ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿಗೆ 100 ವರ್ಷ ತುಂಬಿರುವ ಕಾರಣ, 2015–16ನ್ನು ‘ಕನ್ನಡ ವರ್ಷ’ವೆಂದು ಆಚರಿಸಲು ಸರ್ಕಾರ ತೀರ್ಮಾನಿಸಿದ್ದು, ವಿವಿಧ ಕಾರ್ಯಕ್ರಮ ಆಯೋಜನೆಗೆ ₨ 10 ಕೋಟಿ ಮೀಸಲಿಡಲಾಗಿದೆ.
ಕಳೆದ ಬಾರಿಯ ಬಜೆಟ್ನಲ್ಲಿ ₨ 295 ಗಿಟ್ಟಿಸಿಕೊಂಡಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ಬಾರಿ ಒಟ್ಟು ₨ 303 ಕೋಟಿ ಪಡೆದುಕೊಂಡಿದೆ.
ಪಾರಂಪರಿಕ ಸ್ಥಳಗಳಾದ ಮೈಸೂರು, ಶ್ರೀರಂಗಪಟ್ಟಣ, ಬೀದರ್, ಕಲಬುರ್ಗಿ, ವಿಜಯಪುರ, ಕಿತ್ತೂರು, ಬನವಾಸಿ, ಮಳಖೇಡ, ಬದಾಮಿ, ತಲಕಾಡು, ಹಳೆಬೀಡು, ಮೇಲುಕೋಟೆ, ಬೇಲೂರು, ಬೆಂಗಳೂರು ನಗರ, ನಾಗಾವಿ, ಲಕ್ಕುಂಡಿ, ಐಹೊಳೆ, ಬಳ್ಳಿಗಾವಿ, ಸನ್ನತಿ, ಕಮತಗಿ ಸೇರಿದಂತೆ 20 ಊರುಗಳ ಸಮಗ್ರ ಅಭಿವೃದ್ಧಿಗೆ ₨ 20 ಕೋಟಿ ತೆಗೆದಿರಿಸಲಾಗಿದೆ.
ವಿಶೇಷ
*ಆಸಕ್ತರಿಗೆ ಅಂತರ್ಜಾಲದ ಮೂಲಕ ಕನ್ನಡ ಕಲಿಸುವ ವರ್ಚುವಲ್ ತರಗತಿ ಆರಂಭಿಸಲು ಮತ್ತು ಬೆಂಗಳೂರಿನ ವಿವಿಧೆಡೆ ಕನ್ನಡ ಕಲಿಕಾ ಕೇಂದ್ರ ತೆರೆಯಲು ₨ 1 ಕೋಟಿ ಹೆಚ್ಚುವರಿ ಅನುದಾನ.
*ವಿಶ್ವ ಪಾರಂಪರಿಕ ಸ್ಥಳಗಳ ತಾತ್ಕಾಲಿಕ ಪಟ್ಟಿಗೆ ಸೇರಿರುವ ರಾಜ್ಯದ ವಿವಿಧ ತಾಣಗಳನ್ನು ಅಂತಿಮ ಪಟ್ಟಿಗೆ ಸೇರಿಸಲು ಅಗತ್ಯವಿರುವ ವರದಿ ಸಿದ್ಧಪಡಿಸಲು ₨ 3 ಕೋಟಿ.
*ಕನ್ನಡದ ವಿಶ್ವಕೋಶ ‘ಕಣಜ’ (www.kanaja.in) ಅಭಿವೃದ್ಧಿಗೆ ₨ 2 ಕೋಟಿ.
*ಡಾ. ಶಿವರಾಮ ಕಾರಂತ ಸ್ಮಾರಕ, ಮಂಜೇಶ್ವರ ಗೋವಿಂದ ಪೈ ನಿವಾಸದ ಪುನರುಜ್ಜೀವನ, ಕವಿಶೈಲ ಮಾದರಿಯಲ್ಲಿ ಜಿ.ಎಸ್. ಶಿವರುದ್ರಪ್ಪ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ದ.ರಾ. ಬೇಂದ್ರೆ ಜನ್ಮ ಸ್ಥಳ ಅಭಿವೃದ್ಧಿಗೆ ತಲಾ ₨ 1 ಕೋಟಿ.
*ಕೊಂಕಣಿ ಅಧ್ಯಯನ ಪೀಠ ಸ್ಥಾಪಿಸಲು ₨ 2 ಕೋಟಿ. ಶ್ರವಣಬೆಳಗೊಳದಲ್ಲಿ ಜೈನ ಶಾಸನಗಳ ಅಧ್ಯಯನ ಪೀಠ ಸ್ಥಾಪನೆಗೆ ₨ 1 ಕೋಟಿ.
*ರಂಗಾಯಣಗಳ ಕಾರ್ಯನಿರ್ವಹಣೆ, ಹೊಸ ನಾಟಕ ರಚಿಸಲು ₨ 4 ಕೋಟಿ ವಿಶೇಷ ಅನುದಾನ.
*ಬದಾಮಿ, ಐಹೊಳೆ ಮತ್ತು ಪಟ್ಟದಕಲ್ಲು ಒಳಗೊಂಡ ಚಾಲುಕ್ಯ ಅಭಿವೃದ್ಧಿ ಪ್ರಾಧಿಕಾರದ ರಚನೆಗೆ ಮೊದಲ ಹಂತವಾಗಿ ₨ 1 ಕೋಟಿ.
*ಸೇಡಂ ತಾಲ್ಲೂಕು ಮಳಖೇಡ ಕೋಟೆಯ ಸಂರಕ್ಷಣೆ, ಅಭಿವೃದ್ಧಿಗೆ ₨ 5 ಕೋಟಿ.
*ಗಡಿನಾಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯಕ್ರಮಗಳಿಗೆ ₨ 20 ಕೋಟಿ.
