ಕರ್ನಾಟಕ

ಅನೈತಿಕ ಸಂಬಂಧ: ತಾಯಿಯನ್ನೇ ಕೊಲೆ ಮಾಡಿಸಿದ್ದ ಮಗ: ಪ್ರಕರಣ ಭೇದಿಸಿದ ಸೋಲದೇವನಹಳ್ಳಿ ಪೊಲೀಸರು

Pinterest LinkedIn Tumblr

bloody_knife

ಬೆಂಗಳೂರು: ಹೆಸರಘಟ್ಟ ರಸ್ತೆ ಸಮೀಪದ ಇಂಡೋ ಡ್ಯಾನಿಷ್‌ ಫಾರ್ಮ್‌ನ ಬಳಿ ನಡೆದಿದ್ದ ಸಿದ್ದಗಂಗಮ್ಮ (45) ಎಂಬುವರ ಕೊಲೆ ಪ್ರಕರಣವನ್ನು ಭೇದಿಸಿರುವ ಸೋಲ­ದೇವನ­ಹಳ್ಳಿ ಪೊಲೀಸರು ಮೃತರ ಮಗ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.

ಸಿದ್ದಗಂಗಮ್ಮ, ವ್ಯಕ್ತಿಯೊಬ್ಬರ ಜತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದರು. ಈ ಸಂಗತಿ ತಿಳಿದು ಕೋಪಗೊಂಡಿದ್ದ ಅವರ ಮಗ ರವಿ ಮತ್ತು ಸಂಬಂಧಿ ರಾಮಣ್ಣ ಅವರು ಸಿದ್ದಗಂಗಮ್ಮನನ್ನು ಕೊಲೆ ಮಾಡಲು ವ್ಯಕ್ತಿಯೊಬ್ಬನಿಗೆ ₨ 1 ಲಕ್ಷ ಸುಪಾರಿ ಕೊಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಸಿದ್ದಗಂಗಮ್ಮ ಪ್ರತಿನಿತ್ಯ ಹಸುಗಳನ್ನು ಮೇಯಿಸಲು ಡ್ಯಾನಿಷ್‌ ಫಾರ್ಮ್‌ನ ಬಳಿ ಹೋಗುತ್ತಿದ್ದ ಬಗ್ಗೆ ರವಿ, ಸುಪಾರಿ ಕೊಟ್ಟಿದ್ದ ವ್ಯಕ್ತಿಗೆ ಮಾಹಿತಿ ನೀಡಿದ್ದ. ಆ ಸುಳಿವು ಆಧರಿಸಿ ನ.17ರಂದು ಫಾರ್ಮ್‌ನ ಬಳಿ ಕಾದು ಕುಳಿತಿದ್ದ ಆರೋಪಿ, ಸಿದ್ದಗಂಗಮ್ಮ ಅವರ ತಲೆಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಕೃತ್ಯದ ಬಳಿಕ ಆರೋಪಿಯು ಸಿದ್ದಗಂಗಮ್ಮನ ಕತ್ತಿನಲ್ಲಿದ್ದ 50 ಗ್ರಾಂ ಚಿನ್ನದ ಸರ ಕಿತ್ತುಕೊಂಡು  ಪರಾರಿ­ಯಾಗಿದ್ದ. ದುಷ್ಕರ್ಮಿಗಳು ಚಿನ್ನಾಭ­ರಣ­ಕ್ಕಾಗಿ ಈ ಕೊಲೆ ಮಾಡಿದ್ದಾರೆ ಎಂಬಂತೆ ಬಿಂಬಿಸಿ ಪ್ರಕರಣದ ದಿಕ್ಕು ತಪ್ಪಿಸುವ ಉದ್ದೇಶಕ್ಕಾಗಿ ಆತ ಸರ ದೋಚಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ರವಿ, ರಾಮಣ್ಣ ಮತ್ತು ಅವರಿಂದ ಸುಪಾರಿ ಪಡೆದಿದ್ದ ಆರೋಪಿಯನ್ನು ಬಂಧಿಸಿರುವ ಪೊಲೀಸರು ಸರ ಹಾಗೂ ಮೊಬೈಲ್‌ಗಳನ್ನು ಜಪ್ತಿ ಮಾಡಿದ್ದಾರೆ.

ತಪ್ಪೊಪ್ಪಿಗೆ: ‘ತಾಯಿಯು ವ್ಯಕ್ತಿಯೊಬ್ಬರ ಜತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದರು. ಈ ವಿಷಯವಾಗಿ ಮನೆಯಲ್ಲಿ ಆಗಾಗ್ಗೆ ಜಗಳವಾ­ಗುತ್ತಿತ್ತು. ಈ ಕಾರಣಕ್ಕಾಗಿ ಅವರನ್ನು ಕೊಲೆ ಮಾಡಿಸಿದೆ’ ಎಂದು ಆರೋಪಿ ರವಿ ಪೊಲೀಸರಿಗೆ ತಪ್ಪೊಪ್ಪಿಗೆ ಹೇಳಿಕೆ ಕೊಟ್ಟಿದ್ದಾನೆ.

Write A Comment