ಬೆಂಗಳೂರು: ರೈಲು ಪ್ರಯಾಣಿಕರು ಇನ್ನು ಮುಂದೆ ನಗರ ವಿಭಾಗದ ರೈಲ್ವೆ ಕುರಿತ ಯಾವುದೇ ಕುಂದುಕೊರತೆಗಳು ಮತ್ತು ದೂರುಗಳನ್ನು ಫೇಸ್ಬುಕ್ ಇಲ್ಲವೇ ಟ್ವಿಟರ್ ಮುಖಾಂತರ ದಾಖಲಿಸಬಹುದು.
ನಗರ ಕೇಂದ್ರ ರೈಲು ನಿಲ್ದಾಣದಲ್ಲಿ ಗುರುವಾರ ನೈರುತ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕ (ಬೆಂಗಳೂರು ವಲಯ) ಅನಿಲ್ ಕುಮಾರ್ ಅಗರವಾಲ್ ಅವರು ‘South Western Railway Bangalore Division’ ಫೇಸ್ಬುಕ್ ಖಾತೆ ಮತ್ತು ‘@swrbangalore’ ಟ್ವಿಟರ್ ಖಾತೆಗೆ ಚಾಲನೆ ನೀಡುವ ಮೂಲಕ ‘ಉತ್ತಮ ಆಡಳಿತ ದಿನ’ವನ್ನು ಆಚರಿಸಿದರು. ರೈಲು ಸಂಚಾರದ ಹೊರಾಂಗಣ ಮಾಹಿತಿ ಫಲಕಕ್ಕೂ ಅವರು ಚಾಲನೆ ನೀಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅನಿಲ್ ಕುಮಾರ್, ‘ಇಲಾಖೆಯನ್ನು ಪ್ರಯಾಣಿಕ ಸ್ನೇಹಿಗೊಳಿಸುವ ನಿಟ್ಟಿನಲ್ಲಿ ಅನೇಕ ಮಾಹಿತಿ ತಂತ್ರಜ್ಞಾನದ ಉಪಕ್ರಮಗಳನ್ನು ಅಳವಡಿಸಿಕೊಂಡಿದ್ದೇವೆ. ಜತೆಗೆ ಆನ್ಲೈನ್ ಟಿಕೆಟ್ ಕಾಯ್ದಿರಿಸುವ ಐಆರ್ಸಿಟಿಸಿ ಜಾಲತಾಣವನ್ನು ಉನ್ನತೀಕರಿಸಿ ವೇಗವನ್ನು ಹೆಚ್ಚಿಸಲಾಗಿದೆ. ಈ ಹಿಂದೆ ಪ್ರತಿದಿನ ಮೂರು ಲಕ್ಷ ಜನರು ಆನ್ಲೈನ್ ಟಿಕೇಟ್ ಕಾಯ್ದಿರಿಸುತ್ತಿದ್ದರು. ಅದರ ಸಂಖ್ಯೆ ಇದೀಗ ಐದು ಲಕ್ಷಕ್ಕೆ ಏರಿಕೆಯಾಗಿದೆ’ ಎಂದರು.
‘ಕಳೆದ ನವೆಂಬರ್ನಲ್ಲಿ ನಗರ ಕೇಂದ್ರ ರೈಲು ನಿಲ್ದಾಣದಲ್ಲಿ ‘ವೈಫೈ’ ಸೇವೆಗೆ ಚಾಲನೆ ನೀಡಲಾಗಿದೆ. ಇದೀಗ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ನಿಲ್ದಾಣದ ಮುಂಭಾಗದಲ್ಲಿ ರೈಲು ಸಂಚಾರದ ಹೊರಾಂಗಣ ಮಾಹಿತಿ ಫಲಕವನ್ನು ಸ್ಥಾಪಿಸಲಾಗಿದೆ. ಸಾರ್ವಜನಿಕರು ತಮ್ಮ ಕುಂದುಕೊರತೆಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಇಲಾಖೆಗೆ ತಲುಪಿಸಿ ಪರಿಹಾರ ಪಡೆಯಲಿ ಎನ್ನುವ ಉದ್ದೇಶದಿಂದ ಇದೀಗ ಫೇಸ್ಬುಕ್ ಮತ್ತು ಟ್ವಿಟರ್ ಖಾತೆಗಳನ್ನು ತೆರೆಯಲಾಗಿದೆ’ ಎಂದರು.
‘ನಗರ ರೈಲು ನಿಲ್ದಾಣದಲ್ಲಿ ಸುಧಾರಿತ ಟಿಕೆಟ್ ಕಾಯ್ದಿರಿಸುವ ಸೇವೆಗೆ ಈಗಾಗಲೇ ಚಾಲನೆ ನೀಡಲಾಗಿದೆ. ಈ ವ್ಯವಸ್ಥೆಯಲ್ಲಿ ಗ್ರಾಹಕರು ವಿವಿಧ ರೈಲುಗಳಲ್ಲಿ ಮುಂದಿನ 60 ದಿನಗಳಲ್ಲಿ ಖಾಲಿ ಇರುವ ಸೀಟುಗಳ ಮಾಹಿತಿಯನ್ನು ಪರಿಶೀಲಿಸಬಹುದಾಗಿದೆ’ ಎಂದು ತಿಳಿಸಿದರು.
‘ಸ್ವಚ್ಛ ಭಾರತ ಅಭಿಯಾನದಡಿ ರೈಲು ನಿಲ್ದಾಣಗಳಲ್ಲಿ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಶೌಚಾಲಯ, ಕಸದ ಡಬ್ಬಿಗಳು ಮತ್ತು ಕುಡಿಯುವ ನೀರಿನ ವ್ಯವಸ್ಥೆ ಸುಧಾರಿಸಲಾಗಿದೆ’ ಎಂದು ಹೇಳಿದರು.