ಕರ್ನಾಟಕ

ಮುಷ್ಕರ 8ನೇ ದಿನಕ್ಕೆ: ಶೇ 50ರಷ್ಟು ಅಂಗನವಾಡಿ ಬಂದ್

Pinterest LinkedIn Tumblr

anganA

ಬೆಂಗಳೂರು: ಕನಿಷ್ಠ ವೇತನ, ಕೆಲಸದ ಭದ್ರತೆ ಸೇರಿ­ ವಿವಿಧ ಬೇಡಿಕೆಗಳ ಈಡೇರಿ­ಕೆಗೆ ಒತ್ತಾಯಿಸಿ ಅಂಗನವಾಡಿ ಕಾರ್ಯ­ಕರ್ತೆ­ಯರು ಸೇವೆ ಸ್ಥಗಿತ­ಗೊಳಿಸಿ ನಡೆಸು­ತ್ತಿ­ರುವ ಅನಿರ್ದಿಷ್ಟಾ­ವಧಿ ಮುಷ್ಕರ ಸೋಮ­ವಾರ 8ನೇ ದಿನಕ್ಕೆ ಕಾಲಿ­ಟ್ಟಿದೆ. ಇದ­ರಿಂ­ದಾಗಿ ಗಣನೀಯ ಸಂಖ್ಯೆ­­ಯಲ್ಲಿ ಅಂಗ­ನ­ವಾಡಿಗಳು ಬಂದ್‌ ಆಗಿವೆ.

ರಾಜ್ಯ ಅಂಗನವಾಡಿ ನೌಕರರ ಸಂಘ (ಸಿಐಟಿಯು), ಅಂಗನವಾಡಿ ಕಾರ್ಯ­ಕರ್ತೆ­ಯರು ಮತ್ತು ಸಹಾಯಕರ ಒಕ್ಕೂಟ (ಎಐಟಿಯುಸಿ) ಸೇರಿದಂತೆ ವಿವಿಧ ಸಂಘಟನೆಗಳು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಮುಷ್ಕರ ನಡೆಸುತ್ತಿವೆ.

‘­ಅಂಗನವಾಡಿ ಕಾರ್ಯ­ಕರ್ತೆ­ಯರಿಗೆ ₹ 15 ಸಾವಿರ ಹಾಗೂ ಸಹಾ­ಯಕಿ­ಯ­ರಿಗೆ ₹ 10 ಸಾವಿರ ಕನಿಷ್ಠ ವೇತನ ನೀಡಬೇಕು, ಈಗಿರುವ ಗೌರವ­ಧನವನ್ನು ಸೇವಾಜೇಷ್ಠತೆ ಆಧಾರದಲ್ಲಿ ಪ್ರತಿ ಹಂತದಲ್ಲೂ ₹ 500 ಹೆಚ್ಚಿಸ­ಬೇಕು, ಸಮಗ್ರ ಶಿಶು ಅಭಿವೃದ್ಧಿ ಯೋಜ­­ನೆ­­­ಯನ್ನು (ಐಸಿಡಿಎಸ್‌) ಖಾಸಗೀ­ಕರಣ ಮಾಡದೆ, ಪ್ರತ್ಯೇಕ ಇಲಾಖೆ­ಯ­ನ್ನಾಗಿ ಉಳಿಸಬೇಕು. ಈ ಬೇಡಿಕೆಗಳಿಗೆ ಸರ್ಕಾರ ಲಿಖಿತ ಭರವಸೆ ಕೊಡುವವರೆಗೂ ಹೋರಾಟ ನಿಲ್ಲಿಸು­ವುದಿಲ್ಲ’ ಎಂದು ಪ್ರತಿ­ಭಟನಾ­ಕಾರರು ಪಟ್ಟು ಹಿಡಿದಿ­ದ್ದಾರೆ.

‘ರಾಜ್ಯದಲ್ಲಿ ಒಟ್ಟು 62 ಸಾವಿರ ಅಂಗನ­ವಾಡಿಗಳಿದ್ದು, 1.25 ಲಕ್ಷ ನೌಕರ­ರಿದ್ದಾರೆ. ಸೇವೆ ಸ್ಥಗಿತಗೊಳಿಸಿ ಹೋರಾಟ ಮಾಡುವ ಬಗ್ಗೆ ಪೋಷಕ­ರಿಗೆ ಮೊದಲೇ ಸೂಚನೆ ನೀಡಲಾಗಿದೆ. ರಾಜ್ಯದಲ್ಲಿ ಈಗಾಗಲೇ ಶೇ ೫೦ರಷ್ಟು  ಅಂಗನವಾಡಿಗಳು ಬಂದ್‌ ಆಗಿವೆ. ಇದರಿಂದ ಕೆಲಸಕ್ಕೆ ಹೋಗುವ ಪೋಷಕ­ರಿಗೆ ಮಕ್ಕಳ ಆರೈಕೆ ಕಷ್ಟವಾಗುತ್ತಿದೆ’ ಎಂದರು. ‘ನಿತ್ಯ 8–10 ತಾಸು ಕೆಲಸ ಮಾಡುವ ಅಂಗನವಾಡಿ ಕಾರ್ಯಕರ್ತೆ­ಯರಿಗೆ ಜನಗಣತಿ, ಚುನಾವಣೆ ಸಮೀಕ್ಷೆ, ಶೌಚಾಲ­ಯಗಳ ಸಮೀಕ್ಷೆ, ಪಲ್ಸ್‌ ಪೋಲಿಯೊ ಸೇರಿದಂತೆ ಇನ್ನಿತರೆ ಹೆಚ್ಚುವರಿ ಕೆಲಸ­ಗಳನ್ನು ವಹಿಸ­ಲಾ­ಗುತ್ತಿದೆ.

ಅಧಿಕಾರಿ­ಗಳು ನೀಡುವ ಕಿರುಕುಳಗಳನ್ನು ಸಹಿಸಿಕೊಂಡು 25–30 ವರ್ಷಗಳಿಂದ ದುಡಿಯುತ್ತಿದ್ದರೂ, ಕಾರ್ಯ­ಕರ್ತೆ­ಯರಿಗೆ ಕೇವಲ ₹ 5,500 ಹಾಗೂ ಸಹಾಯಕರಿಗೆ ₹ 2,750 ವೇತನ ನೀಡ­ಲಾಗು­ತ್ತಿದೆ.  ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿರುವ ಪ್ರಸ್ತುತ ಸಂದರ್ಭದಲ್ಲಿ ಈ ವೇತನದಿಂದ ಜೀವನ ನಡೆಸುವುದು ಹೇಗೆ’ ಎಂದು ಅಂಗನವಾಡಿ ನೌಕರರ ಹಿತರಕ್ಷಣಾ ಸಮಿತಿ ಅಧ್ಯಕ್ಷೆ ಪದ್ಮಾ ಪ್ರಶ್ನಿಸಿದರು.

ಲಿಖಿತ ಭರವಸೆಗೆ ಒಪ್ಪುತ್ತಿಲ್ಲ
‘ಪತಿ–ಮಕ್ಕಳನ್ನು ಬಿಟ್ಟು ಬಂದು ಎಂಟು ದಿನಗಳಿಂದ ಮುಷ್ಕರದಲ್ಲಿ ಕುಳಿತಿ­ದ್ದೇವೆ. ಸರ್ಕಾರಕ್ಕೆ ಮಾನವೀ­ಯತೆಯೇ ಇಲ್ಲ. ಹೋರಾಟದ 2ನೇ ದಿನ ಸ್ಥಳಕ್ಕೆ ಬಂದಿದ್ದ ಸಚಿವೆ ಉಮಾಶ್ರೀ, ಬೇಡಿಕೆ ಈಡೇರಿಸುವುದಾಗಿ ಮೌಖಿಕ ಭರವಸೆ ನೀಡಿದ್ದರು. ಆದರೆ, ಲಿಖಿತ ಭರವಸೆಗೆ ಅವರು ಒಪ್ಪಲಿಲ್ಲ’
– ಶಾಂತಮ್ಮ, ಅಂಗನವಾಡಿ ಸಹಾಯಕಿ, ಮಾಗಡಿ

ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ
‘ಅಧಿಕಾರಿಗಳು ಕೆಲಸದಿಂದ ವಜಾ­ಗೊಳಿಸುತ್ತಾರೆ ಎಂಬ ಭಯದಿಂದ ಕೆಲ ಕಾರ್ಯಕರ್ತೆಯರು ಮುಷ್ಕರದಲ್ಲಿ ಪಾಲ್ಗೊಂಡಿಲ್ಲ. ಸಹಾಯಕಿಯರಿಂದ ಬಲ­ವಂತ­ವಾಗಿ ಕೀ ಕಸಿದುಕೊಂಡು, ಸ್ತ್ರೀಶಕ್ತಿ ಸಂಘಗಳ ಮೂಲಕ ಅಂಗನ­ವಾಡಿ ನಡೆ­ಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಈ ಪ್ರಕ್ರಿಯೆ ನಡೆದರೆ ವಿಷ ಕುಡಿದು ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’
– ನಂಜಾಮಣಿ, ಕಾರ್ಯಕರ್ತೆ

Write A Comment