ಸೋಮವಾರಪೇಟೆ (ಕೊಡಗು ಜಿಲ್ಲೆ): ಇಲ್ಲಿಗೆ ಸಮೀಪದ ಮಾಲಂಬಿ ಮೀಸಲು ಅರಣ್ಯದ ಗಣಗೂರು ಬೆಟ್ಟದ ಅರಣ್ಯಕ್ಕೆ ಬೆಂಕಿ ಬಿದ್ದಿದ್ದು, ಸುತ್ತಲಿನ ಅರಣ್ಯಕ್ಕೆ ವ್ಯಾಪಿಸಿ ರುವುದರಿಂದ ಸುಮಾರು 5 ಹೆಕ್ಟೇರ್ನಷ್ಟು ಅರಣ್ಯ ಭಸ್ಮವಾಗಿದೆ. ಶನಿವಾರಸಂತೆ ವಲಯದ ಅರಣ್ಯ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಮತ್ತೊಂದೆಡೆ, ಗೋಣಿಮರೂರು ತೇಗದ ತೋಪಿನಲ್ಲೂ ಬೆಂಕಿ ಕಾಣಿಸಿಕೊಂಡಿದೆ.
ಸೋಮವಾರ ಪೇಟೆ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಪ್ರಯತ್ನಿ ಸುತ್ತಿದ್ದಾರೆ. ಸುಡು ಬಿಸಿಲು ಮುಂದುವರಿದ ಪರಿಣಾಮ ಅರಣ್ಯ ಪ್ರದೇಶಕ್ಕೆ ಬೆಂಕಿಯ ಕೆನ್ನಾಲಿಗೆ ವ್ಯಾಪಿಸುವ ಆತಂಕ ಎದುರಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿಯು ‘ಬೆಂಕಿ ರಸ್ತೆ’ ನಿರ್ಮಾಣಕ್ಕೆ ಮುಂದಾ ಗಿದ್ದು, ಮೀಸಲು ಅರಣ್ಯಕ್ಕೆ ಬೆಂಕಿ ಆವರಿಸದಂತೆ ಎಚ್ಚರ ವಹಿಸ ಲಾಗಿದೆ.
‘ಅರಣ್ಯ ಇಲಾಖೆ ಸಿಬ್ಬಂದಿ ಮುಂಜಾಗ್ರತೆ ವಹಿಸಿದ್ದು, ಕುರುಚಲು, ಗಿಡಗಂಟಿಗಳು ಭಸ್ಮವಾಗಿವೆ. ಮರಗಳು ಬೆಂಕಿಗೆ ಆಹುತಿಯಾಗಿಲ್ಲ’ ಎಂದು ಮಾಲಂಬಿ ವಲಯದ ವನ ಪಾಲಕ ಸುಂದರಮೂರ್ತಿ ಅವರು ತಿಳಿಸಿದ್ದಾರೆ. ಈ ಬೆಂಕಿ ನಂದಿಸುವ ಕಾರ್ಯದಲ್ಲಿ ಅರಣ್ಯ ಸಿಬ್ಬಂದಿಯೊಂದಿಗೆ ಗ್ರಾಮಸ್ಥರು ಸಹ ಕೈಜೋಡಿಸಿದ್ದಾರೆ.
ಚಾಮುಂಡಿಬೆಟ್ಟ: ಆರಿದ ಕಾಳ್ಗಿಚ್ಚು
ಮೈಸೂರು: ಚಾಮುಂಡಿಬೆಟ್ಟದಲ್ಲಿ ಮಂಗಳವಾರ ಸಂಜೆ ಕಾಣಿಸಿಕೊಂಡ ಕಾಳ್ಗಿಚ್ಚನ್ನು ಬುಧವಾರ ಬೆಳಗಿನ ಜಾವ ಆರಿಸಲಾಯಿತು. ಕಾಳ್ಗಿಚ್ಚಿಗೆ ನೂರಕ್ಕೂ ಹೆಚ್ಚು ಎಕರೆ ಕಾಡು ಭಸ್ಮವಾಗಿದೆ. ಏಕಕಾಲಕ್ಕೆ ಐದು ಕಡೆ ಬೆಂಕಿ ಬಿದ್ದ ಪರಿಣಾಮ ಕಾಳ್ಗಿಚ್ಚನ್ನು ಆರಿಸುವುದು ಸವಾಲಾಗಿತ್ತು. ಅರಣ್ಯ ಇಲಾಖೆ, ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯ 125ಕ್ಕೂ ಹೆಚ್ಚು ಸಿಬ್ಬಂದಿ ಸತತ 12 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದರು.