ಬೆಂಗಳೂರು, ಡಿ.26: ಯುವತಿಯ ಸರ ಕಿತ್ತುಕೊಂಡು ಪರಾರಿಯಾಗುತ್ತಿದ್ದ ಕಳ್ಳನನ್ನು ಕೇವಲ ಅರ್ಧಗಂಟೆಯಲ್ಲೇ ಪೊಲೀಸರು ಬಂಧಿಸಿರುವ ಘಟನೆ ಕಾಮಾಕ್ಷಿಪಾಳ್ಯದಲ್ಲಿ ನಡೆದಿದೆ. ಹೂವಪ್ಪ ಎಂಬುವರ ಪುತ್ರಿ ಚಂದ್ರಕಲಾ ಅವರು ಸಂಬಂಧಿಕರ ಮನೆಗೆ ಹೋಗಿ ರಾತ್ರಿ 9.45ರಲ್ಲಿ ಮನೆಗೆ ವಾಪಸ್ ಬರುವಾಗ ಹಿಂದಿನಿಂದ ವ್ಯಕ್ತಿಯೊಬ್ಬ ಅವರ ಕೊರಳಲಿದ್ದ ಸುಮಾರು 15 ಗ್ರಾಂನ ಚಿನ್ನದ ಸರವನ್ನು ಕಿತ್ತುಕೊಂಡು ಓಡಿಹೋಗಿದ್ದ. ತಕ್ಷಣ ಚಂದ್ರಕಲಾ ಕಾಮಾಕ್ಷಿಪಾಳ್ಯ ಠಾಣೆಗೆ ದೂರವಾಣಿ ಮೂಲಕ ವಿಷಯ ಮುಟ್ಟಿಸಿದ್ದಾರೆ.
ತಕ್ಷಣ ಜಾಗೃತರಾದ ಎಸಿಪಿ ಹಾಗೂ ಇನ್ಸ್ಪೆಕ್ಟರ್ ಬಾಳೇಗೌಡ ಅವರ ತಂಡ ನಾಕಾಬಂದಿ ಮಾಡಿ ಕೇವಲ 30 ನಿಮಿಷದಲ್ಲೇ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಮುನಿರಾಜು ಎಂಬುವನನ್ನು ವಶಕ್ಕೆ ಪಡೆದಿದ್ದಾರೆ.
ನಂತರ ವಿಚಾರಿಸಿದಾಗ ಆತನೇ ಚಂದ್ರಕಲಾ ಅವರ ಸರ ಕಳವು ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೇ ವೇಳೆ ಸುಂಕದಕಟ್ಟೆಯಲ್ಲಿ ರಾತ್ರಿ 1 ಗಂಟೆಯಲ್ಲಿ ಪುಂಡರ ಗುಂಪೊಂದು ಶ್ರೀನಿವಾಸನಗರದಲ್ಲಿ ವಾಹನಗಳ ಖಂಜಂಗೊಳಿಸುತ್ತಿರುವ ಬಗ್ಗೆ ಕರೆ ಬಂದಿತ್ತು. ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು ಸತೀಶ್(21) ಹಾಗೂ ರಂಜಿತ್(22) ಎಂಬುವರನ್ನು ಬಂಧಿಸಿದ್ದಾರೆ. ಮತ್ತೊಬ್ಬ ಪರಾರಿಯಾಗಿದ್ದಾನೆ.