ಬೆಂಗಳೂರು: ‘ವೀರಶೈವ ಮತ್ತು ಲಿಂಗಾಯತ ಪದಗಳು ಒಂದೇ ನಾಣ್ಯದ ಎರಡು ಮುಖದಂತಿವೆ. ಇವು ಭಿನ್ನ ವರ್ಗಗಳನ್ನು ಹೇಳುತ್ತವೆಯೋ ಅಥವಾ ಒಂದೇ ವರ್ಗ ಸೂಚಕವೋ ಎನ್ನುವ ವಾದಗಳಿಗೆ ಯಾರೂ ಕಿವಿಗೊಡಬಾರದು’ ಎಂದು ಸಂಶೋಧಕ ಡಾ.ಎಂ.ಚಿದಾನಂದ ಮೂರ್ತಿ ಹೇಳಿದರು.
‘ವೀರಶೈವ–ಲಿಂಗಾಯತ ಸಮನ್ವಯ ವೇದಿಕೆ’ ನಗರದಲ್ಲಿ ಸೋಮವಾರ ಆಯೋಜಿಸಿದ್ದ ‘ಲಿಂಗಾಯತ–ವೀರಶೈವ’ ಎಂಬ ಸಂವಾದದಲ್ಲಿ ಅವರು ಮಾತನಾಡಿದರು.
‘ಪ್ರಸ್ತುತ ಕೆಲವರು ಬಸವಣ್ಣ ವೀರಶೈವನಲ್ಲ. ಆತ ಲಿಂಗಾಯತ ಎಂದು ವಾದಿಸುವ ಜತೆಗೆ ಪಂಚಪೀಠಗಳ ಅನುಯಾಯಿಗಳು ವೀರಶೈವರು, ಬಸವಣ್ಣನ ಅನುಯಾಯಿಗಳು ಲಿಂಗಾಯತರು ಎನ್ನುವ ವಿಭಾಗ ಮಾಡುತ್ತಿದ್ದಾರೆ. ಇದು ಬಹಳ ದೊಡ್ಡ ತಪ್ಪು. ಎರಡೂ ಪದಗಳು ಬೇರೆಯಲ್ಲ. ವೀರಶೈವ ವಿದ್ಯಾವಂತರು ಬಳಸುವ ಶಿಷ್ಟ ಪದವಾದರೆ, ಲಿಂಗಾಯತ ಎನ್ನುವುದು ಜನಸಾಮಾನ್ಯರ ಬಳಕೆಯಲ್ಲಿದೆ’ ಎಂದು ಅನಿಸಿಕೆ ವ್ಯಕ್ತಪಡಿಸಿದರು.
ಸಂಶೋಧಕ ಡಾ.ಎಸ್.ವಿದ್ಯಾಶಂಕರ್ ಮಾತನಾಡಿ, ‘ಈ ಪದಗಳ ಚರ್ಚೆ 21ನೇ ಶತಮಾನದ ಆರಂಭದಿಂದ ಈವರೆಗೆ ಮತ್ತಷ್ಟು ಉಗ್ರವಾಗಿ ಹರಡಿಕೊಂಡು ಸಮಾಜ ವಿಘಟಿಸುವ ನೆಲೆಯಲ್ಲಿ ಗುಂಪುಗಳನ್ನು ಸೃಷ್ಟಿಸುವ ಪ್ರವೃತ್ತಿ ಕಂಡುಬರುತ್ತಿದೆ. ಆದ್ದರಿಂದ, ಇಂದು ನಾವೆಲ್ಲ ಒಂದು ಎಂಬ ಸಮನ್ವಯದ ಸೂತ್ರವನ್ನು ಅನಿವಾರ್ಯವಾಗಿ ಪಾಲಿಸಬೇಕಿದೆ’ ಎಂದರು.
‘ಈ ಧರ್ಮಕ್ಕೊಂದು ಹೆಸರಿಡಬೇಕು ಎಂಬ ವಾದ ಮುಂದಿಟ್ಟುಕೊಂಡು ಪಾಲುಗಾರಿಕೆ ಮಾಡಲು ಹೊರಟವರಲ್ಲಿ ಪ್ರಮುಖರಾದ ಮಾತೆ ಮಹಾದೇವಿಯವರು ಬಸವ ಧರ್ಮ ಎಂದು ಕರೆದರು. ಚಿತ್ರದುರ್ಗದ ಮುರುಘಾ ಶರಣರು ಬಸವ ಧರ್ಮವನ್ನು ವ್ಯಕ್ತಿಕೇಂದ್ರಿತ ಧರ್ಮವನ್ನಾಗಿ ಮಾಡಲು ಹೊರಟರು. ಆ ಪ್ರಯತ್ನ ತೀವ್ರ ಟೀಕೆಗೆ ಒಳಗಾದರೂ ಅವರು ಅದನ್ನು ಬಳಸುತ್ತಲೇ ಇದ್ದಾರೆ’ ಎಂದು ಹೇಳಿದರು.
ನಿವೃತ್ತ ಉಪನ್ಯಾಸಕ ಡಾ.ಸಿ.ಯು.ಮಂಜುನಾಥ ಮಾತನಾಡಿ, ‘ಈ ಎರಡು ಪದಗಳ ಪ್ರಾಚೀನತೆ ಜಾಲಾಡುವುದರಲ್ಲಿ ಗೆಲ್ಲಬೇಕೆಂಬ ಹಟ ಬದಿಗಿಟ್ಟು, ಪೂರ್ವಗ್ರಹಗಳನ್ನು ಬಿಟ್ಟು, ಉದಾರ ಭಾವನೆಯಿಂದ ಯೋಚಿಸಿದರೆ ಇಡೀ ಸಮಾಜಕ್ಕೆ ಒಳಿತಾಗುತ್ತದೆ. ವಿತಂಡವಾದಗಳೇ ಮುಂದುವರೆದರೆ ವಿಷಬೀಜಗಳಿಗೆ ಇಡೀ ಸಮುದಾಯವೇ ಬಲಿಯಾಗಬೇಕಾಗುತ್ತದೆ’ ಎಂದರು.
ಕರ್ನಾಟಕ ರಾಜ್ಯ ವೀರಶೈವ–ಲಿಂಗಾಯತ ಪಂಚಮಶಾಲಿ ಸಂಘದ ಅಧ್ಯಕ್ಷ ಬಸವರಾಜ ದಿಂಡೂರು ಮಾತನಾಡಿ, ‘ಈ ಪದಗಳ ವಾದಗಳಲ್ಲಿ ಜನಸಾಮಾನ್ಯರಿಗೆ ಆಸಕ್ತಿ ಇಲ್ಲ. ಈ ಹಿಂದೆ ವೀರಶೈವ ಮಹಾಸಭೆಯ ಪದಾಧಿಕಾರಿಯಾಗಿದ್ದ ಮಾತೆ ಮಹಾದೇವಿಯವರು 1986ರಲ್ಲಿ ನಡೆದ ಮಹಾಸಭೆಯ ಸಾಮಾನ್ಯ ಸಭೆಯಲ್ಲಿ ವೀರಶೈವ ಪದವನ್ನು ಒಪ್ಪಿಕೊಂಡು ಸಹಿ ಹಾಕಿದ್ದರು. ಇಂದು ಅವರು ಅದನ್ನು ಮರೆತು ವಿವಾದಗಳನ್ನು ಹುಟ್ಟು ಹಾಕುತ್ತಿದ್ದಾರೆ. ಇಂತಹ ವಾದಗಳಲ್ಲಿ ಮುಳುಗಿ ಯುವ ಜನರ ಆಶೋತ್ತರಗಳನ್ನು ಅರಿತುಕೊಳ್ಳಲು ಸಮಾಜದ ಮುಖಂಡರು ಅಸಡ್ಡೆ ತೋರಿದರೆ ಭವಿಷ್ಯದಲ್ಲಿ ಸಮಾಜ ನಾಶವಾದರೂ ಅಚ್ಚರಿಯಿಲ್ಲ’ ಎಂದರು.
ಧರ್ಮ ನಾಶದ ಆತಂಕ
‘ಶಿರಸಿ, ಕುಮಟಾ, ಹೊನ್ನಾವರ ಹಾಗೂ ಉತ್ತರ ಕನ್ನಡದ ಆರೇಳು ತಾಲ್ಲೂಕುಗಳಲ್ಲಿ ಹವ್ಯಕ ಬ್ರಾಹ್ಮಣರಲ್ಲಿ ಸಾವಿರ ಗಂಡಸರಿಗೆ 786 ಹೆಣ್ಣುಮಕ್ಕಳಿದ್ದಾರೆ. ಆದ್ದರಿಂದ, ಆ ಸಮುದಾಯದ ಜನರು ಮಧ್ಯವರ್ತಿಗಳಿಗೆ ಹಣದ ಆಮಿಷ ತೋರಿಸಿ ವೀರಶೈವ ಲಿಂಗಾಯತ ಧರ್ಮದ ಬಡ ಕುಟುಂಬಗಳ ಹೆಣ್ಣುಮಕ್ಕಳನ್ನು ಮದುವೆ ಮಾಡಿಕೊಳ್ಳುತ್ತಿದ್ದಾರೆ. ಇದು ಹೀಗೆ ಮುಂದುವರೆದರೆ ಮುಂದೊಂದು ದಿನ ನಮ್ಮ ಧರ್ಮ ಉಳಿಯುತ್ತದೆಯೇ ಎನ್ನುವ ಆತಂಕ ಕಾಡುತ್ತಿದೆ’ ಎಂದು ಬಸವರಾಜ ದಿಂಡೂರು ಹೇಳಿದರು.