ಬೆಂಗಳೂರು: ಎಟಿಎಂ ಘಟಕದಲ್ಲಿ ಯುವತಿಯರಿಗೆ ಚಾಕುವಿನಿಂದ ಬೆದರಿಸಿ, ಮೊಬೈಲ್ ದೋಚಿ ಪರಾರಿಯಾಗಲು ಯತ್ನಿಸಿದ ಮಹಮದ್ ಮುನಾವರ್ (25) ಎಂಬಾತನನ್ನು ಸಾರ್ವಜನಿಕರೇ ಹಿಡಿದು ಹ್ರೈಗ್ರೌಂಡ್ಸ್ ಪೊಲೀಸರ ವಶಕ್ಕೆ ಒಪ್ಪಿಸಿರುವ ಘಟನೆ ಶುಕ್ರವಾರ ನಡೆದಿದೆ.
ಖಾಸಗಿ ಆಸ್ಪತ್ರೆಯ ಶುಶ್ರೂಷಕಿಯರಾದ ನಯನಾ ಮತ್ತು ಸವಿತಾ ಎಂಬುವರು, ರಾತ್ರಿ 7.30ರ ಸುಮಾರಿಗೆ ಹಣ ಡ್ರಾ ಮಾಡಲು ವಸಂತನಗರದಲ್ಲಿನ ಪಂಜಾಬ್ ನ್ಯಾಷನಲ್ ಬ್ಯಾಂಕ್ ಎಟಿಎಂ ಘಟಕಕ್ಕೆ ಹೋಗಿದ್ದರು. ಈ ವೇಳೆ ಅವರನ್ನು ಹಿಂಬಾಲಿಸಿ ಘಟಕದೊಳಗೆ ಹೋದ ಆರೋಪಿ, ಚಾಕುವಿನಿಂದ ಬೆದರಿಸಿ ಪರ್ಸ್ ಕಿತ್ತುಕೊಂಡಿದ್ದಾನೆ. ಅದರಲ್ಲಿ ಹಣ ಇರದ ಕಾರಣ, ನಯನಾ ಅವರ ಕೈಲಿದ್ದ ಮೊಬೈಲ್ ಕಸಿದುಕೊಂಡು ಓಡಿದ್ದಾನೆ.
ಕೂಡಲೇ ಘಟಕದಿಂದ ಹೊರ ಬಂದ ಯುವತಿಯರು, ನೆರವಿಗಾಗಿ ಕೂಗಿಕೊಂಡಿದ್ದಾರೆ. ಅವರ ಚೀರಾಟ ಕೇಳಿದ ಸಾರ್ವಜನಿಕರು, ಆರೋಪಿಯನ್ನು ಬೆನ್ನಟ್ಟಿ ಹಿಡಿದಿದ್ದಾರೆ. ನಂತರ ಹಿಗ್ಗಾಮುಗ್ಗಾ ಥಳಿಸಿ, ಆ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ಹೈಗ್ರೌಂಡ್ಸ್ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
‘ಅಸ್ಸಾಂ ಮೂಲದ ಮುನಾವರ್, ಮೂರು ವರ್ಷಗಳ ಕಾಲ ಆಂಧ್ರಪ್ರದೇಶದಲ್ಲಿ ನೆಲೆಸಿದ್ದ. ಒಂದೂವರೆ ವರ್ಷದ ಹಿಂದೆ ನಗರಕ್ಕೆ ಬಂದ ಈತ, ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಕಿಸೆಗೆ ಕತ್ತರಿ ಹಾಕಿಕೊಂಡು ಬದುಕುತ್ತಿದ್ದ. ನಂತರ ಬಚ್ಚನ್ ಎಂಬಾತನ ಜತೆ ಸೇರಿಕೊಂಡು ಡಕಾಯಿತಿಗೆ ಇಳಿದಿದ್ದ. ಈ ಪ್ರಕರಣ ಸಂಬಂಧ ಸಂಜಯನಗರ ಪೊಲೀಸರು ಆತನನ್ನು ಬಂಧಿಸಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿದ್ದರು.
ಖರ್ಚಿಗೆ ಕಾಸಿರಲಿಲ್ಲ: ‘1 ವರ್ಷ 3 ತಿಂಗಳ ಕಾಲ ಶಿಕ್ಷೆ ಅನುಭವಿಸಿದ ಮುನಾವರ್, ಐದು ದಿನಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ. ಕಾರಾಗೃಹದಲ್ಲಿ ಕೆಲಸ ಮಾಡಿ ಗಳಿಸಿದ್ದ ಹಣ ಖರ್ಚಾಗಿದ್ದರಿಂದ, ಮತ್ತೆ ದರೋಡೆಗೆ ಇಳಿದಿದ್ದ. ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಪಡೆಯಲಾಗುವುದು’ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು.