ಕೊಪ್ಪಳ: ನಿರ್ಮಾಣ ಹಂತದಲ್ಲಿದ್ದ ನೀರಿನ ಬೃಹತ್ ಟ್ಯಾಂಕ್ ಕುಸಿದು ಇಬ್ಬರು ಕಾರ್ಮಿಕರು ಮೃತಪಟ್ಟು, ಐವರು ಗಾಯಗೊಂಡಿರುವ ಘಟನೆ ಇಲ್ಲಿನ ಕಿನ್ನಾಳ ರಸ್ತೆ ಶಿಕ್ಷಕರ ಕಾಲೊನಿ ಬಳಿ ಗುರುವಾರ ನಡೆದಿದೆ.
ಪಶ್ಚಿಮ ಬಂಗಾಳ ಮೂಲದ ಕುರ್ಮಾನ್ ಅಲಿ (20), ಬೈತ್ಉಲ್ಲಾ (21) ಮೃತಪಟ್ಟವರು. ಜುಲ್ಫೀಕರ್ ಶೇಖ್, ಅಯಾತುಲ್ಲಾ ಶೇಖ್, ಮಿಖಾಯಿಲ್, ಅಬೀಬ, ರಬೀವುಲ್ಲಾ ಶೇಖ್ ಗಾಯಗೊಂಡಿದ್ದಾರೆ ಎಂದು ಕಾರ್ಮಿಕರ ಜತೆಗಿದ್ದ ಅಹದುಲ್ಲಾ ಶೇಖ್ ಮಾಹಿತಿ ನೀಡಿದರು. ಗಂಭೀರವಾಗಿ ಗಾಯಗೊಂಡಿರುವ ಮಿಖಾಯಿಲ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಒಯ್ಯಲಾಗಿದೆ.
ಟ್ಯಾಂಕ್ ನಿರ್ಮಾಣ ಕಾಮಗಾರಿ ಅಂತಿಮ ಹಂತದಲ್ಲಿತ್ತು. ಇಂದು ಪ್ರಾಯೋಗಿಕವಾಗಿ ನೀರು ತುಂಬಲಾಗುತ್ತಿತ್ತು. ಅದರ ಕೆಳಭಾಗ ಕೆಲವು ಕಾರ್ಮಿಕರು ಬಣ್ಣ ಬಳಿಯುತ್ತಿದ್ದರು. ಸಂಜೆ ಸುಮಾರು 4 ಗಂಟೆ ಟ್ಯಾಂಕ್ ಕುಸಿದಿದೆ. ‘ಸ್ಫೋಟದಂಥ ಸದ್ದು ಕೇಳಿಸಿತು. ಹೊರಬಂದಾಗ ದಟ್ಟ ದೂಳಿನ ನಡುವೆ ಟ್ಯಾಂಕ್ ಕುಸಿದುಬಿತ್ತು’ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.
ಕರ್ನಾಟಕ ಜಲಮಂಡಳಿ ನಗರಕ್ಕೆ 24 ಗಂಟೆ ಕುಡಿಯುವ ನೀರು ಪೂರೈಸುವ ಯೋಜನೆ ಅಡಿ ಇಲ್ಲಿ ಟ್ಯಾಂಕ್ ನಿರ್ಮಿಸುತ್ತಿತ್ತು. ಇದಕ್ಕೆ ಅಂದಾಜು ₨ 9 ಕೋಟಿ ವೆಚ್ಚವಾಗಿದೆ. ಆಂಧ್ರಪ್ರದೇಶ ಮೂಲದ ಮೆಗಾ ಕನ್ಸ್ಟ್ರಕ್ಷನ್ ಕಂಪೆನಿ ಕಾಮಗಾರಿ ನಡೆಸುತ್ತಿತ್ತು. ಕಳಪೆ ಕಾಮಗಾರಿಯಿಂದ ಟ್ಯಾಂಕ್ ನೆಲಕಚ್ಚಿದೆ ಎಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ ದೂರಿದರು.