ಬೆಂಗಳೂರು: ರಾಜ್ಯದ ಎಲ್ಲ ನಗರ ಮತ್ತು ಪಟ್ಟಣಗಳ ವ್ಯಾಪ್ತಿಯಲ್ಲಿ ಬೈಕ್ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಲು ಸಾರಿಗೆ ಇಲಾಖೆ ಮುಂದಾಗಿದೆ. ಹೆದ್ದಾರಿಗಳ ಸಂಚಾರಕ್ಕೂ ಹೆಲ್ಮೆಟ್ ಕಡ್ಡಾಯಗೊಳಿಸುವ ಪ್ರಸ್ತಾವವಿದೆ.
ನಗರ ಮತ್ತು ಪಟ್ಟಣಗಳ ವ್ಯಾಪ್ತಿಯಲ್ಲಿ ಬೈಕ್ ಸವಾರರು ತಲೆಗೆ ಪೆಟ್ಟು ಬಿದ್ದು ಸಾವಿಗೀಡಾಗುವ ಪ್ರಕರಣಗಳು ಹೆಚ್ಚುತ್ತಿವೆ. ಅವುಗಳನ್ನು ನಿಯಂತ್ರಿಸಲು ಹೆಲ್ಮೆಟ್ ಕಡ್ಡಾಯಗೊಳಿಸುವ ಬಗ್ಗೆ ಯೋಚಿಸುವಂತೆ ಪ್ರಕರಣವೊಂದರಲ್ಲಿ ಹೈಕೋರ್ಟ್ ನಿರ್ದೇಶನ ನೀಡಿತ್ತು. ಅದನ್ನು ಆಧರಿಸಿ ಈ ಪ್ರಸ್ತಾವ ರೂಪಿಸಲಾಗಿದೆ.
ಹೈಕೋರ್ಟ್ ನಿರ್ದೇಶನದಂತೆ ಹೆಲ್ಮೆಟ್ ಕಡ್ಡಾಯಗೊಳಿಸುವ ಬಗ್ಗೆ ಸಾರಿಗೆ ಆಯುಕ್ತ ಡಾ.ರಾಮೇಗೌಡ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಅವರಿಗೆ ಇತ್ತೀಚೆಗೆ ಸಲ್ಲಿಸಿದ್ದಾರೆ. ಸಂಪುಟದ ಒಪ್ಪಿಗೆ ಬಳಿಕ ಆದೇಶ ಹೊರಬೀಳುವ ಸಾಧ್ಯತೆ ಇದೆ.
ಈ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿದ ಸಾರಿಗೆ ಆಯುಕ್ತರು, ‘ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿರಬೇಕೆಂಬ ಆದೇಶ 9 ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಜಾರಿಯಲ್ಲಿದೆ. ಅದನ್ನು ಎಲ್ಲ ನಗರ ಮತ್ತು ಪಟ್ಟಣಗಳಿಗೆ ವಿಸ್ತರಿಸುವಂತೆ ಕೋರಲಾಗಿದೆ’ ಎಂದರು.
ನಗರ, ಪಟ್ಟಣಗಳಿಗೆ ಹೊಂದಿಕೊಂಡಿರುವ ಹೆದ್ದಾರಿಗಳಲ್ಲೂ ತಲೆಗೆ ಪೆಟ್ಟಾಗಿ ಬೈಕ್ ಸವಾರರು ಸಾವಿಗೀಡಾಗುವ ಪ್ರಕರಣಗಳು ಹೆಚ್ಚುತ್ತಿವೆ. ಆದ್ದರಿಂದ ಹೆದ್ದಾರಿಗಳಲ್ಲಿ ಬೈಕ್ ಓಡಿಸುವವರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿರಬೇಕೆಂಬ ಆದೇಶ ಹೊರಡಿಸಲು ಕೋರಲಾಗುವುದು ಎಂದು ತಿಳಿಸಿದರು.