ಬೆಂಗಳೂರು: ಬೆಂಗಳೂರು ಕ್ಯಾಥೊಲಿಕ್ ಆರ್ಚ್ ಡಯಾಸನ (ಧರ್ಮ ಮಹಾಕ್ಷೇತ್ರ) 75 ನೇ ವರ್ಷದ (ಅಮೃತ ಮಹೋತ್ಸವ) ಅಂಗವಾಗಿ ಶುಕ್ರವಾರ ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಕೆಥೆಡ್ರಲ್ ಚರ್ಚ್ನಲ್ಲಿ ವಿಶೇಷ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.
ಏಸುವಿಗೆ ವಿಶೇಷ ಬಲಿಪೂಜೆ ಸಲ್ಲಿಸಲಾಯಿತು. ಬೈಬಲ್ನಲ್ಲಿರುವ ಉಪದೇಶಗಳನ್ನು ಪಾದ್ರಿಗಳು ವಾಚಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಆರ್ಚ್ ಬಿಷಪ್ ಡಾ.ಬರ್ನಾಡ್ ಮೊರಾಸ್, ‘ನಮ್ಮ ನಮ್ಮ ಕುಟುಂಬದ ಕಲ್ಯಾಣಕ್ಕೆ ಕರ್ತವ್ಯ ನಿಭಾಯಿಸುವಂತೆ, ಸಮುದಾಯ ಹಾಗೂ ಸಮಾಜದ ಪ್ರತಿ ಎಲ್ಲರಿಗೂ ಹಲವು ಜವಾಬ್ದಾರಿಗಳಿವೆ. ಅವುಗಳನ್ನು ಸಮರ್ಪಕವಾಗಿ ಎಲ್ಲರೂ ನಿಭಾಯಿಸಬೇಕಾಗಿದೆ’ ಎಂದರು.
‘ಕ್ರೈಸ್ತ ಧರ್ಮವು ಯಾರನ್ನೂ ದ್ವೇಷಿಸುವುದಿಲ್ಲ. ಬೇರೆ ಧರ್ಮದವರನ್ನು ಭಾತೃತ್ವ ಸಹಿಷ್ಣುತೆಯಿಂದ ಕಾಣುತ್ತದೆ. ನೆರೆಹೊರೆಯವರನ್ನು ನಿಮ್ಮ ಮಗನಂತೆ ಪ್ರೀತಿಸುವಂತೆ ಉಪದೇಶಿಸುತ್ತದೆ’ ಎಂದರು.
‘ಬೆಂಗಳೂರು ಕ್ಯಾಥೊಲಿಕ್ ಆರ್ಚ್ ಡಯಾಸ್ ತನ್ನ ಸಂಸ್ಥೆಗಳಾದ ಆರೋಗ್ಯ ಕೇಂದ್ರ, ಶಿಕ್ಷಣ ಸಂಸ್ಥೆಗಳಲ್ಲಿ ಯಾರಲ್ಲಿಯೂ ಭೇದ ಭಾವವನ್ನು ಮಾಡದೆ, ಎಲ್ಲರಿಗೂ ಸಮಾನವಾದ ರೀತಿಯಲ್ಲಿ ಸೇವೆಯನ್ನು ಸಲ್ಲಿಸುತ್ತಿದೆ’ ಎಂದು ಹೇಳಿದರು.
‘ಎಲ್ಲರನ್ನೂ ಸಮಾನವಾಗಿ ಕಾಣುವಂತೆ ಏಸು ಆಜ್ಞಾಪಿಸಿದ್ದಾನೆ. ಅಂಗವಿಕಲ ಮಕ್ಕಳು ಪ್ರಭುವಿನ ಮಕ್ಕಳೇ ಆದ್ದರಿಂದ, ಅವರ ಬಗೆಗೆ ಯಾವುದೇ ತಾತ್ಸಾರ ಮನೋಭಾವನೆ ತಾಳದೆ, ಅವರನ್ನೂ ಸಾಮಾನ್ಯರಂತೆ ಭಾವಿಸಿ ಅವರ ಕಲ್ಯಾಣಕ್ಕಾಗಿ ಶ್ರಮಿಸುವ ಅಗತ್ಯವಿದೆ’ ಎಂದು ಅವರು ತಿಳಿಸಿದರು.