ಕರ್ನಾಟಕ

ರಾಜ್ಯದಲ್ಲಿ 57 ಲಕ್ಷ ಮಂದಿ ಬ್ಯಾಂಕ್‌ ‘ಜನಧನ’ ಖಾತೆ: ನಗದೇ ಇಲ್ಲ!

Pinterest LinkedIn Tumblr

pradhan

ಬೆಂಗಳೂರು: ಪ್ರಧಾನಮಂತ್ರಿ ಜನಧನ ಯೋಜನೆಯಡಿ ರಾಜ್ಯದಲ್ಲಿ 57 ಲಕ್ಷ ಮಂದಿ ಬ್ಯಾಂಕ್‌ ಖಾತೆ ತೆರೆದಿದ್ದಾರೆ. ಇವರಲ್ಲಿ ಶೇ 70ರಷ್ಟು ಜನರ ಬ್ಯಾಂಕ್‌ ಖಾತೆಗಳಲ್ಲಿ ನಗದೇ ಇಲ್ಲ!

‘ಪ್ರತಿಯೊಬ್ಬರೂ ಬ್ಯಾಂಕ್‌ ಖಾತೆ ಹೊಂದಿರಬೇಕೆನ್ನುವ ಉದ್ದೇಶದಿಂದ ಆಗಸ್ಟ್ 28ರಿಂದ ಆರಂಭವಾದ ಜನ­ಧನ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ಸಿಕ್ಕಿದ್ದು, ಶೇ 98.57ರಷ್ಟು ಪ್ರಗತಿ ಸಾಧಿಸಲಾಗಿದೆ’ ಎಂದು ಬ್ಯಾಂಕ­ರುಗಳ ಸಮಿತಿ ಸಂಚಾಲಕ ಪ್ರೀತಮ್‌ ಲಾಲ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಖಾತೆ ತೆರೆದಿರುವವರ ಪೈಕಿ ಶೇ 30ರಷ್ಟು ಮಂದಿಯ ಖಾತೆಗಳಲ್ಲಿ ಸುಮಾರು ₹235 ಕೋಟಿಯಷ್ಟು ಸಂಗ್ರಹ­­ವಾಗಿದೆ. ಇವರು ಆಗಾಗ್ಗೆ ಹಣ ತೆಗೆಯುವ ಮತ್ತು ಜಮಾ ಮಾಡುವ  ಪ್ರಕ್ರಿಯೆ ನಡೆಸುತ್ತಿದ್ದಾರೆ. ಉಳಿದ ಶೇ 70ರಷ್ಟು ಮಂದಿಯ ಖಾತೆಗಳಲ್ಲಿ ಹಣವೇ ಇಲ್ಲ. ಆದರೂ ನಾವು ಖಾತೆ­ಗಳನ್ನು ತೆರೆಯಲು ಪ್ರೋತ್ಸಾಹಿ­ಸು­ತ್ತಿದ್ದು, ಇದು ನೇರ ನಗದು ವರ್ಗಾ­ವಣೆ ಯೋಜನೆಗಳಿಗೆ ಅನುಕೂಲ ಆಗಲಿದೆ. ನಗದು ರಹಿತ ಖಾತೆಗಳಿಗೂ ಉತ್ತೇಜನ ನೀಡು­ತ್ತಿದ್ದೇವೆ’ ಎನ್ನುತ್ತಾರೆ ಪ್ರೀತಮ್‌.

‘2011ರ ಜನಗಣತಿ ಪ್ರಕಾರ ರಾಜ್ಯ­ದಲ್ಲಿ 1.32 ಕೋಟಿ ಮನೆಗಳಿವೆ. ಇವು­ಗಳಲ್ಲಿ 1.29 ಕೋಟಿ ಮನೆಗಳಿಗೆ ನಮ್ಮ ಸಿಬ್ಬಂದಿ ಖುದ್ದು ಭೇಟಿ ಕೊಟ್ಟು, ಬ್ಯಾಂಕ್‌ ಖಾತೆ ತೆರೆಯಲು ನೆರವಾ­ಗಿ­ದ್ದಾರೆ. ಬಹುತೇಕ ಪ್ರತಿಯೊಂದು ಮನೆಗೂ ಭೇಟಿ ನೀಡಿದ್ದೇವೆ. ಕೆಲವರು ಮನೆಗಳಲ್ಲಿ ಇಲ್ಲದಿರುವ ಮತ್ತೂ ಕೆಲ­ವರು ಬ್ಯಾಂಕ್‌ ಖಾತೆ ತೆರೆಯಲು ಆಸಕ್ತಿ ತೋರದ  ಕಾರಣ ಈ ವಿಷಯ­ದಲ್ಲಿ ಶೇಕಡಾ ನೂರರಷ್ಟು ಪ್ರಗತಿ ಸಾಧಿಸಲು ಸಾಧ್ಯವಾಗಿಲ್ಲ’ ಎಂದು ಅವರು ವಿವರಿಸುತ್ತಾರೆ.

‘ವಿವಿಧ ಹೆಸರಿನ 45 ಬ್ಯಾಂಕುಗಳ 9 ಸಾವಿರ ಶಾಖೆಗಳು ರಾಜ್ಯದಲ್ಲಿದ್ದು, ಪ್ರತಿ ಹಳ್ಳಿಯಲ್ಲೂ ವಿಶೇಷ ಶಿಬಿರ  ಆಯೋ­ಜಿಸಿ ಎಲ್ಲ­ರನ್ನೂ ಬ್ಯಾಂಕಿನತ್ತ ಕರೆತರುವ ಪ್ರಯತ್ನ ನಡೆಸಿದ್ದೇವೆ’ ಎಂದರು.

₹ 5,000ವರೆಗೆ ಸಾಲ: ಜನಧನ ಖಾತೆ ತೆರೆದ ನಂತರ ಅದರಲ್ಲಿ ನಿಯಮಿತವಾಗಿ ವಹಿವಾಟು ನಡೆಸುವ ಗ್ರಾಹಕರಿಗೆ ₹ 5 ಸಾವಿರದ ವರೆಗೆ ಸಾಲ ನೀಡುವ ಯೋಜನೆ ಇನ್ನೆರಡು ಮೂರು ದಿನಗಳಲ್ಲಿ ಆರಂಭವಾಗಲಿದೆ.

‘ಈ ಸಾಲಕ್ಕೆ ಯಾವುದೇ ಖಾತರಿ ಬೇಕಿಲ್ಲ. ಸಣ್ಣಪುಟ್ಟ ವ್ಯವಹಾರಗಳಿಗೂ ಈ ಹಣವನ್ನು ಬಳಸಿಕೊಳ್ಳಬಹುದು. ಮರುಪಾವತಿಗೆ ಮೂರು ವರ್ಷ ಸಮಯ ಇರುತ್ತದೆ. ಬಡ್ಡಿ ದರದಲ್ಲಿ ಯಾವುದೇ ರಿಯಾಯಿತಿ ಇಲ್ಲ’ ಎಂದು ಬ್ಯಾಂಕರುಗಳ ಸಮಿತಿಯ ಸಹಾಯಕ ಪ್ರಧಾನ ವ್ಯವಸ್ಥಾಪಕ ಶ್ರೀಹರಿ ತಿಳಿಸಿದರು.

ರುಪೇ ಕಾರ್ಡ್‌ಗೂ 1 ಲಕ್ಷ ವಿಮೆ: ಕೇವಲ ದೇಶದೊಳಗೆ ಬಳಸಲು ಅನುಕೂಲ ಆಗುವ ಹಾಗೆ ‘ರುಪೇ’ ಹೆಸರಿನ ಎ.ಟಿ.ಎಂ ಕಾರ್ಡ್‌ ನೀಡುತ್ತಿದ್ದು, ಅದನ್ನು ಪಡೆದವರಿಗೆ ಒಂದು ಲಕ್ಷ ರೂಪಾಯಿವರೆಗೆ ಅಪಘಾತ ವಿಮೆ ಕಲ್ಪಿಸಲಾಗಿದೆ. ಈ ಕಾರ್ಡ್‌ ಅನ್ನು ಕನಿಷ್ಠ 45 ದಿನಕ್ಕೊಮ್ಮೆಯಾದರೂ ಬಳಕೆ ಮಾಡಿದರೆ ಮಾತ್ರ ವಿಮೆ ಚಾಲ್ತಿಯಲ್ಲಿ ಇರುತ್ತದೆ. ಈ ಕಾರಣದಿಂದ ರುಪೇ ಕಾರ್ಡ್‌ ಪಡೆದವರು ಬ್ಯಾಂಕಿನಲ್ಲಿರುವ ಹಣ ಎಷ್ಟು ಎಂಬುದನ್ನು ತಿಳಿಯುವ ಸಲುವಾದರೂ ಕನಿಷ್ಠ 45 ದಿನಕ್ಕೊಮ್ಮೆ ಎಟಿಎಂ ಕೇಂದ್ರಕ್ಕೆ ಭೇಟಿ ಕೊಡಬೇಕು ಎನ್ನುವ ಸಲಹೆಯನ್ನು ಶ್ರೀಹರಿ ನೀಡುತ್ತಾರೆ.

ಜನಧನ ಯೋಜನೆಯಡಿ ಖಾತೆ ತೆರೆದವರಿಗೂ ಒಂದು ಲಕ್ಷ ರೂಪಾಯಿವರೆಗೆ ಅಪಘಾತ ವಿಮೆ ಇರುತ್ತದೆ. ಖಾತೆ ಮತ್ತು ಎಟಿಎಂ ಕಾರ್ಡ್‌ ಎರಡೂ ಪಡೆದವರಿಗೆ ಒಂದು ವಿಮೆ ಮಾತ್ರ ಅನ್ವಯ ಆಗುತ್ತದೆ. ಖಾತೆ ತೆರೆದವರು ರುಪೇ ಎಟಿಎಂ ಕಾರ್ಡ್‌ಗಾಗಿ ಸಂಬಂಧಪಟ್ಟ ಬ್ಯಾಂಕುಗಳಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಅವರು ವಿವರಿಸುತ್ತಾರೆ.

Write A Comment