ಮೈಲಾರ (ಬಳ್ಳಾರಿ ಜಿಲ್ಲೆ): ‘ಮುತ್ತಿನ ಗಂಟು ಮೂರಾದೀತಲೇ ಪರಾಕ್….’
ಇದು ಮೈಲಾರದಲ್ಲಿ ಗುರುವಾರ ಸಂಜೆ ಮೈಲಾರ ಲಿಂಗೇಶ್ವರ ದೇವಸ್ಥಾನದ ಗೊರವಪ್ಪ ನುಡಿದ ಪ್ರಸಕ್ತ ಸಾಲಿನ ಕಾರಣೀಕ.
ಶ್ರೀ ಕ್ಷೇತ್ರದ ಪರಂಪರೆಯ ಸಂಕೇತವಾಗಿರುವ 15 ಅಡಿ ಎತ್ತರದ ಬಿಲ್ಲನ್ನೇರಿ, ಆಕಾಶದತ್ತ ನೋಡಿ ‘ಸದ್ದಲೇ….’ ಎಂದು ಕಾರಣೀಕ ನುಡಿದ ಗೊರವಪ್ಪ, ಅಲ್ಲಿಂದ ಕೆಳಕ್ಕೆ ಧುಮುಕುತ್ತಿದ್ದಂತೆಯೇ ಜಯಘೋಷಗಳು ಮೊಳಗಿದವು.
ಪ್ರಸಕ್ತ ವರ್ಷದ ಮುಂಗಾರು ಮತ್ತು ಹಿಂಗಾರು ಹಂಗಾಮಿಗೆ ಸಂಬಂಧಿಸಿದಂತೆ ಈ ಭವಿಷ್ಯವು ಆಶಾದಾಯಕವಲ್ಲ. ರಾಜಕೀಯ ಹಾಗೂ ಸಾಮಾಜಿಕವಾಗಿಯೂ ಈ ಭವಿಷ್ಯವು ಅಶುಭದಾಯಕ ಸಂದೇಶ ಸಾರಿದೆ ಎಂಬುದು ‘ಮುತ್ತಿನ ಗಂಟು ಮೂರಾದೀತಲೇ ಪರಾಕ್’ನ ಅರ್ಥವಾಗಿದೆ ಎಂದು ಹಿರಿಯರು ವ್ಯಾಖ್ಯಾನಿಸಿದ್ದಾರೆ.
11 ದಿನಗಳವರೆಗೆ ಉಪವಾಸ ವ್ರತ ಆಚರಿಸಿದ ಗೊರವಪ್ಪ ಅವರೊಂದಿಗೆ ದೇವಸ್ಥಾನದ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ಅವರು ಇದಕ್ಕೂ ಮೊದಲು ದೇವಸ್ಥಾನದಿಂದ ಅಶ್ವಾರೂಢರಾಗಿ ಮೈಲಾರದ ಡೆಂಕನ ಮರಡಿಗೆ ಬರುತ್ತಿದ್ದಂತೆಯೇ ‘ಏಳು ಕೋಟಿ ಏಳು ಕೋಟಿಗೋ…ಚಾಂಗ್ಬಲೋ…’ ಎಂಬ ಹರ್ಷೋದ್ಘಾರ ಮುಗಿಲು ಮುಟ್ಟಿತು.
‘ಮುತ್ತಿನ ಬೆಟ್ಟ ಹೋಳಾದೀತಲೇ …’
ಧಾರ್ಮಿಕ ದತ್ತಿ ಇಲಾಖೆಯ ವತಿಯಿಂದ ಪ್ರತಿ ವರ್ಷ ಗೊರವಪ್ಪನ ಬಿಲ್ಲಿಗೆ ಮೈಕ್ ಅಳವಡಿಸಿ, ಗೊರವಪ್ಪ ಹೇಳಿದ್ದನ್ನು ರೆಕಾರ್ಡ್ ಮಾಡಿಕೊಳ್ಳಲು ಟೇಪ್ ರೆಕಾರ್ಡರ್ ಕಟ್ಟಲಾಗುತ್ತಿತ್ತು. ಆದರೆ ಈ ಸಾರಿ ಟೇಪ್ ರೆಕಾರ್ಡರ್ ಕಟ್ಟಿರಲಿಲ್ಲ. ಹೀಗಾಗಿ ‘ಮುತ್ತಿನ ಬೆಟ್ಟ ಹೋಳಾದೀತಲೇ ಪರಾಕ್…’ ಎಂದು ಗೊರವಪ್ಪ ಹೇಳಿದ್ದಾರೆ ಎಂದು ಭಕ್ತರು ವಾದಿಸುತ್ತಿದ್ದುದು ಸಾಮಾನ್ಯವಾಗಿತ್ತು. ಹಾಗಾಗಿ, ಕಾರಣೀಕ ಕುರಿತು ಗೊಂದಲ ಉಂಟಾಗಿದೆ.