ಕರ್ನಾಟಕ

ನಂದಿತಾ ಪ್ರಕರಣ ಸಿಬಿಐಗೆ-ಸಿಎಂ ಜತೆ ಚರ್ಚೆ: ಸಚಿವ ಕಿಮ್ಮನೆ ರತ್ನಾಕರ

Pinterest LinkedIn Tumblr

Theerthahalli_Nanditha_Death

ಶಿವಮೊಗ್ಗ: ‘ತೀರ್ಥಹಳ್ಳಿಯ ಶಾಲಾ ಬಾಲಕಿ ನಂದಿತಾ ಸಾವಿನ ಪ್ರಕರಣವನ್ನು ಸಿಬಿಐಗೆ ವಹಿಸುವುದು ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ಬಿಟ್ಟ ವಿಚಾರ. ಅವರ ಬಳಿ ಈ ಬಗ್ಗೆ ಚರ್ಚಿಸುತ್ತೇನೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ ಹೇಳಿದರು.

ಸಿಐಡಿ ನೀಡಿರುವ ವರದಿ ಸರಿಯಾ­ಗಿದೆ. ವೈದ್ಯಕೀಯ ವರದಿ, ಆಕೆ ಬರೆದ ಪತ್ರ, ಆಕೆಯ ಶಾಲಾ ಸಹಪಾಠಿಗಳ ಹೇಳಿಕೆ ಸೇರಿದಂತೆ ಸಮಗ್ರ ತನಿಖೆಯ ನಂತರ ವರದಿ ನೀಡಲಾಗಿದೆ. ಅಧಿ­ಕಾರಿಗಳು ಯಾರ ಒತ್ತಡಕ್ಕೊ ಮಣಿದು ಪ್ರಯೋಗಾಲಯದ ವರದಿ, ತನಿಖಾ ವರದಿ ನೀಡಿಲ್ಲ. ಸುಳ್ಳು ದಾಖಲೆ ಸೃಷ್ಟಿಸಿ­ದರೆ ಮುಂದೆ ಏನಾಗುತ್ತದೆ ಎನ್ನುವುದಕ್ಕೆ ‘ತೆಲಗಿ ಪ್ರಕರಣ’ ನಮ್ಮ ಕಣ್ಣ ಮುಂದಿದೆ. ಅಧಿ­ಕಾ­ರಿ­ಗಳು ಒತ್ತಡಕ್ಕೆ ಮಣಿದು ತಮ್ಮ ಜೀವನ ಹಾಳು ಮಾಡಿ­­­­­­ಕೊಳ್ಳು­ವುದಿಲ್ಲ ಎಂದು ಸಚಿವರು ಭಾನು­­ವಾರ ಪತ್ರಿಕಾ­ಗೋಷ್ಠಿ­ಯಲ್ಲಿ ವಿವರಿಸಿದರು.

ಬಿಜೆಪಿ ರಾಜ­ಕೀಯ ಲಾಭಕ್ಕಾಗಿ ಕೋಮು­­ಗಳ ಮಧ್ಯೆ ದ್ವೇಷ ಮೂಡಿಸುವ ಕೆಲಸ ಮಾಡುತ್ತಿದೆ. ಎರಡು ಬಾರಿ ಸೋತಿರುವ ಆರಗ ಜ್ಞಾನೇಂದ್ರ ಅವರಿಗೆ ತುರ್ತಾಗಿ ಅಧಿಕಾರ ಬೇಕಿದೆ. ಅದಕ್ಕಾಗಿ ಕೀಳು ಮಟ್ಟದ ರಾಜಕೀಯ ಮಾಡುತ್ತಿ­ದ್ದಾರೆ ಎಂದು ಕುಟುಕಿದರು.

ನಂದಿತಾ ಪೋಷಕರು ‘ಸಿಐಡಿ ವರದಿ ಪ್ರಶ್ನಿಸಿ ಕೋರ್ಟ್ ಮೊರೆ ಹೋಗುತ್ತಿ­ದ್ದಾರಲ್ಲ’ ಎನ್ನುವ ಪ್ರಶ್ನೆಗೆ, ಅದು ಅವರ ಹಕ್ಕು ಎಂದರು.

ಅಂಗಡಿ ಬೆಂಕಿಗೆ ಆಹುತಿಯಾದ ನಂತರ ನಂದಿತಾ ಪೋಷಕರ ಮನೆಗೆ ಭೇಟಿ ನೀಡಿ ಮಾತನಾಡಿದ್ದೇನೆ. ಮತ್ತೆ ಬದುಕು ಕಟ್ಟಿಕೊಳ್ಳಲು ಅಗತ್ಯ ನೆರವು ದೊರಕಿಸುವ ಭರವಸೆ ನೀಡಿದ್ದೇನೆ. ಆಕೆ ಅಸ್ವಸ್ಥಳಾದ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದರೆ ಈ ಗೊಂದಲ ಇರುತ್ತಿರಲಿಲ್ಲ. ಅದನ್ನು ಪೋಷಕರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ ಎಂದರು.

‘ರಾಜ್ಯಸಭಾ ಸದಸ್ಯ ಆಯನೂರು ಮಂಜು­ನಾಥ್‌ ಅವರಿಗೆ ನಾಲಿಗೆ ಮೇಲೆ ಹಿಡಿತ­ವಿಲ್ಲ. ಸಂಸತ್‌ ಸದಸ್ಯ­ರಾ­ದರೂ ಹೇಗೆ ನಡೆದುಕೊಳ್ಳಬೇಕು ಎನ್ನು­ವುದು ಗೊತ್ತಿಲ್ಲ. ಇಂಥವರು ಇತರರಿಗೆ ಹೇಗೆ ಮಾದರಿ­ಯಾಗು­ತ್ತಾರೆ?’ ಎಂದು ಟೀಕಿಸಿದರು.

Write A Comment