ವರದಿ : ಈಶ್ವರ ಎಂ. ಐಲ್
ಮುಂಬಯಿ : ವಡಾಲದ ಶ್ರೀ ರಾಮ ಮಂದಿರ ಸೇವಕ ಸಂಘ ಸಾರಸ್ವತ ಜನಾಂಗದ ಭಕ್ತಿ-ಶ್ರದ್ಧಾ ಕೇಂದ್ರ. 2015 ಜನವರಿಯಲ್ಲಿ ವಿದ್ಯಾಮಾನ ಗೋಕರ್ಣ ಮಠಾಧೀಶ ಶ್ರೀಮದ್ ವಿದ್ಯಾಧಿರಾಜ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ತನ್ನ ಸುವರ್ಣ ವರ್ಷವನ್ನಾಚರಿಸಲು ಸಿದ್ದವಾಗಿದೆ.
ಕಳೆದ ಐದು ದಶಮಾನಗಳಿಂದ ಹಲವಾರು ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ನಡೆಸುತ್ತಾ ಬಂದಿರುವ ವಡಾಲದ ಮಠ – ದ್ವಾರಕನಾಥ ಭವನ, ಶ್ರೀರಾಮ ಮಂದಿರ ವಡಾಲಾ ಮಹಾರಾಷ್ಟ್ರದ ಅಯೋದ್ಯೆ ಎಂದೇ ಖ್ಯಾತಿಯಾಗಿದೆ. ಆಧ್ಯಾತ್ಮಿಕ ಚಟುವಟಿಕೆಗಳೊಂದಿಗೆ ಇಲ್ಲಿ ಸಕ್ರಿಯವಾಗಿರುವ ರಾಮ ಸೇವಕರು ಒಂದು ಗೂಡಿ ಸಾಂಸ್ಕೃತಿಕ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವರು. ಪರಮಪೂಜ್ಯ ಮಠಾಧೀಶ ಶ್ರೀಮದ್ ವಿದ್ಯಾಧಿರಾಜತೀರ್ಥ ಶ್ರೀಪಾದಂಗಳವರ ಅನುಗ್ರಹದೊಂದಿಗೆ ಸಾರಸ್ವತ ಜನಾಂಗದ ಮೂಲ ಬಾಷೆ ಕೊಂಕಣಿಯಲ್ಲಿ ಹಲವಾರು ಗುಣ ಮಟ್ಟದ ನಾಟಕಗಳನ್ನು ಮುಂಬಯಿ ಮಹಾನಗರ ಉಪನಗರಗಳಲ್ಲಿ ಮಾತ್ರವಲ್ಲದೆ ಕರ್ನಾಟಕ ಹಾಗೂ ದೇಶದ ವಿವಿದೆಡೆ ಪ್ರದರ್ಶಿಸಿ ಕಲಾಭಿಮಾನಿಗಳ ಪ್ರಶಂಸೆಗೆ ಪಾತ್ರವಾಗಿದೆ. ಈ ತಂಡದಲ್ಲಿ 40 ರಿಂದ 50 ಮಂದಿ ಅನುಭವೀ ಕಲಾವಿದರಿದ್ದಾರೆ. ಬಿಡುವಿನ ಸಮಯದಲ್ಲಿ, ಶನಿವಾರ ಹಾಗೂ ರವಿವಾರ ಈ ಕಲಾಭಿಮಾನಿಗಳು ರಂಗ ತರಬೇತಿ ಪಡೆಯುತ್ತಿರುವರು.
ಖ್ಯಾತ ನಾಟಕಕಾರ, ದಿಗ್ದರ್ಶಕ ಎ. ಜಿ. ಕಾಮತ್ ರ ಗರಡಿಯಲ್ಲಿ ಮತ್ತು ಲಿಮ್ಕಾ ಖ್ಯಾತಿಯ ನಾಟಕಕಾರ ಡಾ. ಚಂದ್ರಶೇಖರ ಶೆಣೈ ಯವರ ಮಾರ್ಗದರ್ಶನದಲ್ಲಿ’ವಿಸರಾ ವಿಸರಿ’ ಹಾಸ್ಯಮಯ ನಾಟಕ ವನ್ನು ರಾಮಸೇವಕ ಸಂಘದ ಕಲಾವಿದರು ವಡಾಲಾ ಮಠ ಮತ್ತು ಇತರೆಡೆಗಳಲ್ಲಿ ಯಶಸ್ವಿಯಾಗಿ ಪ್ರದರ್ಶಿಸಿದರು. ನಂತರ ’ಸರ್ವಜನಾಹ ಕಾಂಚನ ಮಾಶ್ರೀಯಂದೇ’ ಮುಂಬಯಿ ಹಾಗೂ ಉಪನಗರಗಳಲ್ಲಿ ಎಲ್ಲರ ಮೆಚ್ಚುಗೆ ಪಡೆಯಿತು. ಸಂಸ್ಥೆಯ ಹಿರಿಯ ಕಲಾವಿದರುಗಳಾದ ಎ.ಜಿ. ಕಾಮತ್, ಕಮಲಾಕ್ಷ ಸರಾಫ್, ವಿಜಯಶ್ರೀ ಕಾಮತ್, ಹರಿ ಶಾನ್ ಬಾಗ್, ಅಶೋಕ್ ಪ್ರಭು, ವಿನಯಾ ಪ್ರಭು, ಸುರೇಶ್ ಕಿಣಿ, ಹರೀಶ್ ಚಂದಾವರ್ ಮೊದಲಾದವರ ಅಭಿನಯ ಪ್ರಸಂಶನೀಯ.
ಮುಖ್ಯವಾಗಿ ಹಾಸ್ಯ ನಾಟಕಗಳಿಂದ ಕಲಾಭಿಮಾನಿಗಳ ಗಮನ ಸೆಳೆಯುತ್ತಿರುವ ಈ ತಂಡವು ಕಾಸರಕೋಡ್ ಬಾಲಕೃಷ್ಣ ಪುರಾಣಿಕರು ರಚಿಸಿದ ’ಲಗ್ನ ಪಿಸ್ಚೆ’ ಈಗಾಗಲೇ ಮುಂಬಯಿ ಮತ್ತು ಉಪನಗರಗಳಲ್ಲಿ ಮಾತ್ರವಲ್ಲದೆ ತವರೂರಲ್ಲೂ ಹಲವಾರು ಪ್ರದರ್ಶನಗಳನ್ನು ಕಂಡಿದೆ.
ಬಹುಮುಖ ಪ್ರತಿಭೆಯ ಹಿರಿಯ ಕಲಾವಿದ ಕಮಲಾಕ್ಷ ಸರಾಫ್, ಹರಿ ಶ್ಯಾನುಭಾಗ್, ಎ.ಜಿ. ಕಾಮತ್, ವಸುಧಾ ಪ್ರಭು, ಸುರೇಶ ಕಿಣಿ, ಹರೀಶ ಚಂದಾವರ್, ಮಮತಾ ಭಟ್, ವೆಂಕಟೇಸ ಶೆಣೈ ಇವರು ಪ್ರಮುಖ ಪಾತ್ರವನ್ನು ನಿರ್ವಹಿಸಿ ಕಲಾಭಿಮಾನಿಗಲ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಡಾ. ಚಂದ್ರಶೇಖರ ಶೆಣೈ, ಶಾಂತಾರಾಮ ಮಹಾಲೆ, ಅನಂತ ಅಮ್ಮೆಂಬಳ, ಶ್ರೀಕಾಂತ ಪ್ರಭು ಮತ್ತಿತರು ನೇಪಥ್ಯದಲ್ಲಿ ಸಹಕರಿಸುತ್ತಿರುವರು. ಲಗ್ನಾ ಪಿಶೈ ನಾಟಕಕ್ಕೆ ಬೇಡಿಕೆಗಳು ನಿರೀಕ್ಷೆಗಿಂತಲೂ ಮೀರಿತು. ಬೆಂಗಳೂರು, ಹುಬ್ಬಳ್ಳಿ, ದ. ಕನ್ನಡ, ಉತ್ತರ ಕನ್ನಡ, ದೆಹಲಿ, ಬೆಳಗಾಂ, ಉಡುಪಿ ಜಿಲ್ಲೆ, ಹೈದರಬಾದ್, ಮುಂಬಯಿ ಹಾಗೂ ಉಪನಗರಗಳಿಂದ ನಾಟಕದ ಮರು ಪ್ರದರ್ಶನಕ್ಕೆ ಬೇಡಿಕೆಗಳು ಬರುತ್ತಿದೆ.
ಕಿರುನಾಟಕಗಳಾದ ಭಾರಿ ಬಯ್ಯಾನಿ ಒಟ್ಟು ಜಾಲ್ಯಾರಿ, ಅಬಲಾ-ಸಬಲಾ, ನಿಶ್ರೆ ಮುಲ್ಲೆಈ ತಂಡದ ಇತರ ಯಶಸ್ವೀ ನಾಟಕಗಳಲ್ಲಿ ಕೆಲವು.
ಈ ತಂಡದ ಯಶಸ್ಸಿಗೆ ಅನೇಕ ಸಂಘಟನೆಗಳು, ಎನ್. ಎಸ್. ಕಾಮತ್ ರಂತಹ ಗಣ್ಯರು, ಶ್ರೀ ರಾಮ ಮಂದಿರದ ಸದಸ್ಯರು, ಪದಾಧಿಕಾರಿಗಳು ಎನ್. ಕೆ. ಜಿ. ಎಸ್. ಬಿ. ಅಸೋಷಿಯೇಶನ್ ಹಾಗೂ ಇತರರು ಸದಾ ಪ್ರೋತ್ಸಾಹ ನೀಡುತ್ತಿರುವರು. ಇತ್ತೀಚೆಗೆ ಹೊಸ ನಾಟಕ ಏಕ್ ಆಶ್ಮ್ಮಿಯೋ ರಾಯಿ ನಾಟಕವು ಉತ್ತಮ ಪ್ರದರ್ಶನ ನೀಡಿದೆ. ಭವಿಷ್ಯದಲ್ಲಿ ಶ್ರೀ ರಾಮ ಸೇವಕ ಸಂಘ ವಡಾಲ ಇವರಿಂದ ಅನೇಕ ಉತ್ತಮ ನಾಟಕಗಳನ್ನು ಅಪೇಕ್ಷಿಸೋಣ.