ಬೆಂಗಳೂರು, ಡಿ.7: ದೇಶದಲ್ಲಿ ಶಿಕ್ಷಣ ರಾಷ್ಟ್ರೀಕರಣವಾದಲ್ಲಿ ಮಾತ್ರ ರಾಜ್ಯಗಳ ಭಾಷಾ ಮಾಧ್ಯಮ ಸಮಸ್ಯೆ ಇತ್ಯರ್ಥವಾಗಲು ಸಾಧ್ಯ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ. ಚಂದ್ರಶೇಖರ ಕಂಬಾರ ಅಭಿಪ್ರಾಯಪಟ್ಟರು.
ರವಿವಾರ ನಗರದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸೃಷ್ಟಿ ವೆಂಚರ್ಸ್ ಆಯೋಜಿಸಿರುವ ಮೂರು ದಿನಗಳ ಪುಸ್ತಕ ಪರಿಷೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕನ್ನಡ ಸೇರಿದಂತೆ ಎಲ್ಲ ಪ್ರಾದೇಶಿಕ ಭಾಷೆಗಳು ಅಪಾಯದ ಅಂಚಿನಲ್ಲಿವೆ. ಆಯಾ ರಾಜ್ಯಗಳ ಭಾಷೆಗೆ ಆದ್ಯತೆ ಸಿಗದೆ ಇದ್ದಲ್ಲಿ ಯಾವುದೇ ಮಾತೃಭಾಷೆಯನ್ನು ಉಳಿಸಿ ಬೆಳೆಸಲು ಸಾಧ್ಯವಾಗುವುದಿಲ್ಲ. ಮಾತೃಭಾಷೆಯಲ್ಲಿ ಕಲಿಸುವಿಕೆಗೆ ಸಂಬಂಧಿಸಿದಂತೆ ನ್ಯಾಯಾಲಯವೇನೋ ತೀರ್ಪು ನೀಡಿದೆ. ಇದನ್ನು ಪ್ರಶ್ನಿಸಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣವನ್ನು ರಾಷ್ಟ್ರೀಕರಣ ಮಾಡದೆ ಬೇರೆ ದಾರಿಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.
ಆಯಾ ಪ್ರದೇಶದ ಮಕ್ಕಳ ಬೆಳವಣಿಗೆಗೆ ಆಯಾ ಪ್ರದೇಶದ ಭಾಷೆಯಿಂದ ಮಾತ್ರ ಸಾಧ್ಯ. ರಾಜ್ಯಭಾಷೆಯನ್ನು ಬಳಕೆ ಮಾಡದೆ ಇದ್ದಲ್ಲಿ ಮಕ್ಕಳಲ್ಲಿ ಸೃಜನಶೀಲತೆ ಬೆಳೆಯುವುದಿಲ್ಲ. ಆಂಗ್ಲ ಭಾಷೆ ಕಲಿಕೆಯಿಂದಾಗಿ ಮಕ್ಕಳಲ್ಲಿನ ಸೃಜಶೀಲತೆಗೆ ಧಕ್ಕೆಯಾಗುತ್ತಿದೆ. ಇದಕ್ಕಾಗಿ ರಾಜ್ಯಭಾಷೆಯಲ್ಲಿ ಶಿಕ್ಷಣ ನೀಡಬೇಕು ಎಂದು ಕಂಬಾರರು ಸಲಹೆ ನೀಡಿದರು.
ಭ್ರಮೆಯಲ್ಲಿ ಪೋಷಕರು: ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗೆ ಸೇರಿಸಿದರೆ ಮಾತ್ರ ಉದ್ಧಾರವಾಗುತ್ತಾರೆ ಎಂಬ ಮನೋಭಾವ ಪೋಷಕರಲ್ಲಿ ಹೆಚ್ಚಾಗುತ್ತಿದೆ. ಆಂಗ್ಲ ಭಾಷೆಯಲ್ಲಿ ಶಿಕ್ಷಣ ಕೊಡಿಸುವುದರಿಂದ ಮಕ್ಕಳು ಬೆಳವಣಿಗೆ ಕಾಣುತ್ತಾರೆ ಎಂಬ ಭ್ರಮೆಯಲ್ಲಿ ಪೋಷಕರಿದ್ದಾರೆ. ಆಯಾ ರಾಜ್ಯಗಳ ಭಾಷೆಯಲ್ಲಿ ಶಿಕ್ಷಣ ಸಿಕ್ಕಲ್ಲಿ ಮಾತ್ರ ಮಕ್ಕಳು ಶೈಕ್ಷಣಿಕವಾಗಿ ಬೆಳವಣಿಗೆ ಕಾಣಲು ಸಾಧ್ಯ ಎಂದು ಅವರು ಪ್ರತಿಪಾದಿಸಿದರು.
ಅಭಿಯಾನ ಆರಂಭ: ರಾಜ್ಯ ಭಾಷೆಯಲ್ಲಿ ಶಿಕ್ಷಣ ಕಡ್ಡಾಯವಾಗಬೇಕು ಎಂದು ಆಗ್ರಹಿಸಿ ಕೇಂದ್ರ ಸಾಹಿತ್ಯ ಅಕಾಡಮಿ ಸಹಿ ಸಂಗ್ರಹ ಅಭಿಯಾನ ಆರಂಭಿಸಿದೆ. ಎಲ್ಲ ರಾಜ್ಯಗಳಲ್ಲೂ ಈ ಅಭಿಯಾನ ಆರಂಭವಾಗಿದೆ. ಕರ್ನಾಟಕ, ಗುಜರಾತ್, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಆರಂಭಿಸಲಾಗಿರುವ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಈ ಸಹಿ ಸಂಗ್ರಹ ಅಭಿಯಾನದಲ್ಲಿ ಕರ್ನಾಟಕದ ಪ್ರತಿಯೊಬ್ಬರೂ ಭಾಗವಹಿಸಿ ಸಹಿ ಹಾಕಿ ನಮ್ಮ ಭಾಷೆಯನ್ನು ಉಳಿಸಿಕೊಳ್ಳಬೇಕಿದೆ ಎಂದು ಕಂಬಾರ ಇದೇ ವೇಳೆ ಕರೆ ನೀಡಿದರು.
ಪುಸ್ತಕ ವೀಕ್ಷಣೆಗೆ ಮುಗಿಬಿದ್ದ ಜನ
ಬೆಂಗಳೂರು: ಅಲ್ಲಿ ಹೆಚ್ಚಿನ ಸಂಖ್ಯೆ ಯಲ್ಲಿ ವಿದ್ಯಾರ್ಥಿಗಳು, ಸಾಹಿತ್ಯಾ ಸಕ್ತರು ಹಾಗೂ ಸಾರ್ವಜನಿಕರು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದರು. ವೇದಿಕೆಯಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಣ್ತುಂಬಿ ಕೊಳ್ಳುವ ಜೊತೆಗೆ ಪುಸ್ತಕಗಳನ್ನು ವೀಕ್ಷಿಸಲು ಮುಗಿಬೀಳುತ್ತಿದ್ದರು
–ಈ ದೃಶ್ಯಗಳು ಕಂಡುಬಂದಿದ್ದು ಸೃಷ್ಟಿ ವೆಂಚರ್ಸ್ ವತಿಯಿಂದ ಜಯ ನಗರ ನ್ಯಾಷನಲ್ ಕಾಲೇಜು ಮೈದಾನ ದಲ್ಲಿ ಏರ್ಪಡಿಸಿರುವ ಏಳನೇ ಪುಸ್ತಕ ಪರಿಷೆಯಲ್ಲಿ. ಕಲೆ, ಸಾಹಿತ್ಯ, ವಿಜ್ಞಾನ, ವೈಚಾರಿಕತೆ, ವಿಮರ್ಶೆ ಸೇರಿದಂತೆ ವಿವಿಧ ಬಗೆಯ ಪುಸ್ತಕಗಳನ್ನು ಜನರು ವೀಕ್ಷಿಸಿದರು. ಮಕ್ಕಳು ಪಠ್ಯಕ್ಕೆ ಸಂಬಂಧಿ ಸಿದ ಪುಸ್ತಕಗಳ ವೀಕ್ಷಣೆಯಲ್ಲಿ ತಲ್ಲೀನ ರಾಗಿದ್ದುದು ಕಂಡು ಬಂತು. ಪರಿಷೆಗೆ ಬಂದಿದ್ದ ಪ್ರತಿಯೊಬ್ಬರಿಗೂ ಒಂದು ಪುಸ್ತಕವನ್ನು ಉಚಿತವಾಗಿ ನೀಡ ಲಾಯಿತು.
ಜನರಲ್ಲಿ ಇಂಗ್ಲಿಷ್ ವ್ಯಾಮೋಹ ಹೆಚ್ಚುತ್ತಿದೆ. ಇಂಗ್ಲಿಷ್ ಶಿಕ್ಷಣದಿಂದಾಗಿ ಮಕ್ಕಳಲ್ಲಿ ಸೃಜನಶೀಲತೆ ಮರೆ ಯಾಗುತ್ತದೆ ಎಂದು ಕಂಬಾರ ಹೇಳಿದರು.
ಕವಿ ಸಿದ್ದಲಿಂಗಯ್ಯ ಮಾತನಾಡಿ, ‘ಈ ರೀತಿ ದೊಡ್ಡಮಟ್ಟದ ಪುಸ್ತಕ ಪರಿಷೆ ಯಾವ ರಾಜ್ಯಗಳಲ್ಲಿಯೂ ನಡೆ ಯುತ್ತಿಲ್ಲ. ಪೋಷಕರು ಹಾಗೂ ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಪ್ರಧಾನಿಗಳಿಗೆ ಮನವರಿಕೆ ಮಾಡ ಲಾಗುವುದು: ‘ಭಾಷಾ ಮಾಧ್ಯಮಕ್ಕೆ ಸಂಬಂಧಸಿದಂತೆ ಮುಖ್ಯಮಂತ್ರಿ ಗಳೊಂದಿಗೆ ಈಗಾಗಲೆ ಚರ್ಚೆ ನಡೆಸಿದ್ದೇನೆ. ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಲು ರಾಜ್ಯದಿಂದ ನಿಯೋಗ ಕರೆದುಕೊಂಡು ಬರುವಂತೆ ಹೇಳಲಾಗಿದೆ. ಅಲ್ಲದೇ, ಎಲ್ಲ ಸಂಸದರೊಂದಿಗೆ ಸೇರಿ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸ ಲಾಗುವುದು. ರಾಜ್ಯಗಳಲ್ಲಿ ಮಾತೃ ಭಾಷೆಯನ್ನು ಶಿಕ್ಷಣ ಮಾಧ್ಯಮವನ್ನಾಗಿ ಮಾಡುವ ಬಗ್ಗೆ ಮನವರಿಕೆ ಮಾಡಿ ಕೊಡ ಲಾಗುದು’ ಎಂದು ಕೇಂದ್ರ ಸಚಿವ ಅನಂತ ಕುಮಾರ್ ತಿಳಿಸಿದರು.
