ಬೆಂಗಳೂರು: ವಿಷ ಕುಡಿದು ಅಸ್ವಸ್ಥಗೊಂಡಿದ್ದ ಕಾಂಗ್ರೆಸ್ ವಿದ್ಯಾರ್ಥಿ ವಿಭಾಗದ (ಎನ್ಎಸ್ಯುಐ) ರಾಜ್ಯ ಘಟಕದ ಅಧ್ಯಕ್ಷ ಎಸ್.ವಿ.ಸಿದ್ದವೀರ (28) ಮಂಗಳವಾರ ಕೊನೆಯುಸಿರೆಳೆದರು.
ಮೂಲತಃ ಕನಕಪುರದ ಅವರು ಎಂಟು ತಿಂಗಳಿನಿಂದ ಚಂದ್ರಾ ಲೇಔಟ್ ಸಮೀಪದ ಬೈರವೇಶ್ವರನಗರದಲ್ಲಿ ನೆಲೆಸಿದ್ದರು. ಜ.2ರ ರಾತ್ರಿ ಮನೆಯಲ್ಲೇ ವಿಷ ಕುಡಿದಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು.
‘ನನ್ನ ಸಾವಿಗೆ ಯಾರೂ ಕಾರಣರಲ್ಲ’ ಎಂದು ಅವರು ಪತ್ರ ಬರೆದಿಟ್ಟಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ಏನು ಎನ್ನುವುದು ಕುಟುಂಬದವರಿಗೂ ಗೊತ್ತಾಗಿಲ್ಲ.
‘ಜ.2ರ ರಾತ್ರಿ 8.30ಕ್ಕೆ ಕರೆ ಮಾಡಿದ್ದ ಸಿದ್ದವೀರ, ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ. ಆಗ ನಾಗರ-ಬಾವಿಯಲ್ಲಿದ್ದ ನಾನು, ಗಾಬರಿಯಿಂದ ಆತನ ಮನೆಗೆ ತೆರ-ಳಿದೆ. ನೆಲದ ಮೇಲೆ ಬಿದ್ದು ಒದ್ದಾಡುತ್ತಿದ್ದ ಗೆಳೆಯನನ್ನು ಆಸ್ಪತ್ರೆಗೆ ದಾಖಲಿಸಿದೆ’ ಎಂದು ಮೃತರ ಸ್ನೇಹಿತ ಪ್ರವೀಣ್ ಹೇಳಿದರು.
‘ಎಂ.ಎ, ಎಲ್ಎಲ್ಬಿ ಓದಿದ್ದ ಸಿದ್ದವೀರ, ಎರಡು ವರ್ಷಗಳಿಂದ ಎನ್ಎಸ್ಯುಐ ಸಂಘಟನೆಯಲ್ಲಿ ಸಕ್ರಿಯರಾಗಿದ್ದರು. ಅವರ ತಂದೆ ವೀರಣ್ಣಗೌಡ ಕನಕಪುರ ಗ್ರಾಮ ಪಂಚಾಯ್ತಿಯ ಸದಸ್ಯರು.