ಬೆಂಗಳೂರು: ಕರ್ನಾಟಕ ಗೃಹ ಮಂಡಳಿ ಒಬ್ಬ ವ್ಯಕ್ತಿಗೆ 7 ನಿವೇಶನಗಳನ್ನು ಮಂಜೂರು ಮಾಡಿದೆ. ಇನ್ನೊಬ್ಬ ವ್ಯಕ್ತಿಗೆ 6 ನಿವೇಶನ ನೀಡಿದೆ. ಒಟ್ಟಾರೆ 58 ಅರ್ಜಿದಾರರಿಗೆ 138 ನಿವೇಶನಗಳನ್ನು ನೀಡಿದೆ.
ಮಂಡಳಿಯ ಈ ಅವಾಂತರಗಳನ್ನು ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕ ಪರಿಶೋಧಕರ (ಸಿಎಜಿ) ವರದಿ ಬಹಿರಂಗ ಪಡಿಸಿದೆ. ಚಿಕ್ಕಮಗಳೂರು ಹಂತ–5ರ 100 ವಸತಿ ಯೋಜನೆಯಲ್ಲಿ 58 ಅರ್ಜಿದಾರರಿಗೆ 138 ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಒಂದೇ ವರ್ಗದಲ್ಲಿ ಅಥವಾ ವರ್ಗಗಳ ಸಂಯೋಜನೆಯಲ್ಲಿ ಒಂದಕ್ಕಿಂತ ಹೆಚ್ಚು ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ ಎಂದು ವರದಿ ಹೇಳಿದೆ.
8 ಅರ್ಜಿದಾರರಿಗೆ ತಲಾ 3 ರಿಂದ 7 ನಿವೇಶನಗಳನ್ನು ನೀಡಲಾಗಿದೆ. 41 ಪ್ರಕರಣಗಳಲ್ಲಿ ಅಕ್ಕಪಕ್ಕದ ನಿವೇಶನಗಳನ್ನು ಒಬ್ಬರಿಗೇ ಹಂಚಿಕೆ ಮಾಡಲಾಗಿದೆ. 35 ಪ್ರಕರಣಗಳಲ್ಲಿ ಒಂದೇ ಅರ್ಜಿ ಮೇಲೆ ಬಹುಸಂಖ್ಯೆಯ ನಿವೇಶನಗಳನ್ನು ಹಂಚಲಾಗಿದೆ. 2 ಪ್ರಕರಣಗಳಲ್ಲಿ ಒಂದೇ ಅರ್ಜಿಗೆ 4 ನಿವೇಶನಗಳನ್ನು ಹಂಚಿಕೆ ಮಾಡಲಾಗಿದ್ದರೆ ಇನ್ನೊಂದು ಪ್ರಕರಣದಲ್ಲಿ 5 ನಿವೇಶನ ಹಂಚಿಕೆ ಮಾಡಲಾಗಿದೆ.
ಮತ್ತೊಂದು ಪ್ರಕರಣದಲ್ಲಿ 6 ನಿವೇಶನ ಹಂಚಲಾಗಿದೆ. ಇದು 1983ರ ಗೃಹ ಮಂಡಳಿ ಹಂಚಿಕೆ ನಿಬಂಧನೆಗಳ ನಿಯಮ 8 ಮತ್ತು 9ರ
ಸ್ಪಷ್ಟ ಉಲ್ಲಂಘನೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಮಂಡಳಿ ಮನೆ ಅಥವಾ ನಿವೇಶನಗಳನ್ನು ಹಂಚಿಕೆ ಮಾಡುವ ಊರಲ್ಲಿ ಅರ್ಜಿದಾರರಿಗೆ ಯಾವುದೇ ನಿವೇಶನ ಅಥವಾ ಮನೆ ಇರಬಾರದು. ಗೃಹ ಮಂಡಳಿ ಅಥವಾ ರಾಜ್ಯದ ಯಾವುದೇ ಪ್ರಾಧಿಕಾರದಿಂದ ನಿವೇಶನ ಅಥವಾ ಮನೆಯನ್ನು ಪಡೆಯದ ವ್ಯಕ್ತಿಗೆ ಮಾತ್ರ ನಿವೇಶನ/ ಮನೆ ಹಂಚಿಕೆ ಮಾಡಬೇಕು ಎಂಬ ನಿಯಮ ಇದೆ. ಆದರೂ ಇದನ್ನು ಉಲ್ಲಂಘಿಸಿ ಒಂದೇ ಅರ್ಜಿಗೆ ಒಂದಕ್ಕಿಂತ ಹೆಚ್ಚು ನಿವೇಶನಗಳನ್ನು ಗೃಹ ಮಂಡಳಿ ಮಂಜೂರು ಮಾಡಿದೆ ಎಂದು ವರದಿಯಲ್ಲಿ ಆಕ್ಷೇಪ ವ್ಯಕ್ತಪಡಿಸಲಾಗಿದೆ.
ವಸತಿ ಯೋಜನೆಗಳ ಮೇಲೆ ಹೂಡಿರುವ ಬಂಡವಾಳವನ್ನು ಹಿಂಪಡೆಯುವ ಸಲುವಾಗಿ ಎಲ್ಲ ಖಾಲಿ ನಿವೇಶನಗಳನ್ನು ವಿಲೇವಾರಿ ಮಾಡಿದ್ದಾಗಿ ಗೃಹ ಮಂಡಳಿ ಹೇಳಿದೆ. ಆದರೆ ಇದು ನಿಯಮಕ್ಕೆ ವಿರುದ್ಧ ಎಂದು ಸಿಎಜಿ ವರದಿ ಹೇಳಿದೆ.
ಅರ್ಜಿ ಆಹ್ವಾನಕ್ಕೆ ಮೊದಲೇ ಹಂಚಿಕೆ!: ಬೆಂಗಳೂರಿನ ಸೂರ್ಯನಗರ ಹಂತ–3ರಲ್ಲಿ ಅರ್ಜಿ ಆಹ್ವಾನಿಸುವ ಮೊದಲೇ ಮನೆ ಹಂಚಿಕೆ ಮಾಡಿರುವುದು ಪತ್ತೆ-ಯಾಗಿದೆ.
ಸೂರ್ಯನಗರ ಹಂತ–3ರಲ್ಲಿ ಮನೆ-ಗಳ ಹಂಚಿಕೆಗಾಗಿ ಗೃಹ ಮಂಡಳಿ 2013ರ ಸೆಪ್ಟೆಂಬರ್ ಮತ್ತು ಅಕ್ಟೋ-ಬರ್ನಲ್ಲಿ ಅರ್ಜಿ ಆಹ್ವಾನಿಸಿತ್ತು. ಆದರೆ ವಿವಿಧ ಅಳತೆಗಳ 239 ಮನೆಗಳನ್ನು 2013ರ ಮಾರ್ಚ್ ಮತ್ತು ಏಪ್ರಿಲ್ ತಿಂಗಳಿನಲ್ಲಿಯೇ ಹಂಚಿಕೆ ಮಾಡಲಾ-ಗಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ.
ಕಲಬುರ್ಗಿಯ ಕೋಟನೂರು–ಕುಸನೂರ್ ವಸತಿ ಯೋಜನೆಗಳಲ್ಲಿ ವಿವಿಧ ಅಳತೆಯ 54 ಮನೆಗಳನ್ನು ಸಾರ್ವಜನಿಕ ಪ್ರಕಟಣೆ ನೀಡದೇ ಹಂಚಿಕೆ ಮಾಡಲಾಗಿದೆ.
ಸೂರ್ಯನಗರ ಹಂತ–3ರ ಯೋಜನೆ-ಯನ್ನು ಕಡಿಮೆ ಬೇಡಿಕೆಯ ಯೋಜನೆಯ ಅಡಿಯಲ್ಲಿ ವರ್ಗೀಕರಿಸುವ ತೀರ್ಮಾನ-ವನ್ನು ಅಧಿಸೂಚನೆ ಹೊರಡಿಸದೆಯೇ ತೆಗೆದುಕೊಳ್ಳಲಾಗಿದೆ. ಕಲಬುರ್ಗಿ ವಸತಿ ಯೋಜನೆಯನ್ನು ಬೇಡಿಕೆ ಇಲ್ಲದೆಯೇ ಕೈಗೆತ್ತಿಕೊಳ್ಳಲಾಗಿತ್ತು.
ಮೊದಲಿನ ಯೋಜನೆಯಲ್ಲಿ ಹಂಚಿಕೆ-ಯಾಗದೇ ಇರುವುದು, ಪ್ರಾರಂಭಿಕ ಠೇವಣಿಯನ್ನು ಹಿಂದಿರುಗಿಸದೇ ಇರು-ವುದು ಮುಂದೆ ಯೋಜನೆ ಕೈಗೆತ್ತಿ-ಕೊಳ್ಳುವ ಹಕ್ಕನ್ನು ನೀಡುವುದಿಲ್ಲ. ಅಲ್ಲದೆ ಮನೆ ಅಥವಾ ನಿವೇಶನಗಳನ್ನು ನೇರ-ವಾಗಿ ಹಂಚಿಕೆ ಮಾಡಲು ವಸತಿ ಆಯುಕ್ತರಿಗೆ ಹಕ್ಕು ಇಲ್ಲ. ನೇರ ಹಂಚಿಕೆ ಮಾಡುವಂತೆ ವಸತಿ ಆಯುಕ್ತರಿಗೆ ಸೂಚಿಸಲು ನೀಡಲು ಗೃಹ ಮಂಡಳಿಗೂ ಅಧಿಕಾರವಿಲ್ಲ ಎಂದು ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ.
84 ಪ್ರಕರಣಗಳಿಗೆ ಸಂಬಂಧಿಸಿದಂತೆ ಹಂಚಿಕೆ ರದ್ದು ಪಡಿಸಿ ಆದೇಶವನ್ನು ಹೊರಡಿಸಲಾಗಿದೆ. ಉಳಿದ ಪ್ರಕರಣ-ಗಳಲ್ಲಿಯೂ ಕ್ರಮ ಕೈಗೊಳ್ಳಲಾಗಿದೆ ಎಂದು ಗೃಹ ಮಂಡಳಿ ಆಯುಕ್ತರು ತಿಳಿಸಿದ್ದಾರೆ ಎಂದೂ ವರದಿಯಲ್ಲಿ ಹೇಳಲಾಗಿದೆ.
ನಿವೇಶನ ಹಂಚಿಕೆ ನಿಯಮ
1) ಗೃಹ ಮಂಡಳಿ ಅಥವಾ ರಾಜ್ಯದ ಬೇರೆ ಯಾವುದೇ ಪ್ರಾಧಿಕಾರದಿಂದ ನಿವೇ-ಶನ ಅಥವಾ ಮನೆ ಪಡೆದಿರ-ಬಾರದು. ಅರ್ಜಿದಾರನ ಪತ್ನಿ ಅಥವಾ ಪತಿಯೂ ನಿವೇಶನ/ ಮನೆ ಪಡೆದಿರ-ಬಾರದು.
2) ರಾಜ್ಯದ ಯಾವುದೇ ನಗರ ಪ್ರದೇಶದಲ್ಲಿ ಮನೆ ಅಥವಾ ನಿವೇಶನ ಇರಬಾರದು. ಪತಿ ಅಥವಾ ಪತ್ನಿ, ಅಪ್ರಾಪ್ತ ಮಕ್ಕಳ ಹೆಸರಿನಲ್ಲಿಯೂ ಇರಬಾರದು.
3) ನಿವೇಶನ ಮತ್ತು ಮನೆಗಳನ್ನು ಲಾಟರಿ ಎತ್ತುವ ಮೂಲಕವೇ ಹಂಚಬೇಕು.
4) ಹಂಚಿಕೆಗೆ ಇರುವ ನಿವೇಶನ ಅಥವಾ ಮನೆಗಳ ಸ್ಥಳ, ಸಂಖ್ಯೆ, ಪಾವ-ತಿಸ-ಬೇಕಾದ ಮೊತ್ತವನ್ನು ಮೊದಲೇ ಪ್ರಚಾರ ಮಾಡಿರಬೇಕು.
5) ನಗರ/ಪಟ್ಟಣದ ವ್ಯಾಪ್ತಿಯಲ್ಲಿ ಅಥವಾ ನಿವೇಶನ/ಮನೆ ನಿರ್ಮಿಸಿದ ಪ್ರದೇಶದಲ್ಲಿ ಅರ್ಜಿಯ ದಿನಾಂಕದ-ವರೆಗೆ 10 ವರ್ಷ ನಿರಂತರವಾಗಿ ವಾಸ ಮಾಡದೇ ಇರುವ ವ್ಯಕ್ತಿಗೆ ನಿವೇಶನ ನೀಡುವಂತಿಲ್ಲ.