ಕರ್ನಾಟಕ

ಪ್ರೇಯಸಿಗೆ ಇರಿದು ಭಗ್ನಪ್ರೇಮಿ ಆತ್ಮಹತ್ಯೆ ಯತ್ನ

Pinterest LinkedIn Tumblr

knife

ಬೆಂಗಳೂರು: ಭಗ್ನಪ್ರೇಮಿಯೊಬ್ಬರು ತನ್ನ ಪ್ರೇಯಸಿ­ಯನ್ನು ನಡುಬೀದಿಯಲ್ಲಿ ಅಟ್ಟಾಡಿಸಿ ಚಾಕುವಿ­ನಿಂದ ಇರಿದು, ನಂತರ ತಾನೂ ಆತ್ಮಹತ್ಯೆಗೆ ಯತ್ನಿಸಿ­ರುವ ಘಟನೆ ರಾಮಮೂರ್ತಿ­ನಗರ ಬಳಿಯ ಓಎಂ­ಬಿಆರ್‌ ಲೇಔಟ್‌ನಲ್ಲಿ ಸೋಮವಾರ ನಡೆದಿದೆ.

ಜೀವನ್‌ಬಿಮಾನಗರದ ಸ್ಟೀಫನ್‌ (28) ಎಂಬುವರು ಪ್ರೇಯಸಿ ಮಂಜುಳಾ (27) ಅವರಿಗೆ ಚಾಕುವಿ­ನಿಂದ ಇರಿದಿದ್ದಾರೆ. ಬಳಿಕ ಅವರೂ ಅದೇ ಚಾಕುವಿನಿಂದ ಕತ್ತು ಕೊಯ್ದು­ಕೊಂಡಿದ್ದಾರೆ.

ಸ್ಟೀಫನ್‌, ರಾಮಮೂರ್ತಿನಗರ ಬಳಿಯ ಕಸ್ತೂರಿ­­ನಗರದ ಜಿಮ್‌ ಸೆಂಟರ್‌ನಲ್ಲಿ ತರಬೇತು­ದಾರ­ರಾಗಿ­ದ್ದಾರೆ.  ಅದೇ ಜಿಮ್‌ಗೆ ಹೋಗುತ್ತಿದ್ದ ಮಂಜುಳಾ ಅವರಿಗೆ ಸ್ಟೀಫನ್‌ರ ಪರಿಚ­ಯವಾ­ಗಿ ಪರಸ್ಪರರ ಮಧ್ಯೆ ಪ್ರೇಮಾಂಕುರವಾಗಿತ್ತು.

ಮಂಜುಳಾ ಅವರು ಒಂದು ತಿಂಗಳಿ­ನಿಂದ ಜಿಮ್‌ಗೆ ಹೋಗುವುದನ್ನು ನಿಲ್ಲಿ­ಸಿ­ದ್ದರು. ಸ್ಟೀಫನ್‌, ತನ್ನನ್ನು ಮದುವೆ­ಯಾಗುವಂತೆ ಮಂಜುಳಾ ಅವರಿಗೆ ಒತ್ತಾಯಿಸುತ್ತಿದ್ದರು. ಆದರೆ, ವಿವಾ­ಹಿತೆ­ಯಾದ ಅವರು ಮದುವೆಗೆ ನಿರಾ­ಕರಿಸಿದ್ದರು. ಆದರೂ ಸ್ಟೀಫನ್‌, ಅವರ ಬೆನ್ನು ಬಿದ್ದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮಂಜುಳಾ ಅವರು ಮಗನನ್ನು ಮನೆಗೆ ಕರೆದುಕೊಂಡು ಬರಲು ದ್ವಿಚಕ್ರ ವಾಹನದಲ್ಲಿ ಮಧ್ಯಾಹ್ನ ಓಎಂಬಿಆರ್‌ ಲೇಔಟ್‌ನ ಶಾಲೆಗೆ ಹೋಗುತ್ತಿದ್ದರು. ಆಗ ಸ್ಟೀಫನ್‌, ಅವರನ್ನು ಬೈಕ್‌ನಲ್ಲಿ ಹಿಂಬಾ­ಲಿಸಿ ಬಂದು ಅಡ್ಡಗಟ್ಟಿದ್ದಾರೆ. ಬಳಿಕ ಪರಸ್ಪರರ ಮಧ್ಯೆ ವಾಗ್ವಾದ ನಡೆದಿದೆ. ಈ ವೇಳೆ ಸ್ಟೀಫನ್‌,  ಚಾಕು ತೆಗೆದು ಕೊಲ್ಲುವುದಾಗಿ ಬೆದರಿಸಿದ್ದಾರೆ.

ಇದರಿಂದ ಗಾಬರಿಯಾದ ಅವರು ವಾಹನ ಬಿಟ್ಟು ಓಡಿ ಹೋಗಲು ಯತ್ನಿಸಿದ್ದಾರೆ. ನಂತರ ಸ್ಟೀಫನ್‌, ಅವರನ್ನು ಬೆನ್ನಟ್ಟಿದ್ದಾರೆ. ಈ ಹಂತದಲ್ಲಿ ಮಂಜುಳಾ ಅವರು ಮನೆಯೊಂದರ ಕಾರು ಶೆಡ್‌ನೊಳಗೆ ಹೋಗಿದ್ದಾರೆ. ಅಲ್ಲಿಗೂ ಹಿಂಬಾಲಿಸಿ ಹೋದ ಸ್ಟೀಫನ್‌, ಅವರ ಹೊಟ್ಟೆ, ಕತ್ತು ಮತ್ತು ಬೆನ್ನಿಗೆ ಚಾಕುವಿನಿಂದ ಇರಿದಿದ್ದಾರೆ. ಆ ನಂತರ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಮಂಜುಳಾ ಮತ್ತು ಸ್ಟೀಫನ್‌ರ ಚೀರಾಟ ಕೇಳಿದ ಮನೆ ಮಾಲೀಕರು ಸ್ಥಳೀಯರ ನೆರವಿನಿಂದ ಅವರಿಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರ ಸ್ಥಿತಿ ಗಂಭೀರವಾಗಿದೆ.

ಮಂಜುಳಾ ಅವರು ಪತಿ ಮತ್ತು ಮಗನ ಜತೆ ಕಸ್ತೂರಿನಗರದಲ್ಲಿ ವಾಸ­ವಾಗಿದ್ದಾರೆ. ಅವರ ಮದುವೆಯಾಗಿ ಆರು ವರ್ಷವಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಘಟನೆ ಸಂಬಂಧ ರಾಮಮೂರ್ತಿ­ನಗರ ಪೊಲೀಸರು ಸ್ಟೀಫನ್‌ ವಿರುದ್ಧ ಕೊಲೆ ಯತ್ನ ಮತ್ತು ಆತ್ಮಹತ್ಯೆ ಯತ್ನ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Write A Comment