಶಾಲೆ ಮತ್ತು ತೀರ್ಥಹಳ್ಳಿ ಸಮೀಪದ ಮೇಗರವಳ್ಳಿಯ ಶಾಲಾ-ಕಾಲೇಜುಗಳಲ್ಲಿ ಮಹೇಶ ಹೈಸ್ಕೂಲ್ ಮತ್ತು ಪಿಯುಸಿ ವಿದ್ಯಾಭ್ಯಾಸ ನಡೆಸಿದ ನಂತರ ಬೆಂಗಳೂರಿಗೆ ಬಂದು ಉದ್ಯೋಗಕ್ಕೆ ಸೇರಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಸೂಕ್ತ ಪುರಾವೆಗಳು ಸಿಗದ ಹಿನ್ನೆಲೆಯಲ್ಲಿ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.