ಕರ್ನಾಟಕ

ತೆರೆಗೇರಿದ ಪೂರ್ಣಚಂದ್ರ ತೇಜಸ್ವಿಯವರ ಕಿರಗೂರಿನ ಗಯ್ಯಾಳಿಗಳು

Pinterest LinkedIn Tumblr

tejsi

ಪೂರ್ಣಚಂದ್ರ ತೇಜಸ್ವಿಯವರು ಬರೆದಿರುವ ‘ಕಿರಗೂರಿನ ಗಯ್ಯಾಳಿಗಳು’ ಕಥಾಸಂಕಲನವನ್ನು ಸಿನಿಮಾ ಮಾಡಲು ನಿರ್ದೇಶಕಿ ಸುಮನಾ ಕಿತ್ತೂರು ನಿರ್ಧರಿಸಿದ್ದು, ಇದಕ್ಕೆ ತೇಜಸ್ವಿಯವರ ಪತ್ನಿ ರಾಜೇಶ್ವರಿ ಅನುಮತಿಯನ್ನು ನೀಡಿದ್ದಾರೆ. ಚಿತ್ರದಲ್ಲಿ ಶ್ವೇತಾ ಶ್ರೀವಾತ್ಸವ್ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ದುನಿಯಾ ಸೂರಿ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಅಗ್ನಿ ಶ್ರೀಧರ್ ಚಿತ್ರಕ್ಕೆ ಸ್ಕ್ರಿಪ್ಟ್ ಬರೆಯುತ್ತಿದ್ದಾರೆ.

ಪೂರ್ಣ ಚಂದ್ರ ತೇಜಸ್ವಿಯವರ ಕತೆ, ಕಾದಂಬರಿಗಳೆಲ್ಲವೂ ಸಿನಿಮಾ ಮಾಡಲು ಅತ್ಯುತ್ತಮವಾದ ಕತೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಕಿರಗೂರಿನ ಗಯ್ಯಾಳಿಗಳು ಮನರಂಜನೆ, ಹಾಸ್ಯದಿಂದ ತುಂಬಿದೆ. ಹಳ್ಳಿಯಲ್ಲಿನ ಹೆಣ್ಣುಮಕ್ಕಳ ದಿನನಿತ್ಯದ ಹೋರಾಟ, ತಮ್ಮ ಸುತ್ತಲ ಬದುಕಿನಲ್ಲಿ ಪ್ರತಿಕ್ಷಣ ಅವರು ಗಟ್ಟಿತನದಿಂದ ಎದುರಿಸುವ ರೀತಿ ಕೃತಿಯ ಕಥಾವಸ್ತು. ತೇಜಸ್ವಿಯವರು ಇದನ್ನು ಬಹಳ ಸ್ವಾರಸ್ಯಕರವಾಗಿ ಕಟ್ಟಿಕೊಟ್ಟಿದ್ದಾರೆ.

ಕಳ್ಳರ ಸಂತೆ, ಎದೆಗಾರಿಕೆ ಚಿತ್ರಗಳಲ್ಲಿ ಭೂಗತ ಜಗತ್ತಿನ ಕತೆಯನ್ನು ಆಯ್ಕೆ ಮಾಡಿಕೊಂಡಿದ್ದ ಸುಮನಾ ಕಿತ್ತೂರು ಈ ಬಾರಿ ಹೊಸ ರೀತಿಯ ಕತೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ‘ರಾಜೇಶ್ವರಿ ಅವರನ್ನು ನಾನು ಕೇಳಿದಾಗ ಹೆಣ್ಣುಮಗಳೊಬ್ಬಳು ಸಿನಿಮಾ ಮಾಡ್ತಿದ್ದಾರೆ ಅಂತ ಬಹಳ ಸಂತೋಷದಿಂದ ಹಕ್ಕನ್ನು ನೀಡಿದ್ದಾರೆ. ಈ ಕತೆಗಳು ಹೇಗಿದೆ ಅಂದ್ರೆ, ಭಾರತದ ಯಾವುದೇ ಹಳ್ಳಿಯಲ್ಲಿ ನಡೆಯಬಹುದು. ಗಂಡಸರ ರಾಜಕೀಯ, ಸಣ್ಣತನ, ಆಸೆ ಆಕಾಂಕ್ಷೆಗಳಿಗೆ ಹೆಣ್ಣು ಪ್ರತಿಕ್ಷಣ ಗುರಿಯಾಗುತ್ತಿರುತ್ತಾಳೆ. ಒಂದು ಹಳ್ಳಿಯಲ್ಲಿ ಹೆಂಗಸರು ಇವರನ್ನು ಸಹಿಸಿಕೊಳ್ಳಬೇಕಾದ ಅನಿವಾರ್ಯತೆ, ಬದಲಾಯಿಸಲು ಪಡುವ ಕಷ್ಟವನ್ನು ಕತೆ ಬಿಂಬಿಸುತ್ತದೆ. ಅದು ನನಗೆ ಇಷ್ಟವಾಗಿದ್ದು’ ಎನ್ನುತ್ತಾರೆ ಸುಮನಾ. ಚಿತ್ರ ಸಧ್ಯದಲ್ಲೇ ಸೆಟ್ಟೇರಲಿದೆ. ಈ ಕಥಾ ಸಂಕಲನ ಈಗಾಗಲೇ ನಾಟಕವಾಗಿ ರೂಪಾಂತರಗೊಂಡು ಯಶಸ್ವಿ ರಂಗಪ್ರಯೋಗವಾಗಿದೆ.

ನಿರ್ಮಾಪಕರು, ನಿರ್ದೇಶಕರು ಬಹಳ ವರ್ಷಗಳಿಂದಲೂ ಸಿನಿಮಾ ಮಾಡುವ ಆಸೆಯಿಂದ ತೇಜಸ್ವಿಯವರ ಕತೆ, ಕಾದಂಬರಿಗಳ ಬೆನ್ನು ಹತ್ತಿದ್ದಾರೆ. ಒಂದು ದಶಕಕ್ಕೂ ಹೆಚ್ಚು ಕಾಲದಿಂದಲೂ ಜುಗಾರಿ ಕ್ರಾಸ್ ಕಾದಂಬರಿಯನ್ನು ಸಿನಿಮಾ ಮಾಡುತ್ತೇವೆಂದು ಹೇಳಿಕೊಂಡ ನಿರ್ದೇಶಕರು ಹಲವರು. ಆದರೆ, ತೇಜಸ್ವಿಯವರು ಬದುಕಿರುವವರೆಗೆ ಈ ಕಾದಂಬರಿಯ ಹಕ್ಕನ್ನು ನೀಡಲು ಮನಸ್ಸು ಮಾಡಿರಲಿಲ್ಲ. ಶಿವರಾಜ್‌ಕುಮಾರ್ ಅವರನ್ನು ಪ್ರಮುಖ ಪಾತ್ರಕ್ಕೆ ಆಯ್ಕೆ ಮಾಡಿಕೊಂಡು ಚಿತ್ರ ಮಾಡಲು ಮುಂದಾದವರೂ ಇದ್ದರು. ಆದ್ರೆ ಅದು ಕೈಗೂಡಿರಲಿಲ್ಲ. ಈಗ ಸುಮನಾ ಕಿತ್ತೂರು ಕಿರಗೂರಿನ ಗಯ್ಯಾಳಿಗಳು ಕಾದಂಬರಿಯ ಸಿನಿಮಾ ಮಾಡುವ ಹಕ್ಕನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ರಾಜೇಶ್ವರಿ ಪೂರ್ಣಚಂದ್ರ ತೇಜಸ್ವಿಯವರು ಮಹಿಳೆಯರ ಕತೆಯಾದ ಕಿರಗೂರಿನ ಗಯ್ಯಾಳಿಗಳನ್ನು ಹೆಣ್ಣುಮಗಳೇ ನಿರ್ದೇಶಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

ನಾನು ಮೂಲತಃ ಹಳ್ಳಿಯಿಂದ ಬಂದವಳು. ಹಾಗಾಗಿ ಈ ಕತೆ ಎಲ್ಲಾ ಕಾಲಕ್ಕೂ, ಎಲ್ಲಾ ಪ್ರದೇಶಕ್ಕೂ ಸಲ್ಲುವ ಕತೆ ಅನ್ನಿಸಿತು. ಇಲ್ಲಿರುವ ಹೆಣ್ಣುಮಕ್ಕಳಿಗೆ ಬೇಕಾದ ಅಂತಃಸತ್ವ ಈ ಕಾದಂಬರಿಯಲ್ಲಿ ಬರುವ ಹೆಣ್ಣುಗಳ ಕ್ಯಾರೆಕ್ಟರ್‌ನಲ್ಲಿದೆ. ಇದನ್ನು ಸಿನಿಮಾ ಮಾಡೋಕೆ ನನಗೆ ಬಹಳ ಸಂತೋಷವಾಗ್ತಿದೆ.
-ಸುಮನಾ ಕಿತ್ತೂರು, ನಿರ್ದೇಶಕಿ

ಸಿನಿಮಾ ಆಗಿರುವ ತೇಜಸ್ವಿ ಕೃತಿಗಳು
ತೇಜಸ್ವಿಯವರ ಅಬಚೂರಿನ ಪೋಸ್ಟಾಫೀಸು, ತಬರನ ಕತೆ, ಕುಬಿ ಮತ್ತು ಇಯಾಲ ಕೃತಿಗಳು ಈಗಾಗಲೇ ಸಿನಿಮಾ ಆಗಿವೆ. ಕುಬಿ ಮತ್ತು ಇಯಾಲ ಚಿತ್ರ ರಾಷ್ಟ್ರ ಪ್ರಶಸ್ತಿಯನ್ನೂ ಪಡೆದಿದೆ.

ಅಬಚೂರಿನ ಪೋಸ್ಟ್ ಆಫೀಸ್ ಚಿತ್ರವನ್ನು ಎನ್. ಲಕ್ಷ್ಮಿ ನಾರಾಯಣ್ ನಿರ್ದೇಶನ ಮಾಡಿದ್ದರು. ಗಿರಿಜಾ ಲೋಕೇಶ್, ರಮೇಶ್ ಭಟ್, ದಾಶರಥಿ ದೀಕ್ಷಿತ್ ಮತ್ತಿತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಈ ಚಿತ್ರಕ್ಕೆ ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರವಾಗಿ ರಾಷ್ಟ್ರ ಪ್ರಶಸ್ತಿ ನೀಡಲಾಗಿದೆ. ಅತ್ಯುತ್ತಮ ಚಿತ್ರವೆಂದು ರಾಜ್ಯ ಪ್ರಶಸ್ತಿಯನ್ನೂ ಗಳಿಸಿದೆ.

ತಬರನ ಕತೆಯನ್ನು ಗಿರೀಶ್ ಕಾಸರವಳ್ಳಿಯವರು ನಿರ್ದೇಶನ ಮಾಡಿದ್ದರು. ಇದರಲ್ಲಿ ಕಮಲಹಾಸನ್ ಸಹೋದರ ಚಾರು ಹಾಸನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರಕ್ಕೆ 1987ರಲ್ಲಿ ಸ್ವರ್ಣಕಮಲ ಪ್ರಶಸ್ತಿ ಪುರಸ್ಕರಿಸಲಾಗಿದೆ.

ಕುಬಿ ಮತ್ತು ಇಯಾಲ ಚಿತ್ರವನ್ನು ಸದಾನಂದ ಸುವರ್ಣ ನಿರ್ದೇಶನ ಮಾಡಿದ್ದರು. ಇದರಲ್ಲಿ ಕೂಡ ಚಾರುಹಾಸನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರಕ್ಕೆ ಕರ್ನಾಟಕ ರಾಜ್ಯ ಚಲನಚಿತ್ರ ಅತ್ಯುತ್ತಮ ಚಿತ್ರ ಪ್ರಶಸ್ತಿ ನೀಡಲಾಗಿದೆ.

Write A Comment