ಕರ್ನಾಟಕ

ಕೊಪ್ಪಳದ ಗವಿಮಠದ ಮಹಾರಥೋತ್ಸವಕ್ಕೆ ಸಾಲು­ಮರದ ತಿಮ್ಮಕ್ಕನಿಗೆ ಉದ್ಘಾಟನೆ ಗೌರವ

Pinterest LinkedIn Tumblr

koppala

ಕೊಪ್ಪಳ: ನಗರದ ಸಂಸ್ಥಾನ ಗವಿಮಠದ ಜಾತ್ರೆಯ ಮಹಾರಥೋತ್ಸವಕ್ಕೆ ಸಾಲು­ಮರದ ತಿಮ್ಮಕ್ಕ ಬುಧವಾರ ಚಾಲನೆ ನೀಡಿ ಉತ್ಸವದ ವಿಶಿಷ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದರು. ಜತೆಗೆ ಮೊದಲ ಬಾರಿಗೆ ಮಹಿಳೆ­ಯೊಬ್ಬರು ಇಲ್ಲಿನ ರಥೋತ್ಸವವನ್ನು ಉದ್ಘಾಟಿಸಿದ ಗೌರವಕ್ಕೆ ಪಾತ್ರರಾದರು.

ಮಠದ ಮುಂಭಾಗ ಸಂಜೆ 5.48ಕ್ಕೆ ತಿಮ್ಮಕ್ಕ ಧ್ವಜಾರೋಹಣ ಮಾಡಿದ ತಕ್ಷಣ ಲಕ್ಷಾಂತರ ಭಕ್ತರ ಜಯ­ಘೋಷದ ನಡುವೆ ಗವಿಸಿದ್ದೇಶ್ವರ ಸ್ವಾಮಿಯ ರಥ ಮಠದ ಮುಂಭಾಗದ ಮೈದಾನದ ಪಾದಗಟ್ಟೆ­ಯವರೆಗೆ ಸಾಗಿ ವಾಪಸಾಯಿತು. ಸುಮಾರು ಐದು ಲಕ್ಷ ಭಕ್ತರು ಉತ್ಸವದಲ್ಲಿ ಪಾಲ್ಗೊಂಡಿ­ದ್ದರು.

ಬಳಿಕ ಸುದ್ದಿಗಾರರೊಂದಿಗೆ ಮಾತ­ನಾಡಿದ ತಿಮ್ಮಕ್ಕ, ‘ಇಂಥ ಮಹಾ ಉತ್ಸವ­ವನ್ನು ಎಲ್ಲಿಯೂ ಕಂಡಿಲ್ಲ. ಮೊದಲ ಬಾರಿಗೆ ಭಾಗವಹಿಸುತ್ತಿದ್ದೇನೆ. ಮಠಗಳು ಗಿಡಮರ ನೆಡುವ ಕಾಯಕ­ದಲ್ಲಿ ಇನ್ನೂ ತೊಡಗಿ­ಕೊಳ್ಳಲಿ. ಪ್ರತಿ­ಯೊ­ಬ್ಬರೂ ತಮ್ಮ ಮನೆಯ ಮುಂದೆ ಒಂದೊಂದು ಗಿಡ ನೆಟ್ಟು ಬೆಳೆಸಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ’ ಎಂದು ಹೇಳಿದರು.

ನಿಡಸೋಸಿ ಸಿದ್ಧಸಂಸ್ಥಾನಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ‘ಸಾಲು ಮರದ ತಿಮ್ಮಕ್ಕ ಅವರನ್ನು ಕರೆಸಿ ರಥೋತ್ಸವ ಉದ್ಘಾ­ಟಿಸಿ­ರುವುದು ಅರ್ಥಪೂರ್ಣ. ಇದರಿಂದ ತಾಯಿಯನ್ನು ಕರೆಸಿ ಧ್ವಜಾರೋಹಣ ಮಾಡಿದಂತಾಗಿದೆ’ ಎಂದು ಬಣ್ಣಿಸಿದರು.

ಉದ್ಘಾಟನೆಗೂ ಮುನ್ನ ತಿಮ್ಮಕ್ಕ ಅವರನ್ನು ಮಠದಿಂದ ಉದ್ಘಾಟನಾ ಸ್ಥಳಕ್ಕೆ ಮೆರವಣಿಗೆಯಲ್ಲಿ ಕರೆತರ­ಲಾಯಿತು.

Write A Comment