ಕಲಬುರಗಿ, ಡಿ.9: ಗುಂಡು ಹಾರಿಸಿ ಕಾಂಗ್ರೆಸ್ ಮುಖಂಡನನ್ನು ಹತ್ಯೆಗೈದಿರುವ ಘಟನೆ ವಿಶ್ವವಿದ್ಯಾಲಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಚಿತ್ತಾಪುರ ವಾಡಿಯ ಕಾಂಗ್ರೆಸ್ ಮುಖಂಡ ಮಹಮದ್ ಶಬ್ಬೀರ್ (30) ಗುಂಡಿನ ದಾಳಿಯಲ್ಲಿ ಮೃತಪಟ್ಟವರು.
ಇಂದು ಬೆಳಗ್ಗೆ ನಗರದ ಆಕಾಶವಾಣಿ ಕೇಂದ್ರದ ಬಳಿ ಇವರು ಬೈಕ್ನಲ್ಲಿ ತೆರಳುತ್ತಿದ್ದಾಗ ಬೊಲೆರೋದಲ್ಲಿ ಬಂದ ದುಷ್ಕರ್ಮಿಗಳು ಮಹಮದ್ ಬೈಕಿಗೆ ಡಿಕ್ಕಿ ಹೊಡೆದು ಆತ ಕೆಳಗೆ ಬಿದ್ದಾಗ ತಲೆಗೆ ಗುಂಡು ಹೊಡೆದು ಪರಾರಿಯಾಗಿದ್ದರು. ಸ್ಥಳದಲ್ಲೇ ತೀವ್ರ ರಕ್ತಸ್ರಾವದಿಂದ ಅಸ್ವಸ್ಥಗೊಂಡ ಮಹಮದ್ ಶಬ್ಬೀರ್ನನ್ನು ಸ್ಥಳೀಯರು ತಕ್ಷಣ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮಹಮದ್ ಶಬ್ಬೀರ್ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಆಗಮಿಸಿದ ವಿಶ್ವವಿದ್ಯಾಲಯ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಪತ್ತೆಗೆ ಕಾರ್ಯಾಚರಣೆ ಮುಂದುವರೆಸಿದ್ದಾರೆ.