ಹೊಸಕೋಟೆ: ಬ್ಯಾಂಕಿನಿಂದ ಹಣ ತೆಗೆದುಕೊಂಡು ಹೋಗುತ್ತಿದ್ದ ಲೆಕ್ಕಾಧಿಕಾರಿ ಒಬ್ಬರ ಮೇಲೆ ಹಾಡಹಗಲೇ ಗುಂಡು ಹಾರಿಸಿದ ದುಷ್ಕರ್ಮಿಗಳು, ಅವರಿಂದ ₨7.5ಲಕ್ಷ ದೋಚಿ ಪರಾರಿಯಾಗಿರುವ ಘಟನೆ ಪಿಲ್ಲಗುಂಪೆ ಕೈಗಾರಿಕೆ ಪ್ರದೇಶದಲ್ಲಿ ಗುರುವಾರ ನಡೆದಿದೆ.
ಉತ್ತರ ಪ್ರದೇಶ ಮೂಲದ ವೀರೇಂದ್ರಗುಪ್ತ (26) ಗಾಯಗೊಂಡವರು. ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿ, ಒಳಹೊಕ್ಕಿದ್ದ 3 ಗುಂಡುಗಳನ್ನು ತೆಗೆಯಲಾಯಿತು. ನಂತರ, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೆಂಗಳೂರಿಗೆ ಕರೆದೊಯ್ಯಲಾಯಿತು.
ಕಾಡುಗೋಡಿಯಲ್ಲಿ ನೆಲೆಸಿದ್ದ ವೀರೇಂದ್ರಗುಪ್ತ, ಆರು ತಿಂಗಳಿನಿಂದ ‘ವಾರ್ಮ್ ಗೇರ್ಸ್’ ವಾಹನಗಳ ಬಿಡಿಭಾಗಗಳ ತಯಾರಿಕಾ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಗುರುವಾರ ಮಧ್ಯಾಹ್ನ 3 ಗಂಟೆಗೆ ಹೊಸಕೋಟೆಯಲ್ಲಿನ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಶಾಖೆಯಲ್ಲಿ ₨7.5ಲಕ್ಷ ಹಣ ಡ್ರಾ ಮಾಡಿದ ಅವರು, ನಂತರ ಕಾರಿನಲ್ಲಿ ಕಾರ್ಖಾನೆ ಕಡೆಗೆ ಹೊರಟರು.
ಕಾರ್ಖಾನೆ ಮುಂದೆ ಕಾರಿನಿಂದ ಇಳಿಯುತ್ತಿದ್ದಂತೆಯೇ ಮೂವರು ದುಷ್ಕರ್ಮಿಗಳು, ಹಠಾತ್ ಆಗಿ ಅವರ ಮೇಲೆ 3 ಸುತ್ತು ಗುಂಡು ಹಾರಿಸಿದರು. ಈ ದಾಳಿಯಿಂದ ಅವರು ಕುಸಿದು ಬಿದ್ದಾಗ ದುಷ್ಕರ್ಮಿಗಳು, ಹಣದ ಬ್ಯಾಗ್ ಕಸಿದು ಬೈಕ್ನಲ್ಲಿ ಪರಾರಿಯಾದರು.
ಸೂಲಿಬೆಲೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದಾರೆ. ಸ್ಥಳಕ್ಕೆ ಕೇಂದ್ರವಲಯ ಐಜಿಪಿ ಸೈಯದ್ ಉಲ್ಫತ್ ಹುಸೇನ್, ಎಸ್ಪಿ ರಮೇಶ್ ಬಾನೋತ್ ಪರಿಶೀಲಿಸಿದರು.
‘ವೀರೇಂದ್ರಗುಪ್ತ ಅವರ ಸ್ಥಿತಿ ಗಂಭೀರವಾಗಿದೆ. ಸದ್ಯ ಅವರನ್ನು ಮಣಿಪಾಲ ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ಕಾರ್ಖಾನೆ ಸಮೀಪದ ಜಂಕ್ಷನ್ನಲ್ಲಿರುವ ಸಿ.ಸಿ.ಕ್ಯಾಮೆರಾ ಪರಿಶೀಲಿಸಲಾಗಿದೆ. ದುಷ್ಕರ್ಮಿಗಳ ಸುಳಿವು ಸಿಕ್ಕಿದ್ದು, ಶೀಘ್ರವೇ ಅವರನ್ನು ಬಂಧಿಸಲಾಗುವುದು’ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.