ಲಖನೌ: ರೈಲ್ವೆಯನ್ನು ಖಾಸಗೀಕರಣಗೊಳಿಸುವ ಉದ್ದೇಶ ಸರ್ಕಾರಕ್ಕೆ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಸ್ಪಷ್ಟಪಡಿಸಿದರು.
ತಮ್ಮ ಸಂಸದೀಯ ಕ್ಷೇತ್ರ ವಾರಾಣಸಿಯಲ್ಲಿ ಸರ್ಕಾರಿ ಸ್ವಾಮ್ಯದ ಡಿಸೇಲ್್ ಲೋಕೊಮೋಟಿವ್್ ವರ್ಕ್ಸ್ (ಡಿಎಲ್ಡಬ್ಲು) ವಿಸ್ತರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಈ ಬಗ್ಗೆ ಸುಳ್ಳು ಪ್ರಚಾರ ನಡೆಯುತ್ತಿದೆ. ಅಂಥ ಉದ್ದೇಶವೇ ನಮಗಿಲ್ಲ’ ಎಂದರು. ಈ ಸಂದರ್ಭದಲ್ಲಿ ರೈಲ್ವೆ ಸಚಿವ ಸುರೇಶ್ ಪ್ರಭು ಅವರೂ ಇದ್ದರು.
ವಿದೇಶಿ ಮತ್ತು ಖಾಸಗಿ ಕ್ಷೇತ್ರದ ಬಂಡವಾಳವನ್ನು ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಗಾಗಿ ಬಳಸಿಕೊಳ್ಳಲಾಗುವುದು. ಇದನ್ನು ಜನರು ರೈಲ್ವೆಯ ಖಾಸಗೀಕರಣ ಎಂದು ಭಾವಿಸಿ ಆತಂಕಪಡುವ ಅಗತ್ಯವಿಲ್ಲ ಎಂದು ಪ್ರಧಾನಿ ಹೇಳಿದರು.
ದೇಶದ ಎಲ್ಲ ನಾಲ್ಕು ಭಾಗಗಳಲ್ಲಿ ರೈಲ್ವೆ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲಾಗುತ್ತದೆ. ರೈಲ್ವೆಯು ಜನರಿಗೆ ಅತ್ಯುತ್ತಮ ಸೇವೆ ನೀಡುವಂತಾಗಬೇಕು ಎಂದರು.
ರೈಲ್ವೆಯು ಸಣ್ಣ ನಿಲ್ದಾಣಗಳನ್ನು ‘ಕೌಶಲ ಅಭಿವೃದ್ಧಿ’ಗೆ ಬಳಸಿಕೊಳ್ಳಬಹುದು. ನಿತ್ಯವೂ ಒಂದು ಅಥವಾ ಎರಡು ರೈಲುಗಳಷ್ಟೇ ಸಂಚರಿಸುವ ಸಣ್ಣ ನಿಲ್ದಾಣಗಳು ಎಷ್ಟೋ ಇವೆ. ನಿಲ್ದಾಣದ ಸನಿಹದಲ್ಲಿ ಎರಡು ಕೊಠಡಿಗಳನ್ನು ನಿರ್ಮಿಸಿ ಅಲ್ಲಿ ಗ್ರಾಮೀಣ ಯುವಜನತೆಗೆ ಕೌಶಲ ಅಭಿವೃದ್ಧಿ ತರಗತಿ ನಡೆಸಬಹುದು ಎಂದೂ ಮೋದಿ ಹೇಳಿದರು.
ರೈಲ್ವೆಯನ್ನು ಆದಾಯ ಗಳಿಕೆ ಸಂಸ್ಥೆಯನ್ನಾಗಿ ಮಾಡಬೇಕು ಎಂದು ಕರೆ ನೀಡಿದ ಅವರು, ರೈಲ್ವೆ ಅಪಾರ ಮೂಲಸೌಕರ್ಯವನ್ನು ಹೊಂದಿದ್ದು, ಇದನ್ನು ಅಭಿವೃದ್ಧಿಗೆ ಬಳಸಿಕೊಳ್ಳಬಹುದು ಎಂದರು.
‘ವಾರಾಣಸಿ ರೈಲ್ವೆ ನಿಲ್ದಾಣದಲ್ಲಿ ಕುಳಿತುಕೊಳ್ಳುವುದಕ್ಕೆ ಸಾಕಷ್ಟು ಬೆಂಚುಗಳು ಇಲ್ಲ. ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯನ್ನು ಬಳಸಿಕೊಂಡು ಇಲ್ಲಿ ಹೆಚ್ಚಿನ ಬೆಂಚುಗಳ ವ್ಯವಸ್ಥೆ ಮಾಡಿಸುತ್ತೇನೆ’ ಎಂದು ಆಶ್ವಾಸನೆ ನೀಡಿದರು.
ಇದೇ ವೇಳೆ, ಮಂಜುಕವಿದ ವಾತಾವರಣದಲ್ಲೂ ಹೆಚ್ಚಿನ ಗೋಚರ ಸಾಮರ್ಥ್ಯವಿರುವ ವಿಶೇಷ ಗಾಜು ಅಳವಡಿಸಲಾದ ರೈಲು ಎಂಜಿನನ್ನು ಮೋದಿ ಜನಸೇವೆಗೆ ಸಮರ್ಪಿಸಿದರು.
‘ಹೆಣ್ಣು ಭ್ರೂಣ ಹತ್ಯೆ ಮಹಾಪಾಪ’: ಹೆಣ್ಣು ಭ್ರೂಣ ಹತ್ಯೆಯನ್ನು ಖಂಡಿಸಿದ ಪ್ರಧಾನಿ ನರೇಂದ್ರ ಮೋದಿ, ಇದಕ್ಕಿಂತ ದೊಡ್ಡ ಪಾಪ ಇನ್ನೊಂದಿಲ್ಲ ಎಂದಿದ್ದಾರೆ.
‘ಉತ್ತಮ ಆಡಳಿತ ದಿನ’ ಆಚರಣೆ ಭಾಗವಾಗಿ ಬನಾರಸ್್ ಹಿಂದೂ ವಿಶ್ವವಿದ್ಯಾಲಯದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಲೆ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿರುವವರು ಈ ಪಿಡುಗಿನ ವಿರುದ್ಧ ಸಮಾಜವನ್ನು ಬಡಿದೆಬ್ಬಿಸುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
***
ರೈಲ್ವೆಯನ್ನು ನನ್ನಷ್ಟು ಪ್ರೀತಿಸುವವರು ಯಾರೂ ಇಲ್ಲ. ಇದು ನನಗೆ ಕುಟುಂಬ ಇದ್ದಂತೆ – ಮೋದಿ