ಕರ್ನಾಟಕ

ತಿಪ್ಪೆ ಸಂಸ್ಕರಣೆ ಆಂದೋಲನ ಆರಂಭ

Pinterest LinkedIn Tumblr

pvec18jan15gdg1

ನರಗುಂದ (ಗದಗ ಜಿಲ್ಲೆ): ಧಾರವಾಡ ಕೃಷಿ ವಿಶ್ವ­ವಿದ್ಯಾಲಯ ಸಂಶೋಧನೆ ಮಾಡಿರುವ ಸೂಕ್ಷ್ಮ ಜೀವಾಣುಗಳನ್ನು (ಕಲ್ಚರ್‌) ತಿಪ್ಪೆಗಳಿಗೆ ಸೇರಿಸಿ ಸತ್ವಭರಿತ ಕಾಂಪೋಸ್ಟ್‌ ಗೊಬ್ಬರವನ್ನಾ­ಗಿಸುವ ‘ತಿಪ್ಪೆ ಸಂಸ್ಕರಣೆ ಆಂದೋಲನ’ಕ್ಕೆ ಜಿಲ್ಲೆಯಲ್ಲಿ ವಿಧ್ಯುಕ್ತವಾಗಿ ಚಾಲನೆ ನೀಡಲಾಯಿತು.

ಧಾರವಾಡ ಕೃಷಿ ವಿಶ್ವವಿದ್ಯಾನಿಲಯ ಸಹ­ಯೋಗದಲ್ಲಿ ತಾಲ್ಲೂಕಿನ ಕಣಕಿ­ಕೊಪ್ಪ ಗ್ರಾಮ­ದಲ್ಲಿ ಶನಿವಾರ ಗ್ರಾಮೀಣಾ­ಭಿವೃದ್ಧಿ ಮತ್ತು ಪಂಚಾ­ಯತ್‌ ರಾಜ್‌ ಸಚಿವ ಎಚ್‌.ಕೆ.­ಪಾಟೀಲ ತಿಪ್ಪೆಗೆ ಸೂಕ್ಷ್ಮ ಜೀವಾಣು  ಸಿಂಪಡಿಸಿ ಚಾಲನೆ ನೀಡಿದರು.

ಜಿಲ್ಲೆಯ ನರಗುಂದ ತಾಲ್ಲೂಕಿನ 30, ರೋಣ ಹಾಗೂ ಗದಗ ತಾಲ್ಲೂಕಿನ ತಲಾ ಹತ್ತು ಗ್ರಾಮ­ಗಳು ಸೇರಿದಂತೆ ಒಟ್ಟು 50 ಹಳ್ಳಿಗಳಲ್ಲಿ ಏಕ­ಕಾಲಕ್ಕೆ ತಿಪ್ಪೆ ಸಂಸ್ಕರಣೆ ಕೈಗೊಳ್ಳಲು ಕೃಷಿ ವಿಶ್ವ­ವಿದ್ಯಾಲಯ ಐದು ಟನ್‌ ಸೂಕ್ಷ್ಮ ಜೀವಾಣು­ಗಳನ್ನು ಉಚಿತವಾಗಿ ನೀಡಿದೆ.

ಬಳಿಕ ನಡೆದ ಕಾರ್ಯಕ್ರಮದಲ್ಲಿ ಮಾತನಾ-­ಡಿದ ಸಚಿವ ಪಾಟೀಲ, ದೇಶದಲ್ಲಿಯೇ ಪ್ರಥಮ ಬಾರಿಗೆ ನರಗುಂದ ತಾಲ್ಲೂಕಿನಲ್ಲಿ ತಿಪ್ಪೆ ಸಂಸ್ಕರಣೆ ಆಂದೋಲನ ಅನುಷ್ಠಾನಗೊಳಿಸಲಾಗುತ್ತಿದೆ. ಇದ­ರಿಂದ ರೈತರಿಗೆ ಆದಾಯ ಬರುವುದರ ಜತೆಗೆ ಉತ್ತಮ ಗೊಬ್ಬರ ದೊರೆಯುತ್ತದೆ. ಜತೆಗೆ ನಿರ್ಮಲ ಗ್ರಾಮವಾಗಲಿದೆ. ಸರಿಯಾದ ರೀತಿ­ಯಲ್ಲಿ ರೈತರು ಇದನ್ನು ಬಳಸಿಕೊಂಡರೆ ಹಳ್ಳಿಗಳ ಚಿತ್ರಣವೇ ಬದಲಾಗಲಿದೆ.

ತಿಪ್ಪೆ ಸಂಸ್ಕರಣೆ ಮಾಡಲು ಒಂದು ಕಕೆ.ಜಿ ಸೂಕ್ಷ್ಮ ಜೀವಾಣುವನ್ನು ನೀರಿನಲ್ಲಿ ಸೆಗಣಿಯೊಂದಿಗೆ ಬೆರಸಿದ ದ್ರಾವಣ­ವನ್ನು ಘನತ್ಯಾಜ್ಯದ ಮೇಲೆ ಹಾಕಬೇಕು. ಘನತ್ಯಾಜ್ಯದ ರಾಶಿಗಳಿಗೆ ಬ್ಯಾಕ್ಟೀರಿಯಾಗಳನ್ನು ಸೇರಿಸುವ ಮೂಲಕ ಅದನ್ನು ಗೊಬ್ಬರವನ್ನಾಗಿ ಪರಿವರ್ತನೆ ಮಾಡಲಾಗುವುದು. ಒಂದು ಕೆ.ಜಿ. ಸೂಕ್ಷ್ಮ ಜೀವಾಣುವಿಗೆ ₨ 60 ಪಾವತಿಸಬೇಕು. ಸೂಕ್ಷ್ಮ ಜೀವಾಣು ಖರೀದಿಸಲು ರೈತರಿಗೆ ತೊಂದ­ರೆಯಾಗದಂತೆ ಮುಖ್ಯಮಂತ್ರಿ ಸಿದ್ದ­ರಾಮಯ್ಯ ಜತೆ ಚರ್ಚಿಸಿ ಅನುದಾನ ಬಿಡುಗಡೆ ಮಾಡಲು ಪ್ರಯತ್ನಿಸು­ವುದಾಗಿ ಭರವಸೆ ನೀಡಿದರು.

ತಾಲ್ಲೂಕಿನ ಬೆಳ್ಳಿರಿಯಲ್ಲಿ 140 ಎಕರೆ ಕೃಷಿ ಫಾರ್ಮ್‌ನಲ್ಲಿ  ಕೃಷಿ ಪಾಲಿಟೆಕ್ನಿಕ್‌ ಆರಂಭಿಸ­ಬೇಕೆಂಬ ಶಾಸಕ ಬಿ.ಆರ್‌.ಯಾವಗಲ್ ಮನವಿಗೆ ಸ್ಪಂದಿಸಿದ ಸಚಿವರು, ಮುಖ್ಯಮಂತ್ರಿ ಜತೆ ಚರ್ಚಿಸಿ ಪ್ರಸಕ್ತ ವರ್ಷದಿಂದಲೇ ಕಾಲೇಜು ಆರಂಭಿಸಲು ಒತ್ತಾಯಿಸ ಲಾಗುವುದು ಎಂದು ತಿಳಿಸಿದರು. ಧಾರವಾಡ ಕೃಷಿ ವಿಶ್ವವಿದ್ಯಾಲಯ ಕುಲಪತಿ ಡಾ.ಡಿ.ಪಿ.ಬಿರಾದರ ಮಾತನಾಡಿದರು.

ತಿಪ್ಪೆ ಸಂಸ್ಕರಣಾ ವಿಧಾನ
ಪ್ರತಿ 2 ಟನ್‌ ತಿಪ್ಪೆ ಸಂಸ್ಕರಣಕ್ಕೆ ಒಂದು ಕೆ.ಜಿ ಸೂಕ್ಷ್ಮಜೀವಾಣುವನ್ನು 15 ಲೀಟರ್‌ ನೀರಿನಲ್ಲಿ 3–4 ಕೆ.ಜಿಯಷ್ಟು ಸೆಗಣಿಯೊಂದಿಗೆ ಕಲಿಸಿ ದ್ರಾವಣವನ್ನು ತಿಪ್ಪೆ ಮೇಲೆ ಸಿಂಪಡಿಸಬೇಕು. ತಿಪ್ಪೆಯಲ್ಲಿ ಶೇಕಡಾ 60ರಷ್ಟು ತೇವಾಂಶ ಇರುವಂತೆ  ನೋಡಿಕೊಳ್ಳಬೇಕು. ಪ್ರತಿ 10–15 ದಿನಕ್ಕೊಮ್ಮೆ  ಒಂದು ಬಕೆಟ್‌ನಷ್ಟು ನೀರನ್ನು ಸಿಂಪಡಿಸಬೇಕು. ಈ ರೀತಿ ಮಾಡುವುದರಿಂದ ತಿಪ್ಪೆಯು 60 ರಿಂದ 90 ದಿನಗಳಲ್ಲಿ ಸತ್ವಭರಿತ ಕಾಂಪೋಸ್ಟ್‌ ಗೊಬ್ಬರವಾಗಿ ರೂಪುಗೊಳ್ಳುತ್ತದೆ.

Write A Comment