ನಂಜನಗೂಡು: ತುಕ್ಕು ಹಿಡಿದ ಬೋನಿಗೆ ಬಿದ್ದ ಚಿರತೆಯೊಂದು ನಂತರ ಹೊರಬಂದು ಇಬ್ಬರನ್ನು ಗಾಯಗೊಳಿಸಿದ ಘಟನೆ ತಾಲ್ಲೂಕಿನ ಕೋಣನೂರು ಗ್ರಾಮದಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ.
ಮೇಕೆಯನ್ನು ತಿನ್ನಲು ಬಂದ ಚಿರತೆ ಬೋನಿನೊಳಗೆ ಬಿದ್ದಿತ್ತು. ವಿಷಯ ತಿಳಿದ ಅಕ್ಕಪಕ್ಕದ ಗ್ರಾಮಸ್ಥರು ತಂಡೋಪತಂಡವಾಗಿ ನೋಡಲು ಬಂದರು. ಜನರನ್ನು ಕಂಡು ಗಾಬರಿಯಾದ ಚಿರತೆ ಬೋನನ್ನು ಕಿತ್ತು ಹಾಕಿ ಜನರ ಗುಂಪಿನ ಮೇಲೆ ಎರಗಿ ಇಬ್ಬರನ್ನು ಗಾಯಗೊಳಿಸಿತು.
ಗಾಯಾಳು ಪ್ರಕಾಶ್ ಎಂಬುವವರಿಗೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಮನೆಗೆ ಕಳುಹಿಸಲಾಯಿತು. ಮಹದೇವಸ್ವಾಮಿ ಎಂಬುವವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿದೆ.
4 ದಿನಗಳ ಹಿಂದೆ ಗ್ರಾಮದ ಬಸು ಮರಿಶೆಟ್ಟಿ ಎಂಬುವರ ಕರುವನ್ನು ಕೊಂದು ಹಾಕಿದ್ದ ಈ ಚಿರತೆ, ಶುಕ್ರವಾರ ಮೇಕೆಯೊಂದನ್ನು ಕೊಂದು ತಿಂದಿತ್ತು. ಇದನ್ನರಿತ ಅರಣ್ಯ ಇಲಾಖೆ ಸಿಬ್ಬಂದಿ, ಗ್ರಾಮಸ್ಥರ ಒತ್ತಾಯದ ಮೇರೆಗೆ ಮೇಕೆಯನ್ನು ಕಟ್ಟಿದ ಬೋನನ್ನು ಬಸು ಮರಿಶೆಟ್ಟಿಯ ಜಮೀನಿನಲ್ಲಿ ಇಟ್ಟಿದ್ದರು.
ನಂಜನಗೂಡು ಉಪವಲಯ ಅರಣ್ಯಧಿಕಾರಿ ನಿತಿನ್ ಕುಮಾರ್, ಅರಣ್ಯ ವಿಕ್ಷಕರು ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಹಳೆಯ ಬೋನನ್ನು ತೆಗೆದು ಗುಣಮಟ್ಟದ ಬೋನು ತಂದಿಟ್ಟರು.