ಕರ್ನಾಟಕ

ಪಿಂಕಥಾನ್‌: ಸ್ತನ ಕ್ಯಾನ್ಸರ್‌ ಬಗ್ಗೆ ಜಾಗೃತಿಗಾಗಿ ಓಟ; 10 ಸಾವಿರ ಜನ ಭಾಗಿ

Pinterest LinkedIn Tumblr

pvec23febmPinkathon

ಬೆಂಗಳೂರು: ಮಹಿಳಾ ಸಬಲೀಕರಣ ಮತ್ತು ಸ್ತನ ಕ್ಯಾನ್ಸರ್‌ನ ಬಗ್ಗೆ ಜಾಗೃತಿ ಮೂಡಿಸಲು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ಹಾಗೂ ಯುನೈಟೆಡ್‌ ಸಿಸ್ಟರ್ಸ್‌ ಪ್ರತಿಷ್ಠಾನದ ಸಹಯೋಗದಲ್ಲಿ ನಗರದಲ್ಲಿ ಭಾನು­ವಾರ ‘ಪಿಂಕಥಾನ್‌–2015’ ಮ್ಯಾರ­ಥಾನ್‌ ಆಯೋಜಿಸಲಾಗಿತ್ತು.

ಕಂಠೀರವ ಕ್ರೀಡಾಂಗಣದಿಂದ ಆರಂಭ­ವಾದ ಮ್ಯಾರಥಾನ್‌ನಲ್ಲಿ ಸುಮಾರು 10 ಸಾವಿರ ಮಹಿಳೆಯರು ಪಾಲ್ಗೊಂ­ಡಿದ್ದರು. 3, 5, 10 ಹಾಗೂ 21 ಕಿ.ಮೀ ವಿಭಾಗದಲ್ಲಿ ನಡೆದ ಮ್ಯಾರಥಾನ್‌ಗೆ ಖ್ಯಾತ ರೂಪದರ್ಶಿ ಮಿಲಿಂದ್‌ ಸೋಮನ್‌ ಅವರು ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ‘ಆರೋಗ್ಯ­ವಂತ ಕುಟುಂಬ, ರಾಷ್ಟ್ರ ಹಾಗೂ ಜಗತ್ತು ಮಹಿಳೆಯರಿಂದ ನಿರ್ಮಾ­ಣ­ವಾಗುತ್ತದೆ. ಅಂತಹ ಮಹಿಳೆ­ಯರು ದೈನಂದಿನ ಕೆಲಸಗಳ ನಡುವೆ ತಮ್ಮ ಆರೋಗ್ಯವನ್ನು ನಿರ್ಲಕ್ಷಿಸು­ತ್ತಿ­ದ್ದಾರೆ. ಅವರು ಸ್ವಲ್ಪ ಸಮಯವನ್ನು ತಮ­ಗಾಗಿ ಮೀಸಲಿಡುವುದರ ಜತೆಗೆ ಕುಟುಂಬದ ಆರೋಗ್ಯವನ್ನು ಕಾಪಾಡ­ಬೇಕು’ ಎಂದರು. ಮಹಿಳೆಯರು ಜೀವನ ಶೈಲಿಯನ್ನು ಬದಲಿಸಿ­ಕೊಳ್ಳುವ ಮೂಲಕ ಕಾಯಿಲೆ­ಗಳನ್ನು ದೂರ ಇಡಬೇಕು. ಪ್ರತಿನಿತ್ಯ ವಾಯುವಿಹಾರ ಮಾಡಬೇಕು ಎಂದು ಸಲಹೆ ನೀಡಿದರು.

ಕ್ಯಾನ್ಸರ್‌ ಕಾಯಿಲೆಯಿಂದ ಗುಣ­ಮುಖ­ರಾದವರು, ಕಿವುಡ ಹಾಗೂ ಮೂಕ ಬಾಲಕಿಯರು ಮ್ಯಾರಥಾನ್‌­ನಲ್ಲಿ ಭಾಗವಹಿಸಿದ್ದರು.
ಎಸ್‌ಬಿಐ ಕಾರ್ಪೊರೇಟ್‌ ಕಮ್ಯುನಿ­ಕೇಷನ್‌ ವಿಭಾಗದ ಪ್ರಧಾನ ವ್ಯವಸ್ಥಾಪಕ ವಿಮಲ್‌ ಪಾಂಡೆ, ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್‌ ಕಮಿಷನರ್‌ ಬಿ.­ದಯಾನಂದ, ಪಿಂಕ­ಥಾನ್‌ ಸಹ­ಸ್ಥಾಪಕಿ ರೀಮಾ ಸಾಂಘ್ವಿ, ಸ್ತನ ಕ್ಯಾನ್ಸ­ರ್‌ಗೆ ಚಿಕಿತ್ಸೆ ಪಡೆದು ಗುಣ­ಮುಖರಾದ ವಕೀಲೆ ಗಾಯಿತ್ರಿ ಬಾಲು ಇತರರು ಉದ್ಘಾಟನಾ ಸಮಾರಂಭ­ದಲ್ಲಿ ಪಾಲ್ಗೊಂಡಿದ್ದರು.

Write A Comment