ಸಾಗರ: ರಾಜ್ಯದ ಜವಳಿ ಮಂತ್ರಿ ಬಾಬುರಾವ್ ಚಿಂಚನಸೂರ ಅವರು ವಿದ್ಯುತ್ ಮಗ್ಗಗಳ ಮಾಲೀಕರ ಜೊತೆ ಶಾಮೀಲಾಗಿ ವಿದ್ಯುತ್ ಮಗ್ಗದ ವಸ್ತ್ರವನ್ನೇ ಕೈಮಗ್ಗವೆಂದು ಮಾನ್ಯ ಮಾಡಬೇಕು ಎನ್ನುವ ಬೇಡಿಕೆಯನ್ನು ಸರ್ಕಾರದ ಮುಂದೆ ಇಡುತ್ತಿದ್ದಾರೆ ಎಂದು ಚಿಂತಕ ಪ್ರಸನ್ನ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದಿರುವ ಬಹಿರಂಗ ಪತ್ರದಲ್ಲಿ ಆರೋಪಿಸಿದ್ದಾರೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿಗೆ ಬರೆದಿರುವ ಪತ್ರವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು. ‘ಕೈಮಗ್ಗ ಕ್ಷೇತ್ರದಲ್ಲಿ ಕಲಬೆರಕೆ ವಸ್ತ್ರ ಮಾರಾಟವನ್ನು ನಿಗ್ರಹಿಸಿ ಖಾದಿ ಹಾಗೂ ಕೈಮಗ್ಗ ಕ್ಷೇತ್ರಗಳ ನೇಕಾರರ ಬವಣೆಯನ್ನು ತಪ್ಪಿಸಬೇಕು ಎಂಬ ಬೇಡಿಕೆಯೊಂದಿಗೆ ಕಳೆದ ಒಂದು ವರ್ಷ ದಿಂದ ನಡೆಸುತ್ತಿರುವ ಸತ್ಯಾಗ್ರಹಕ್ಕೆ ಜವಳಿ ಮಂತ್ರಿಗಳ ಈ ನಿಲುವಿನಿಂದ ಹಿನ್ನಡೆಯಾಗಿದೆ’ ಎಂದು ಟೀಕಿಸಿದರು.
‘ಕಳೆದ ನ. 8ರಂದು ನಾನು ಉಪವಾಸ ಸತ್ಯಾಗ್ರಹ ಕೈಗೊಂಡ ಸಂದರ್ಭದಲ್ಲಿ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಸಮಸ್ಯೆ ಬಗೆಹರಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು. ಆ ಪ್ರಕಾರ ಕಳೆದ ಡಿ.10 ರಂದು ಬೆಳಗಾ ವಿಯ ಸುವರ್ಣ ಸೌಧದಲ್ಲಿ ನಡೆದ ಸಭೆ ಯನ್ನು ಜವಳಿ ಮಂತ್ರಿ ಗಳು ಕೈಮಗ್ಗ ನೇಕಾರರ ಸಭೆ ಆಗುವುದನ್ನು ತಪ್ಪಿಸಿ ವಿದ್ಯುತ್ ಮಗ್ಗಗಳ ಮಾಲೀಕರ ಹಾಗೂ ಬೆಂಬಲಿಗರ ಸಭೆ ಆಗು ವಂತೆ ಪರಿವರ್ತಿ ಸಿದ್ದಾರೆ ಎಂಬುದನ್ನು ಪತ್ರದಲ್ಲಿ ಉಲ್ಲೇಖಿಸಿರುವುದಾಗಿ’ ತಿಳಿಸಿದರು. ‘ಸುವರ್ಣಸೌಧದಲ್ಲಿ ನಡೆದ ಸಭೆ ಯಲ್ಲಿ ಜವಳಿ ಸಚಿವರು ನೂರಾರು ವಿದ್ಯುತ್ ಮಗ್ಗಗಳ ಮಾಲಿಕರು ಬೇಕಂ ತಲೇ ಸಭೆಗೆ ಬರುವಂತೆ ಮಾಡಿದ್ದರು. ಅಲ್ಲಿ ಕೈಮಗ್ಗ ನೇಕಾರರ ನಿಯೋಗದ ಪ್ರತಿನಿಧಿಗಳಿಗೆ ಮಾತನಾಡಲು ಅವಕಾ ಶವೇ ಸಿಗಲಿಲ್ಲ. ಸಭೆಯ ನಂತರ ಅಧಿಕಾರಿಗಳ ಬಳಿ ಈ ಬಗ್ಗೆ ಅಸಮಾ ಧಾನ ತೋಡಿದ್ದಕ್ಕೆ ವಿದ್ಯುತ್ ಮಗ್ಗಗಳ ಮಾಲಿಕರು ನಮ್ಮ ಮೇಲೆ ಗೂಂಡಾ ವರ್ತನೆ ತೋರಿದರು’ ಎಂದು ಹೇಳಿದರು.
ಮುಖ್ಯಮಂತ್ರಿ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ವಿದ್ಯುತ್ ಮಗ್ಗ ವಸ್ತ್ರವನ್ನೇ ಕೈಮಗ್ಗವೆಂದು ಮಾನ್ಯ ಮಾಡಬೇಕು, ಕೈಮಗ್ಗ ಮಿಸಲಾತಿ ಅಧಿನಿ ಯಮ ಕಿತ್ತು ಹಾಕಬೇಕು, ಸರ್ಕಾರ ನೇಮಿಸಿರುವ ಉನ್ನತ ಮಟ್ಟದ ಜವಳಿ ಸಲಹಾ ಸಮಿತಿಯನ್ನು ರದ್ದುಗೊಳಿಸಬೇಕು ಎಂಬ ಕೈಮಗ್ಗ ಸತ್ಯಾಗ್ರಹಕ್ಕೆ ವ್ಯತಿರಿಕ್ತವಾದ ಬೇಡಿಕೆಗಳನ್ನು ಮಂಡಿಸಿ ಜವಳಿ ಸಚಿವರೇ ಇದಕ್ಕೆ ಮೇಜು ಗುದ್ದಿ ಸ್ವಾಗತಿಸಿರುವುದು ವಿಪರ್ಯಾಸದ ಸಂಗತಿ ಎಂದರು.
ವಿದ್ಯುತ್ ಮಗ್ಗ ನೇಕಾರರಿಗೆ ಯಾವುದೇ ತೊಂದರೆ ಯಾಗದಂತೆ ಕೈಮಗ್ಗ ಕ್ಷೇತ್ರದಲ್ಲಿ ಕಲಬೆರಕೆ ನಿಲ್ಲಿಸುವುದು ಸಾಧ್ಯವಿದೆ. ಈ ಸಂಬಂಧ ಕರ್ನಾಟಕ ವಸ್ತ್ರ ಪ್ರಾಧಿಕಾರ ರಚಿಸಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ. ಇಲ್ಲದೆ ಇದ್ದಲ್ಲಿ ಈ ಹಿಂದೆ ಕೈಗೊಂಡ ಉಪ ವಾಸ ಸತ್ಯಾಗ್ರಹವನ್ನು ಮತ್ತೆ ಆರಂಭಿಸ ಬೇಕಾಗುತ್ತದೆ ಎಂದು ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರದಲ್ಲಿ ತಿಳಿಸಿರುವುದಾಗಿ ಹೇಳಿದರು.