ಬೆಂಗಳೂರು: ‘ಅರ್ಕಾವತಿ ಬಡಾವಣೆಗಾಗಿ ಸ್ವಾಧೀನಪಡಿಸಿಕೊಂಡಿದ್ದ ಜಮೀನಿನಲ್ಲಿ 500ರಿಂದ 600 ಎಕರೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಡಿನೋಟಿಫೈ ಮಾಡಿದ್ದಾರೆ’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಿದ್ದರಾಮಯ್ಯ ಅವರು ‘ರೀ ಡು’ ಹೆಸರಿನಲ್ಲಿ ಡಿನೋಟಿಫಿಕೇಷನ್ ಮಾಡಿದ್ದಾರೆ. ಅವರು ಅಕ್ರಮದಲ್ಲಿ ಭಾಗಿಯಾಗಿರುವ ಬಗ್ಗೆ ನನ್ನ ಬಳಿ ದಾಖಲೆಗಳಿವೆ. ನಾನು ಖುದ್ದಾಗಿ ಹೋಗಿ ನ್ಯಾಯಮೂರ್ತಿ ಕೆಂಪಣ್ಣ ಆಯೋಗಕ್ಕೆ ಸಲ್ಲಿಸುತ್ತೇನೆ’ ಎಂದು ದಾಖಲೆಗಳನ್ನು ಪ್ರದರ್ಶಿಸಿದರು.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ (ಬಿಡಿಎ) ಅರ್ಕಾವತಿ ಬಡಾವಣೆ ನಿರ್ಮಾಣಕ್ಕೆ 3,339 ಎಕರೆ 12 ಗುಂಟೆ ಜಮೀನು ಸ್ವಾಧೀನಪಡಿಸಿಕೊಳ್ಳಲು 2003ರಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿತ್ತು. 2,750 ಎಕರೆ ಸ್ವಾಧೀನಕ್ಕೆ 2004ರಲ್ಲಿ ಅಂತಿಮ ಅಧಿಸೂಚನೆ ಹೊರಡಿಸಲಾಗಿತ್ತು. ಅದರಲ್ಲಿ ‘ರೀ ಡು’ ಹೆಸರಿನಲ್ಲಿ 984 ಎಕರೆ ಜಮೀನನ್ನು ಡಿನೋಟಿಫೈ ಮಾಡಲಾಗಿದೆ. ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಈ ಅಕ್ರಮಕ್ಕೆ ನಾಂದಿ ಹಾಡಲಾಯಿತು. ಸಿದ್ದರಾಮಯ್ಯ ಅವರು ಅಂತಿಮ ಆದೇಶ ಹೊರಡಿಸಿದ್ದಾರೆ ಎಂದು ಆರೋಪ ಮಾಡಿದರು.
ಯಡಿಯೂರಪ್ಪ ಕಾಲದಲ್ಲೇ ಡಿನೋಟಿಫಿಕೇಷನ್ ಕಡತ ಸೃಷ್ಟಿಯಾಯಿತು. ನಂತರ ಮುಖ್ಯಮಂತ್ರಿಯಾದ ಡಿ.ವಿ.ಸದಾನಂದ ಗೌಡ ಅವರು ಅಡ್ವೊಕೇಟ್ ಜನರಲ್ ಅಭಿಪ್ರಾಯ ಕೇಳಿ ಕಡತ ಕಳುಹಿಸಿದ್ದರು. ಆ ಬಳಿಕ ಮುಖ್ಯಮಂತ್ರಿ ಆದ ಜಗದೀಶ ಶೆಟ್ಟರ್ ಡಿನೋಟಿಫಿಕೇಷನ್ ಆದೇಶ ಹೊರಡಿಸಲು ಪ್ರಯತ್ನಿಸಿದ್ದರು. ಯಡಿಯೂರಪ್ಪ ಪರ ಅಧಿಕಾರಿಗಳು ಸಹಿ ಹಾಕಲು ನಿರಾಕರಿಸಿದ್ದರಿಂದ ಪ್ರಕ್ರಿಯೆ ಅರ್ಧಕ್ಕೆ ನಿಂತಿತ್ತು. ಸಿದ್ದರಾಮಯ್ಯ ಈ ಕಡತಕ್ಕೆ ಸಹಿಮಾಡಿ, ಡಿನೋಟಿಫಿಕೇಷನ್ ಆದೇಶ ಹೊರಡಿಸಿದರು ಎಂದರು.
ಆರು ಮಾರ್ಗಸೂಚಿಗಳನ್ನು ಆಧರಿಸಿ 2004ರ ಅಂತಿಮ ಅಧಿಸೂಚನೆಗೂ ಮುನ್ನ ಜಮೀನುಗಳ ಸ್ಥಿತಿಗತಿ ಕುರಿತ ವರದಿ ಸಿದ್ಧಪಡಿಸಿ ‘ರೀ ಡು’ ಮಾಡುವಂತೆ ಹೈಕೋರ್ಟ್ ವಿಭಾಗೀಯ ಪೀಠ ಆದೇಶಿಸಿತ್ತು. ಸುಪ್ರೀಂಕೋರ್ಟ್ ಕೂಡ ಅದನ್ನು ಎತ್ತಿಹಿಡಿದಿತ್ತು. ನ್ಯಾಯಾಲಯದ ಆದೇಶದ ಪ್ರಕಾರ 140 ಎಕರೆಯನ್ನು ಮಾತ್ರ ಅಧಿಸೂಚನೆಯಿಂದ ಕೈಬಿಡಲು ಸಾಧ್ಯ ಇತ್ತು. 2006ರ ಮೇ ತಿಂಗಳಿನಲ್ಲಿ ಬಿಡಿಎ ಆಡಳಿತ ಮಂಡಳಿಯೇ ಈ ಬಗ್ಗೆ ನಿರ್ಣಯ ಕೈಗೊಂಡಿತ್ತು ಎಂದು ಕಡತ ಪ್ರದರ್ಶಿಸಿದರು.
‘ಯಡಿಯೂರಪ್ಪ ಅಧಿಕಾರಕ್ಕೆ ಬಂದ ಬಳಿಕ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ಗಳ ಆದೇಶಗಳನ್ನು ದುರ್ಬಳಕೆ ಮಾಡಿಕೊಳ್ಳುವ ಕೆಲಸ ಆರಂಭವಾಯಿತು. ನ್ಯಾಯಾಲಯ ನಿಗದಿಪಡಿಸಿದ ಮಾರ್ಗಸೂಚಿಗಳ ವ್ಯಾಪ್ತಿಗೆ ಬಾರದಿರುವ ಜಮೀನುಗಳನ್ನೂ ಅಧಿಸೂಚನೆಯಿಂದ ಕೈಬಿಡುವ ಕಡತಗಳು ಸಿದ್ಧವಾದವು. ಅಂತಿಮವಾಗಿ 984 ಎಕರೆಯನ್ನು ಡಿನೋಟಿಫೈ ಮಾಡಿ 2014ರ ಜೂನ್ 18ರಂದು ಅಧಿಸೂಚನೆ ಹೊರಡಿಸಲಾಗಿದೆ. ಬಿಡಿಎ ಖದೀಮ ಅಧಿಕಾರಿಗಳು ಸೇರಿಕೊಂಡು ಈ ಅಕ್ರಮ ಎಸಗಿದ್ದಾರೆ’ ಎಂದು ದೂರಿದರು.
‘ಸಿದ್ದರಾಮಯ್ಯ ಅವರು ಮಾತೆತ್ತಿದರೆ ‘ರೀ ಡು’ ಎಂಬ ಸಮಜಾಯಿಷಿ ನೀಡುತ್ತಾರೆ. ಆದರೆ, ಅವರು ಮಾಡಿದ್ದು ‘ರೀ ಡು’ ಅಲ್ಲ; ಡಿನೋಟಿಫಿಕೇಷನ್. ಭೂಸ್ವಾಧೀನ ಕಾಯ್ದೆಯ ಸೆಕ್ಷನ್ 48(1)ರಲ್ಲಿ 984 ಎಕರೆ ಡಿನೋಟಿಫೈ ಮಾಡಲಾಗಿದೆ ಎಂಬ ಉಲ್ಲೇಖವೇ ಅಧಿಸೂಚನೆಯಲ್ಲಿದೆ. ‘ರೀ ಡು’ ಎಲ್ಲಿದೆ? ಯಾವ ಕಾನೂನಿನ ಅಡಿ ಅದು ನಡೆದಿದೆ ಎಂಬುದನ್ನು ಮುಖ್ಯಮಂತ್ರಿ ಅಥವಾ ಕಾನೂನು ಸಚಿವ ಟಿ.ಬಿ. ಜಯಚಂದ್ರ ತಿಳಿಸಬೇಕು’ ಎಂದು ಕುಮಾರಸ್ವಾಮಿ ಆಗ್ರಹಿಸಿದರು.
ರಾಜೀನಾಮೆಗೆ ಆಗ್ರಹ: ‘ತಾನು ಒಂದು ಇಂಚು ಜಮೀನನ್ನೂ ಡಿನೋಟಿಫೈ ಮಾಡಿಲ್ಲ ಎಂದು ಮುಖ್ಯಮಂತ್ರಿ ಹೇಳುತ್ತಿದ್ದಾರೆ. ಅವರು ಇಂಚು ಜಮೀನನ್ನು ಡಿನೋಟಿಫೈ ಮಾಡಿಲ್ಲ. ನೂರಾರು ಎಕರೆ ಡಿನೋಟಿಫೈ ಮಾಡಿದ್ದಾರೆ. ₨ 600 ಕೋಟಿಗೂ ಹೆಚ್ಚು ಭ್ರಷ್ಟಾಚಾರ ನಡೆದಿದೆ. ಸಿದ್ದರಾಮಯ್ಯ ಅವರಿಗೆ ನೈತಿಕತೆ ಇದ್ದರೆ ತಕ್ಷಣವೇ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಬೇಕು’ ಎಂದು ಒತ್ತಾಯಿಸಿದರು.
ಬಿಡಿಎ ಮತ್ತು ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು ದಾಖಲೆ ನೀಡುತ್ತಿಲ್ಲ ಎಂದು ನ್ಯಾ.ಕೆಂಪಣ್ಣ ಆಯೋಗ ದೂರಿದೆ. ಮುಖ್ಯಮಂತ್ರಿಯವರು ತಪ್ಪು ಮಾಡಿಲ್ಲ ಎಂದಾದರೆ ದಾಖಲೆ ನೀಡಲು ಏಕೆ ಅಡ್ಡಿಪಡಿಸಲಾಗುತ್ತಿದೆ? ಯಾವ ಕಾರಣಕ್ಕೆ ಹೆದರುತ್ತಿದ್ದಾರೆ? ಮುಖ್ಯಮಂತ್ರಿ ರಕ್ಷಣೆಗಾಗಿ ಅಧಿಕಾರಿಗಳು ಕಡತ ನಾಶ ಮಾಡುತ್ತಿದ್ದಾರಾ? ದಾಖಲೆಗಳನ್ನು ತಿದ್ದುತ್ತಿದ್ದಾರಾ? ಎಂದು ಪ್ರಶ್ನಿಸಿದರು.
ಧಮ್ಕಿ ಹಾಕಿ ದಾಖಲೆ ಪಡೆದೆ: ‘ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕೇಳಿದರೆ ಅಧಿಕಾರಿಗಳು ಸತಾಯಿಸಿದರು. ದಾಖಲೆ ಕೊಡಲು ಮುಖ್ಯಮಂತ್ರಿಯವರ ಅಪ್ಪಣೆ ಬೇಕು ಎಂದರು. ಕಡೆಗೂ ಧಮ್ಕಿ ಹಾಕಿದಾಗ ದಾಖಲೆಗಳು ನನ್ನ ಕೈಗೆ ಬಂದವು’ ಎಂದು ಹೇಳಿದರು. ಸರ್ಕಾರದ ಕಡೆಯಿಂದ ವಿಚಾರಣಾ ಆಯೋಗಕ್ಕೆ ಸಹಕಾರ ದೊರೆಯುತ್ತಿಲ್ಲ. ಒಬ್ಬ ಪ್ರಜ್ಞಾವಂತ ನಾಗರಿಕನಾಗಿ ತಮ್ಮ ಬಳಿ ಇರುವ ಎಲ್ಲ ದಾಖಲೆಗಳನ್ನೂ ಒಂದು ವಾರದೊಳಗೆ ಆಯೋಗಕ್ಕೆ ಸಲ್ಲಿಸುವುದಾಗಿ ತಿಳಿಸಿದರು.
ತಪ್ಪು ಮಾಹಿತಿ
‘ನಾನು ಮುಖ್ಯಮಂತ್ರಿ ಆಗಿದ್ದಾಗ 140 ಎಕರೆ ಡಿನೋಟಿಫೈ ಮಾಡಿದ್ದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಈ ಕಾರಣಕ್ಕಾಗಿಯೇ ಇಷ್ಟು ದಿನ ಸುಮ್ಮನಿದ್ದ ನಾನು ಈಗ ಪ್ರತಿಕ್ರಿಯೆ ನೀಡಿದ್ದೇನೆ. ನಾನು 140 ಎಕರೆ ಡಿನೋಟಿಫೈ ಮಾಡಿಲ್ಲ. ಆ ತೀರ್ಮಾನ ಬಿಡಿಎ ಆಡಳಿತ ಮಂಡಳಿಯದ್ದು. ಆ ಕಡತದಲ್ಲಿ ಎಲ್ಲಿಯೂ ನನ್ನ ಸಹಿ ಇಲ್ಲ. ನಾನು 3 ಎಕರೆ 17 ಗುಂಟೆ ಜಮೀನನ್ನು ಮಾತ್ರ ಡಿನೋಟಿಫೈ ಮಾಡಿದ್ದೆ’ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದರು. ನ್ಯಾಯಾಂಗ ತನಿಖೆಯಿಂದ ಸತ್ಯಾಂಶ ಹೊರಬರುವ ವಿಶ್ವಾಸ ಇಲ್ಲ. ಸಿಐಡಿ ತನಿಖೆಯೂ ಪ್ರಯೋಜನ ಆಗದು. ಈ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಬೇಕು ಎಂದು ಒತ್ತಾಯಿಸಿದರು.
ಅರ್ಕಾವತಿ: ಸಿಬಿಐ ತನಿಖೆ ಇಲ್ಲ–ಸಿ.ಎಂ
ಬೆಂಗಳೂರು: ‘ಅರ್ಕಾವತಿ ಬಡಾ ವಣೆ ನಿರ್ಮಾಣಕ್ಕೆ ಸ್ವಾಧೀನಪಡಿಸಿ ಕೊಂಡ ಜಮೀನಿನ ಡಿನೋಟಿಫಿಕೇಷನ್ ಕುರಿತು ನ್ಯಾಯಾಂಗ ವಿಚಾರಣೆ ನಡೆಯುತ್ತಿದೆ. ಸಿಬಿಐ ತನಿಖೆಗೆ ವಹಿಸುವ ಪ್ರಶ್ನೆಯೇ ಇಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಆರೋಪ ಕುರಿತು ಸೋಮವಾರ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಅವರು, ‘ನ್ಯಾಯಾಂಗ ವಿಚಾರಣೆ ಪ್ರಗತಿಯಲ್ಲಿದೆ. ಈಗ ನಾನು ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ. ‘ನಾನು ಒಂದು ಗುಂಟೆ ಜಮೀನನ್ನೂ ಡಿನೋಟಿಫೈ ಮಾಡಿಲ್ಲ ಎಂಬ ಹೇಳಿಕೆಗೆ ಬದ್ಧ. ಯಾವ ತಪ್ಪನ್ನೂ ಮಾಡಿಲ್ಲ. ನ್ಯಾಯಾಂಗ ನಿಂದನೆ ಪ್ರಕರಣ ತಪ್ಪಿಸಿಕೊಳ್ಳಲು ‘ರೀಡು’ ಮಾಡಲಾಗಿದೆ. ಯಾವುದೇ ರೀತಿ ಅಕ್ರಮಗಳೂ ನಡೆದಿಲ್ಲ’ ಎಂದು ತಿಳಿಸಿದರು.