ಬೆಂಗಳೂರು: ಹೈದರಾಬಾದ್, ಚೆನ್ನೈ ಸ್ಫೋಟ ಪ್ರಕರಣದ ಆರೋಪಿಗಳಿಗೂ ಹಾಗೂ ನಗರ ಪೊಲೀಸರು ಬಂಧಿಸಿರುವ ಇಂಡಿಯನ್ ಮುಜಾಹಿದ್ದೀನ್ (ಐ.ಎಂ) ಭಯೋತ್ಪಾದನಾ ಸಂಘಟನೆಯ ಶಂಕಿತ ಉಗ್ರರಿಗೂ ನಂಟಿರುವುದು ತನಿಖೆಯಿಂದ ಬಹಿರಂಗವಾಗಿದೆ.
ಬಂಧಿತ ಸೈಯದ್ ಇಸ್ಮಾಯಿಲ್ ಅಫಕ್, ಅಬ್ದುಸ್ ಸಬೂರ್ ಮತ್ತು ಸದ್ದಾಂ ಹುಸೇನ್ ಅವರನ್ನು ಪೊಲೀಸರು ಮಡಿವಾಳದ ವಿಶೇಷ ತನಿಖಾ ಘಟಕದಲ್ಲಿ ಶನಿವಾರವಿಡೀ ವಿಚಾರಣೆಗೆ ಒಳಪಡಿಸಿದರು. ಈ ವೇಳೆ ಬಂಧಿತರು, ದೇಶದ ವಿವಿಧೆಡೆ ಸಂಭವಿಸಿದ ಸ್ಫೋಟ ಪ್ರಕರಣಗಳಲ್ಲಿ ತಮ್ಮ ಪಾತ್ರವಿರುವುದನ್ನು ಒಪ್ಪಿಕೊಂಡಿರುವುದಾಗಿ ತನಿಖಾಧಿಕಾರಿಗಳು ಹೇಳಿದ್ದಾರೆ.
2013ಫೆ.21ರಂದು ಹೈದರಾಬಾದ್ನ ದಿಲ್ಸುಖ್ನಗರದಲ್ಲಿ ಅವಳಿ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ 12 ಮಂದಿ ಮೃತಪಟ್ಟು, 80 ಮಂದಿ ಗಾಯಗೊಂಡಿದ್ದರು.
2014ರ ಮೇ 1ರಂದು ಚೆನ್ನೈ ರೈಲು ನಿಲ್ದಾಣದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮಹಿಳೆ ಮೃತಪಟ್ಟು, 14 ಮಂದಿ ಗಾಯಗೊಂಡಿದ್ದರು.
‘ಈ ಎರಡೂ ಪ್ರಕರಣಗಳಲ್ಲಿ ಬಂಧಿಸಲಾಗಿರುವ ಉಗ್ರರ ಜತೆ ಸಂಪರ್ಕ ಇತ್ತು. ಆದರೆ, ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿಲ್ಲ ಎಂದು ಆರೋಪಿಗಳು ಹೇಳಿದ್ದಾರೆ’ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದರು.
‘2010ರಿಂದ ಐ.ಎಂ ಜತೆ ಗುರುತಿಸಿಕೊಂಡಿದ್ದೇನೆ. ದುಬೈನಲ್ಲಿರುವ ಸಂಘಟನೆಯ ಮುಖಂಡನ ಅಣತಿಯಂತೆ ಕೆಲಸ ಮಾಡಿದ್ದೇನೆ. ಸಂಘಟನೆ ಸದಸ್ಯರಿಗೆ ಸ್ಫೋಟಕ ವಸ್ತುಗಳನ್ನು ಪೂರೈಕೆ ಮಾಡಿದ್ದನ್ನು ಬಿಟ್ಟರೆ, ನೇರವಾಗಿ ಯಾವುದೇ ಕೃತ್ಯಗಳಲ್ಲೂ ಭಾಗಿಯಾಗಿಲ್ಲ ಎಂದು ಅಫಕ್ ವಿಚಾರಣೆ ವೇಳೆ ಹೇಳಿದ್ದಾನೆ’ ಎಂದರು
ಯುಎಇಯಿಂದ ಸೂಚನೆ: ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿರುವ (ಯುಎಇ) ಸುಲ್ತಾನ್ ಅಹಮ್ಮದ್ ಅಲಿಯಾಸ್ ಅಬ್ದುಲ್ಲಾ ಸುಲ್ತಾನ್ ಎಂಬಾತ ಆರೋಪಿಗಳಿಗೆ ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸಲು ಸೂಚನೆ ನೀಡುತ್ತಿದ್ದ ಎಂದು ಉನ್ನತ ಪೊಲೀಸ್ ಮೂಲಗಳು ಹೇಳಿವೆ.
ಸುಲ್ತಾನ್, ಅನ್ಸರ್–ಉಲ್–ತವ್ಹೇದ್ ಭಯೋತ್ಪಾದನಾ ಸಂಘಟನೆಗೆ ಸದಸ್ಯರನ್ನು ನೇಮಿಸುವ ಕೆಲಸ ಮಾಡುತ್ತಾನೆ. ಮೂಲತಃ ಭಟ್ಕಳದ ಆತ ಅಲ್ಕೈದಾ ಸಂಘಟನೆಯ ತರಬೇತಿ ಶಿಬಿರದಲ್ಲಿ ಭಾಗಿಯಾಗಿದ್ದ. ಅನ್ಸರ್–ಉಲ್–ತವ್ಹೇದ್ ಸಂಘಟನೆಯು ಐ.ಎಂ ಮತ್ತು ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದನಾ ಸಂಘಟನೆಗಳನ್ನು ಒಳಗೊಂಡಿದೆ ಎಂದು ಮೂಲಗಳು ತಿಳಿಸಿವೆ.
ಎಫ್ಎಸ್ಎಲ್ ವರದಿ ಬಂದಿಲ್ಲ
‘ಸೈಯದ್ ಇಸ್ಮಾಯಿಲ್ ಅಫಕ್ ಆಗಾಗ್ಗೆ ಪಾಕಿಸ್ತಾನಕ್ಕೆ ಹೋಗಿ ಬರುತ್ತಿದ್ದ ಎಂಬುದು ತನಿಖೆಯಿಂದ ಗೊತ್ತಾಗಿದೆ. ಸಬೂರ್ ಮತ್ತು ಸದ್ದಾಂ ವಿದೇಶಕ್ಕೆ ಹೋಗಿರುವ ಮಾಹಿತಿ ಇಲ್ಲ. ಚರ್ಚ್ಸ್ಟ್ರೀಟ್ ಸ್ಫೋಟ ಪ್ರಕರಣದಲ್ಲಿ ಇವರ ಪಾತ್ರವಿರುವ ಬಗ್ಗೆ ಈವರೆಗೆ ಖಚಿತ ಮಾಹಿತಿ ಸಿಕ್ಕಿಲ್ಲ. ಬಂಧಿತರಿಂದ ವಶ ಪಡಿಸಿಕೊಂಡಿರುವ ಸ್ಫೋಟಕ ವಸ್ತುಗಳನ್ನು ಎಫ್ಎಸ್ಎಲ್ಗೆ ಕಳುಹಿಸಲಾಗಿದೆ. ಅಲ್ಲಿನ ತಜ್ಞರು ಈವರೆಗೂ ಯಾವುದೇ ವರದಿ ನೀಡಿಲ್ಲ’
– ಎಂ.ಎನ್.ರೆಡ್ಡಿ, ಬೆಂಗಳೂರು ಪೊಲೀಸ್ ಕಮಿಷನರ್