ಕುಂದಾಪುರ: ಹೆದ್ದಾರಿಯಲ್ಲಿ ಸೈಡು ಬಿಟ್ಟು ಕೊಡುವ ವಿಚಾರವನ್ನೇ ನೆಪ ಮಾಡಿಕೊಂಡು ಖಾಸಗಿ ‘ಸೋಮೇಶ್ವರ’ ಹೆಸರಿನ ಬಸ್ ಚಾಲಕ ಮತ್ತು ನಿರ್ವಾಹಕ ವಿ.ಆರ್.ಎಲ್. ಕಂಪೆನಿಯ ಸರಕು ಸಾಗಣೆಯ ಲಾರಿ ಚಾಲಕ ಮತ್ತು ನಿರ್ವಾಹಕನ ಮೇಲೆ ಹಿಗ್ಗಾಮುಗ್ಗ ಹಲ್ಲೆ ನಡೆಸಿದ ಘಟನೆ ಕುಂದಾಪುರ ಶಾಸ್ತ್ರೀ ವೃತ್ತದಲ್ಲಿ ನಡೆದಿದ್ದು, ಹೆದ್ದಾರಿ ಮೇಲೆ ನಡೆದ ಈ ಘಟನೆಯಿಂದಾಗಿ ಅರ್ಧ ತಾಸಿಗೂ ಹೆಚ್ಚು ಕಾಲ ವಾಹನ ಸಂಚಾರ ಅಸ್ಥವ್ಯಸ್ಥಗೊಂಡಿದೆ.
ಬಸ್ ಚಾಲಕ ದಯಾನಂದ ಹಾಗೂ ನಿರ್ವಾಹಕ ಗೋಪಾಲ ಎನ್ನುವವರೇ ಲಾರಿ ಅಡ್ಡಗಟ್ಟಿ ಹಲ್ಲೆ ನಡೆಸಿದವರು. ಲಾರಿ ಚಾಲಕನಾದ ದಾರವಾಡ ಮೂಲದ ನಾಗರಾಜ್ ಹಾಗೂ ನಿರ್ವಾಹಕನಾದ ಹುಬ್ಬಳ್ಳಿ ಮೂಲದ ಚಂದ್ರು ಹಲ್ಲೆಗೊಳಗಾದವರಾಗಿದ್ದಾರೆ.
ಘಟನೆ ಹಿನ್ನೆಲೆ: ದೆಹಲಿಯಿಂದ ಗುರುವಾರದಂದು ಹೊರಟಿದ್ದ ವಿ.ಅರ್.ಎಲ್. ಕಂಪೆನಿಯ ಸರಕು ಸಾಗಣೆಯ ವಾಹನವು ಇಂದು ಬೆಳಿಗ್ಗೆ ಭಟ್ಕಳ-ಕುಂದಾಪುರ ಉಡುಪಿ ಮಾರ್ಗವಾಗಿ ಮಂಗಳೂರಿಗೆ ತೆರಳುತ್ತಿತ್ತು. ಕುಂದಾಪುರದ ತಲ್ಲೂರು ಸಮೀಪ ಬರುತ್ತಿರುವಾಗ ಹಿಂಬದಿಯಿಂದ ಬಂದ ಸೋಮೇಶ್ವರ ಹೆಸರಿನ ವೇಗದೂತ (ಎಕ್ಸ್ಪ್ರೆಸ್) ಬಸ್ಸಿನ ಚಾಲಕ ಸೈಡು ನೀಡುವಂತೆ ಹಾರ್ನ್ ಹೊಡೆದಿದ್ದಾನೆ. ಆದರೇ ಈ ಲಾರಿ ದೊಡ್ಡ ಗಾತ್ರದಾಗಿದ್ದು ಸೈಡು ನೀಡಲು ಹೆದ್ದಾರಿಯ ಬದಿಯಲ್ಲಿ ಜಾಗ ಕಿರಿದಾದ ಕಾರಣ ಸೈಡು ನೀಡುವುದು ಅಸಾಧ್ಯವಾಗಿದೆ ಆಗಲೇ ಅವ್ಯಾಚವಾಗಿ ಬೈದಿದ್ದ ಚಾಲಕ ಹಾಗೂ ನಿರ್ವಾಹಕ ಬಸ್ಸನ್ನು ಕುಂದಾಪುರ ಶಾಸ್ತ್ರೀ ವೃತ್ತದಲ್ಲಿ ನಿಲ್ಲಿಸಿ ಈ ಲಾರಿಯನ್ನು ತಡೆದು ಲಾರಿಯೊಳಕ್ಕೆ ನುಗ್ಗಿ ಚಾಲಕ ಹಾಗೂ ನಿರ್ವಾಹಕನಿಗೆ ಹಿಗ್ಗಮುಗ್ಗ ಥಳಿಸಿದ್ದಾರೆ. ಈ ವೇಳೆ ನಿರ್ವಾಹಕ ಚಂದ್ರುವಿನ ಬಟ್ಟೆಯನ್ನು ಹರಿದಿದ್ದಾರೆ ಎಂದು ಆರೋಪಿಸಲಾಗಿದೆ.
ಲಾರಿ ಚಾಲಕನಿಗೆ ನಿರ್ವಾಹಕನಿಗೆ ಬಸ್ಸಿನವರು ಹೊಡೆಯುತ್ತಿರುವುದನ್ನು ಕಂಡ ಸ್ಥಳೀಯರು ಇಬ್ಬರನ್ನೂ ಸಮಧಾನ ಪಡಿಸಿದ್ದಾರೆ. ಅಷ್ಟರಲ್ಲಾಗಲೇ ಪೊಲೀಸರು ಸ್ಥಳಕ್ಕಾಗಮಿಸಿ ಎರಡು ವಾಹನಗಳನ್ನು ಹಾಗೂ ಹಲ್ಲೆಗೊಳಗಾದವರು ಮತ್ತು ಹಲ್ಲೆ ನಡೆಸಿದ ಆರೋಪಿಗಳನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ಹೆದ್ದಾರಿಯ ಮಧ್ಯೆಯ ಇದೆಲ್ಲಾ ಘಟನೆ ನಡೆದ ಕಾರಣ ಅರ್ಧ ತಾಸಿಗೂ ಅಧಿಕ ಕಾಲ ಸಂಚಾರ ವ್ಯವಸ್ಥೆ ಅಸ್ಥವ್ಯಸ್ಥಗೊಡಿತ್ತು.
ಬಸ್ಸಿನ ಚಾಲಕ ಹಾಗೂ ನಿರ್ವಾಹಕ ಲಾರಿಯವರ ಮೇಲೆ ನಡೆಸಿದ ಹಲ್ಲೆಯನ್ನು ಸ್ಥಳಿಯರು ಖಂಡಿಸಿದ್ದು ಕುಂದಾಪುರ ಭಾಗದಲ್ಲಿ ಖಾಸಗಿ ಬಸ್ಸುಗಳ ಆಟಾಟೋಪ ಜಾಸ್ಥಿಯಾಗಿದ್ದು ಇದಕ್ಕೆ ಕಡಿವಾಣ ಹಾಕಲು ಪೊಲೀಸ್ ಇಲಾಖೆಯೂ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.
ಅವರು ವಾಹನ ಚಾಲಕರಾಗಿ ನಮ್ಮ ಕಷ್ಟ ಅರ್ಥಮಾಡಿಕೊಳ್ಳದೇ ಅವ್ಯಾಚವಾಗಿ ಬೈದು ಹಿಗ್ಗಾಮುಗ್ಗ ಥಳಿಸಿದ್ದಾರೆ. ಸ್ಥಳಿಯರ ಸಹಕಾರದಿಂದ ಬಚವಾಗಿದ್ದೇವೆ ಎಂದು ಚಾಲಕ ನಿರ್ವಾಹರು ತಿಳಿಸಿದ್ದಾರೆ.