ಬೆಂಗಳೂರು: ನ್ಯಾಯಮೂರ್ತಿ ರಾಘವೇಂದ್ರ ಸಿಂಗ್ ಚೌಹಾಣ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ರಾಷ್ಟ್ರಗೀತೆ ನುಡಿಸುವ ವೇಳೆ ರಾಜ್ಯಪಾಲ ವಜುಭಾಯಿ ವಾಲಾ ಅವರು ವೇದಿಕೆಯಿಂದ ಕೆಳಗಿಳಿದು ಹೋದ ಪ್ರಸಂಗ ಮಂಗಳವಾರ ನಡೆಯಿತು.
ರಾಜಸ್ತಾನದಿಂದ ರಾಜ್ಯ ಹೈಕೋರ್ಟ್ಗೆ ವರ್ಗವಾಗಿ ಬಂದಿರುವ ಚೌಹಾಣ್ ಅವರಿಗೆ ರಾಜಭವನದ ಬ್ಯಾಂಕ್ವೆಟ್ ಹಾಲ್ನಲ್ಲಿ ಬೆಳಿಗ್ಗೆ 9.30ಕ್ಕೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ಏರ್ಪಡಿಸಲಾಗಿತ್ತು. ಪ್ರತಿಜ್ಞಾವಿಧಿ ಬೋಧನೆ ನಂತರ ಪೊಲೀಸ್ ಬ್ಯಾಂಡ್ ರಾಷ್ಟ್ರಗೀತೆ ನುಡಿಸಲು ಆರಂಭಿಸಿತು. ಆಗ ರಾಜ್ಯಪಾಲರು ವೇದಿಕೆ ಬಿಟ್ಟು ಕೆಳಗಿಳಿದು ಹೊರಟರು.
ಕೆಲ ಹೆಜ್ಜೆ ಹಾಕಿ ಮುಂದೆ ಹೋಗಿದ್ದ ಅವರು ತಕ್ಷಣವೇ ಮರಳಿ ವೇದಿಕೆಯೇರಿ ತಮ್ಮ ಸ್ಥಾನಕ್ಕೆ ಬಂದು ನಿಂತರು. ಆದರೆ ಅಷ್ಟರಲ್ಲಾಗಲೇ ರಾಷ್ಟ್ರಗೀತೆಯ ಕೊನೆಯ ಸಾಲು ಕೇಳಿ ಬರುತ್ತಿತ್ತು. ಮುಖ್ಯ ನ್ಯಾಯಮೂರ್ತಿ ಡಿ.ಎಚ್.ವಘೇಲಾ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಹಾಜರಿದ್ದರು.