ಬೆಂಗಳೂರು: ನಗರದಲ್ಲಿ ಬುಧವಾರ ಸಂಜೆಯಿಂದ ಮತ್ತೆ ಹತ್ತು ಕಡೆ ಸರಣಿ ಸರಗಳವು ಪ್ರಕರಣಗಳು ನಡೆದಿವೆ.
ಬುಧವಾರ ಸಂಜೆ ಆರು ಗಂಟೆಗೆ ನಾಗರಬಾವಿಯಲ್ಲಿ ವಿದ್ಯಾ ಎಂಬುವರಿಂದ 20 ಗ್ರಾಂ ಸರ ದೋಚಿ ಬೈಕ್ನಲ್ಲಿ ಪರಾರಿಯಾದ ದುಷ್ಕರ್ಮಿಗಳು, ನಂತರ ಸಮೀಪದ ನಮ್ಮೂರು ತಿಂಡಿ ಹೋಟೆಲ್ ಬಳಿ ಮಂಜುಳಾ ಎಂಬುವರಿಂದ, ಕೋಕನಟ್ ಗಾರ್ಡನ್ನಲ್ಲಿ ಸುವರ್ಣಲತಾ ಎಂಬುವರಿಂದ ಹಾಗೂ ಮಾಳಗಾಳದ ರಾಮಕೃಷ್ಣ ಬಡಾವಣೆಯಲ್ಲಿ ಸುನಂದಾ ಎಂಬುವರಿಂದ ಸರಗಳನ್ನು ದೋಚಿದ್ದಾರೆ. ಜ್ಞಾನಭಾರತಿ ಠಾಣೆಯಲ್ಲಿ ಈ ನಾಲ್ಕೂ ಪ್ರಕರಣಗಳು ದಾಖಲಾಗಿವೆ.
ಅದೇ ರೀತಿ ದುಷ್ಕರ್ಮಿಗಳು ಚಂದ್ರಲೇಔಟ್ನಲ್ಲಿ ಲಲಿತಾ ಬಾಯಿ ಎಂಬುವರಿಂದ 35 ಗ್ರಾಂನ ಚಿನ್ನದ ಸರ ದೋಚಿದ್ದಾರೆ. ಚನ್ನಮ್ಮನಕೆರೆ ಅಚ್ಚುಕಟ್ಟು ಸಮೀಪದ ಪಿಇಎಸ್ ಕಾಲೇಜು ವಸತಿ ನಿಲಯದ ಬಳಿ ಯಶೋಧಮ್ಮ ಅವರ 30 ಗ್ರಾಂ ಸರ ಹಾಗೂ ಗಿರಿನಗರದಲ್ಲಿ ಗಾಯಿತ್ರಿ ಎಂಬುವರ ಸರ ಕಿತ್ತುಕೊಂಡು ಹೋಗಿದ್ದಾರೆ. ರಾತ್ರಿ 9 ಗಂಟೆಗೆ ಗಿರಿನಗರದಲ್ಲಿ ಉದ್ಯಮಿಯೊಬ್ಬರ ಪತ್ನಿಯಿಂದ 60 ಗ್ರಾಂನ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಕಾಮಾಕ್ಷಿಪಾಳ್ಯ: ಮಾಗಡಿ ರಸ್ತೆಯ ಕೊಟ್ಟಿಗೇಪಾಳ್ಯದಲ್ಲಿ ಖಾಸಗಿ ಕಂಪೆನಿಯ ಮಹಿಳಾ ಉದ್ಯೋಗಿಯಿಂದ ಕಿಡಿಗೇಡಿಗಳು 40 ಗ್ರಾಂನ ಸರ ದೋಚಿದ್ದಾರೆ. ಎಚ್ಎಸ್್ಆರ್ ಲೇಔಟ್ ಬಳಿ ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಮಹಿಳೆಯೊಬ್ಬರಿಂದ 25 ಗ್ರಾಂ ಚಿನ್ನದ ಸರ ದೋಚಿ ಪರಾರಿಯಾಗಿದ್ದಾರೆ.
ಕಳ್ಳರ ಪತ್ತೆಗೆ ಏಳು ವಿಶೇಷ ತಂಡ ರಚನೆ
ಬೆಂಗಳೂರು: ನಗರದಲ್ಲಿ ಸರಗಳವು ಪ್ರಕರಣಗಳು ಹೆಚ್ಚುತ್ತಿರುವುದರಿಂದ ಮಹಿಳೆಯರು ಮತ್ತು ಸಾರ್ವಜನಿಕರು ಆತಂಕಗೊಂಡಿದ್ದಾರೆ. ಹೀಗಾಗಿ ಸರಗಳವು ಪ್ರಕರಣಗಳನ್ನು ನಿಯಂತ್ರಿಸಲು ನಗರ ಪೊಲೀಸರು ಕಮಿಷನರೇಟ್ ವ್ಯಾಪ್ತಿಯಲ್ಲಿ ಏಳು ಪ್ರತ್ಯೇಕ ವಿಶೇಷ ತಂಡಗಳನ್ನು ರಚಿಸಿದ್ದಾರೆ.
ಸರಗಳವು ತಡೆಗೆ ನವೆಂಬರ್ನಲ್ಲಿ ವಿಶೇಷ ಮಾರ್ಗಸೂಚಿಗಳನ್ನು ಸಿದ್ಧಪಡಿಸಿದ್ದ ಹಿರಿಯ ಅಧಿಕಾರಿಗಳು, ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಎಲ್ಲ ಸಿಬ್ಬಂದಿಗೆ ಆದೇಶಿಸಿದ್ದರು. ಆದರೆ ಮಂಗಳವಾರ, ಬುಧವಾರ ಹಾಗೂ ಗುರುವಾರ ನಗರದಲ್ಲಿ ಒಟ್ಟು 17 ಸರಗಳವು ಪ್ರಕರಣ ನಡೆದಿರುವುದರಿಂದ ಮಹಿಳೆಯರು ಆತಂಕಗೊಂಡಿದ್ದಾರೆ.
ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಪಿ.ಹರಿಶೇಖರನ್ ಅವರು ಗುರುವಾರ ಡಿಸಿಪಿಗಳ ಸಭೆ ನಡೆಸಿ, ಸರಗಳವು ಪ್ರಕರಣಗಳನ್ನು ನಿಯಂತ್ರಿಸಲು ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
‘ಹೊರ ರಾಜ್ಯಗಳಿಂದ ಬಂದು ನಗರದಲ್ಲಿ ಸರಗಳವು ಮಾಡುತ್ತಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಜಂಕ್ಷನ್ಗಳಲ್ಲಿನ ಸಿ.ಸಿ ಟಿ.ವಿ ಕ್ಯಾಮೆರಾಗಳಲ್ಲಿ ದಾಖಲಾಗಿರುವ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಅಲ್ಲದೆ, ಕಳ್ಳತನದ ಶೈಲಿ, ಬೈಕ್ನ ನೋಂದಣಿ ಸಂಖ್ಯೆ ಮತ್ತು ಆರೋಪಿಗಳ ಚಹರೆ ಆಧರಿಸಿ ಪತ್ತೆ ಕಾರ್ಯ ಆರಂಭಿಸಲಾಗಿದೆ’ ಎಂದು ಹರಿಶೇಖರನ್ ‘ಪ್ರಜಾವಾಣಿ’ಗೆ ತಿಳಿಸಿದರು.
ಆಂಧ್ರಪ್ರದೇಶ, ತಮಿಳುನಾಡಿನಿಂದ ಬಂದವರು ಹೆಚ್ಚು ಸರಗಳವು ಪ್ರಕರಣಗಳಲ್ಲಿ ತೊಡಗುತ್ತಿದ್ದಾರೆ ಎನ್ನಲಾಗಿದೆ.