ಹಾಸನ: ತಾಲ್ಲೂಕಿನ ತಿರುಪತಿಹಳ್ಳಿಯ ಜನರಲ್ಲಿ ಭಯ ಮೂಡಿಸಿದ್ದ ಮೂರರಲ್ಲಿ ಒಂದು ಚಿರತೆಯು ಅರಣ್ಯ ಇಲಾಖೆಯವರು ಇಟ್ಟಿದ್ದ ಬೋನಿಗೆ ಸೋಮವಾರ ಬಿದ್ದಿದೆ.
ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಚಿರತೆಯನ್ನು ಬೋನಿನ ಸಮೇತ ನಗರದ ಗೆಂಡೆಕಟ್ಟೆ ಅರಣ್ಯಕ್ಕೆ ತಂದಿದ್ದಾರೆ. ‘ಚಿರತೆಯನ್ನು ರಕ್ಷಿತಾರಣ್ಯಕ್ಕೆ ಬಿಡಲಾಗುವುದು. ಇನ್ನೂ 2 ಚಿರತೆಗಳನ್ನು ಹಿಡಿಯಲು ಬೋನುಗಳನ್ನು ಇಡಲಾಗುವುದು’ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
……………………………….
ಪ್ರತಿರೋಧಕ್ಕೆ ಚಿರತೆ ಪರಾರಿ
ಬೆಳಗಾವಿ: ಖಾನಾಪುರ ತಾಲ್ಲೂಕಿನ ಕವಲಾಪುರವಾಡಾ ಗ್ರಾಮದ ಹೊರವಲಯದಲ್ಲಿ ಭಾನುವಾರ ಸಂಜೆ ಹಸುವಿನ ಮೇಲೆ ದಾಳಿ ನಡೆಸಿ ಗಾಯಗೊಳಿಸಿದ ಚಿರತೆಯು ಜಾನುವಾರುಗಳು ದಾಳಿಗೆ ಮುಂದಾದಾಗ ಬೆದರಿ ಅರಣ್ಯಕ್ಕೆ ಪರಾರಿಯಾಗಿದೆ.
‘ಗ್ರಾಮದ ಹೊರವಲಯದಲ್ಲಿ ಮೇವು ತಿನ್ನುತ್ತಿದ್ದ ಹಸುವಿನ ಮೇಲೆ ಚಿರತೆ ದಾಳಿ ನಡೆಸಿದೆ. ಇದರ ಜೊತೆಗಿದ್ದ ಇತರೆ ಜಾನುವಾರುಗಳು ಓಡಿ ಹೋಗಿದ್ದು, ಮತ್ತೆ ಒಟ್ಟಾಗಿ ಮರಳಿದ ಜಾನುವಾರುಗಳು ದಾಳಿಗೆ ಮುಂದಾದುದರಿಂದ ಹಸುವನ್ನು ಬಿಟ್ಟು ಚಿರತೆ ಅರಣ್ಯದತ್ತ ಓಡಿ ಹೋಯಿತು’ ಎಂದು ಹಸುವಿನ ಮಾಲೀಕ ತಿಳಿಸಿದ್ದಾರೆ.
‘ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಹಸುವಿನ ಮೇಲೆ ದಾಳಿ ನಡೆಸಿದ್ದು ಚಿರತೆಯೇ ಹೊರತು, ಹುಲಿ ಅಲ್ಲ’ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಚಿರತೆ ದಾಳಿಯಿಂದ ಬೆಳಗಾವಿ ತಾಲ್ಲೂಕಿನ ತೀರ್ಥಕುಂಡೆ, ಕವಲಾಪುರವಾಡಾ ಹಾಗೂ ಸುತ್ತಲಿನ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.
ಚಿರತೆ ದಾಳಿಗೆ ಮೇಕೆ, ಕರು ಸಾವು: ಚಿರತೆ ದಾಳಿಗೆ ಮೇಕೆ ಮತ್ತು ಸೀಮೆಹಸುವಿನ ಕರು ಬಲಿಯಾಗಿರುವ ಘಟನೆ ಮಂಡ್ಯ ಜಿಲ್ಲೆಯ ಹಲಗೂರು ತಾಲ್ಲೂಕಿನ ಕೊನ್ನಾಪುರ ಗ್ರಾಮದಲ್ಲಿ ಭಾನುವಾರ ಸಂಜೆ ನಡೆದಿದೆ. ಗ್ರಾಮದ ನಿಂಗೇಗೌಡ ಅವರ ಮೇಕೆ ಮತ್ತು ನಾಗರಾಜು ಅವರ ಸೀಮೆ ಹಸುವಿನ ಕರುವನ್ನು ಚಿರತೆ ತಿಂದು ಹಾಕಿದೆ. ಕರಡಹಳ್ಳಿ ಗುಡ್ಡೆಯಿಂದ ಬಂದ ಚಿರತೆ ಸಾಕುಪ್ರಾಣಿಗಳ ಮೇಲೆ ದಾಳಿ ನಡೆಸಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.