ಕರ್ನಾಟಕ

ಭೋವಿ ಜನಾಂಗದವರ ಕಲ್ಲು ಗಣಿಗಾರಿಕೆಗೆ ಸಹಕಾರ: ಸಚಿವ ತಂಗಡಗಿ

Pinterest LinkedIn Tumblr

bhovi

ಬೆಂಗಳೂರು: ಭೋವಿ ಜನಾಂಗದವರು ಕಲ್ಲುಗಣಿಗಾರಿಕೆ ನಡೆಸುವ ಪ್ರದೇಶದ ನೀಲನಕ್ಷೆ ತಯಾರಿಸಿ ಒದಗಿಸಿದರೆ ಜಿಲ್ಲಾಧಿಕಾರಿಗಳ ಮೂಲಕ ಗಣಿಗಾರಿಕೆಗೆ ಅನುಮತಿ ಹಾಗೂ ಭದ್ರತೆ ಒದಗಿಸಲಾಗುವುದು ಎಂದು ಸಚಿವ ಶಿವರಾಜ್ ಎಸ್. ತಂಗಡಗಿ ಹೇಳಿದರು.

ಅಖಿಲ ಕರ್ನಾಟಕ ಭೋವಿ (ವಡ್ಡರ) ಯುವ ವೇದಿಕೆ ಶಿಕ್ಷಕರ ಸದನದಲ್ಲಿ ಮಂಗಳವಾರ ಏರ್ಪಡಿಸಿದ್ದ ಕುಲಕಸುಬು ಉಳಿಸಲು ಒತ್ತಾಯಿಸಿ ಮತ್ತು ಸ್ವಾಭಿಮಾನಿ ಭೋವಿ ಯುವಜನರ ಸಂಘಟನಾ ಸಮಾವೇಶದಲ್ಲಿ ಅವರು ಮಾತನಾಡಿದರು.

”ರಾಜ್ಯದಲ್ಲಿ ಭೋವಿ ಸಮಾಜದವರು ಕಲ್ಲು ಒಡೆದು ಜೀವನ ಸಾಗಿಸುತ್ತಿದ್ದಾರೆ. ಆದರೆ, ಇತ್ತೀಚೆಗೆ ಸರಕಾರದ ಕಾನೂನುಗಳಿಂದಾಗಿ ಕಲ್ಲು ಗಣಿಗಾರಿಕೆ ಸ್ಥಗಿತಗೊಳಿಸಲಾಗುತ್ತಿದೆ,”ಎಂದರು.

”ವಿಜಯಪುರದಲ್ಲಿ ಈಗಾಗಲೇ ಕಲ್ಲು ಗಣಿಗಾರಿಕೆ ಸ್ಥಗಿತಗೊಳಿಸಲಾಗಿದೆ ಎಂಬ ಮಾಹಿತಿ ಇದೆ. ಈ ಹಿನ್ನೆಲೆಯಲ್ಲಿ ಭೋವಿ ಜನಾಂಗದವರು ಎಚ್ಚರಿಕೆ ವಹಿಸಿ ಮೀಸಲು ಪ್ರದೇಶ ಹೊರತುಪಡಿಸಿ ಸಾಮಾನ್ಯ ಪ್ರದೇಶಗಳಲ್ಲಿ ಕಲ್ಲು ಗಣಿಗಾರಿಕೆ ನಡೆಸಿದರೆ ಸೂಕ್ತ ರಕ್ಷಣೆ ಒದಗಿಸಲಾಗುವುದು,” ಎಂದು ಹೇಳಿದರು.

”ಭೋವಿ ಜನಾಂಗದವರ ಸಮಾವೇಶವನ್ನು ಜ.18ರಂದ ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ. ಅಂದು ಮುಖ್ಯಮಂತ್ರಿಗಳ ಮುಂದೆ ಭೋವಿ ಜನಾಂಗದವರ ಅಭಿವೃದ್ಧಿಗಾಗಿ ಪ್ರತ್ಯೇಕ ನಿಗಮದ ಬಗ್ಗೆ ಪ್ರಸ್ತಾಪಿಸಿ, ಅವರಿಂದಲೇ ಘೋಷಿಸಲು ಪ್ರಯತ್ನಿಸಲಾಗುವುದು,” ಎಂದು ಹೇಳಿದರು.

”ಹಲವು ವರ್ಷಗಳ ನಂತರ ಭೋವಿ ಸಮಾಜದಲ್ಲಿ ಈಗ ಸಂಘಟನೆ ಆರಂಭವಾಗಿದೆ. ಇದನ್ನು ಸರಕಾರದ ಗಮನಕ್ಕೆ ತರಬೇಕು. ಸಮಾಜದ ಯುವಕರು ಶಿಕ್ಷಣವಂತರಾಗಬೇಕು,”ಎಂದು ಮನವಿ ಮಾಡಿದರು.

ಶಾಸಕ ಮಾನಪ್ಪ ವಜ್ಜಲ್‌ ”ನಾನಾ ರೀತಿಯ ಕಾನೂನುಗಳ ಹೆಸರಿನಲ್ಲಿ ಎಲ್ಲಿಯೂ ಗುಡ್ಡಗಳಲ್ಲಿ ಕಲ್ಲು ಗಣಿಗಾರಿಕೆ ನಡೆಸಲು ಅನುಮತಿ ದೊರೆಯುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸರಕಾರ ಕುಲಕಸುಬು ಮುನ್ನಡೆಸಲು ಅನುಮತಿ ನೀಡಬೇಕು. ಅಲ್ಲದೆ, ಸರಕಾರದ ಯಾವುದೇ ಯೋಜನೆಗಳು ಸಮಾಜದವರನ್ನು ಮುಟ್ಟುತ್ತಿಲ್ಲ. ಈ ಹಿನ್ನೆಲೆಯಲ್ಲಿ ಪ್ರತ್ಯೇಕವಾಗಿ ಭೋವಿ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು,” ಎಂದು ಮನವಿ ಮಾಡಿದರು.

ಮಾಜಿ ಸಚಿವ ಗೂಳಿಹಟ್ಟಿ ಶೇಖರ್, ”ಹಿಂದೆ ರಾಜ್ಯದಲ್ಲಿ ಬಿಜೆಪಿ ಸರಕಾರ ಪೂರ್ಣಪ್ರಮಾಣದಲ್ಲಿ ಅಧಿಕಾರಕ್ಕೆ ಬರಬೇಕಾದರೆ ಭೋವಿ ಸಮಾಜವೇ ಕಾರಣ. ಮೂವರು ಶಾಸಕರ ಕೊರತೆ ಇದ್ದ ಹಿನ್ನೆಲೆಯಲ್ಲಿ ಪಕ್ಷೇತರರಾಗಿ ಆಯ್ಕೆಯಾಗಿದ್ದ ನಾನು, ಶಿವರಾಜ್ ತಂಗಡಗಿ ಮತ್ತು ಪಾವಗಡದ ವೆಂಕಟರಮಣಪ್ಪ ನೆರವಾದೆವು. ಜನಾಂಗದವರು ದುಡಿಮೆಯ ಹಣವನ್ನು ಮದ್ಯದ ಅಂಗಡಿಗಳಿಗೆ ಸುರಿಯುತ್ತಿದ್ದಾರೆ. ಆದ್ದರಿಂದ ಸರಕಾರ ಗ್ರಾಮೀಣ ಭಾಗದಲ್ಲಿ ಮದ್ಯ ಮಾರಾಟ ನಿಷೇಧಿಸಬೇಕು,” ಎಂದು ಆಗ್ರಹಿಸಿದರು.

ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಶಾಸಕ ಅಖಂಡ ಶ್ರೀನಿವಾಸ ಮೂರ್ತಿ, ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ಅಧ್ಯಕ್ಷ ಡಿ.ಬಸವರಾಜ್, ಮಾಜಿ ಶಾಸಕ ಎಂ.ವಿ.ನಾಗರಾಜ್, ಅಖಿಲ ಕರ್ನಾಟಕ ಭೋವಿ ಯುವವೇದಿಕೆ ರಾಜ್ಯಾಧ್ಯಕ್ಷ ವೈ.ಕೊಟ್ರೇಶ, ರಾಜ್ಯ ಕಾರ್ಯಾಧ್ಯಕ್ಷ ವಿ.ಜಯಕುಮಾರ್, ರಿಯಲ್ ಎಸ್ಟೇಟ್ ಉದ್ಯಮಿ ಕೇಶವ ಮತ್ತಿತರರು ಉಪಸ್ಥಿತರಿದ್ದರು.

Write A Comment