ಬೆಂಗಳೂರು: ‘ಮಾದಿಗ, ಹೊಲೆಯ ಮುಂತಾದ ಪದಗಳು ಪರಿಶಿಷ್ಟ ಜಾತಿ ಮತ್ತು ಪಂಗಡದ ಪಟ್ಟಿಯಲ್ಲೇ ಇವೆ. ಹೀಗಾಗಿ ಅವುಗಳ ನಿಷೇಧ ಸಾಧ್ಯವಿಲ್ಲ’ ಎಂದು ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಹೇಳಿದರು.
ಗುರುವಾರ ಇಲ್ಲಿ ಜಾತಿ ಸಮೀಕ್ಷೆಯ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ‘ಹಜಾಮ, ದರ್ಬೇಸಿ, ಕಳ್ಳವಡ್ಡ ಮುಂತಾದ ಪದಗಳು ನಿಂದನೆಯ ಪದಗಳಾಗಿದ್ದು, ಇವುಗಳಿಗೆ ಪರ್ಯಾಯ ಪದಗಳೂ ಇರುವ ಕಾರಣ ಈ ಹೆಸರುಗಳನ್ನು ಕೈಬಿಡಲು ಆಯೋಗಕ್ಕೆ ಸೂಚಿಸಲಾಗಿದೆ’ ಎಂದು ಅವರು ಸ್ಪಷ್ಟಪಡಿಸಿದರು.
‘ಜಾತಿ ಜನಗಣತಿಯ ಸಂದರ್ಭದಲ್ಲಿ ನಿಜವಾದ ಜಾತಿಯನ್ನು ಬಹಿರಂಗಪಡಿಸದೇ ಇದ್ದವರು ಸೌಲಭ್ಯ ವಂಚಿತರಾಗಲಿದ್ದಾರೆ. ಸ್ವಾಭಿಮಾನ ಬದಿಗಿಟ್ಟು ಎಲ್ಲರೂ ಸರಿಯಾದ ಮಾಹಿತಿ ನೀಡಿ ಸಾಮಾಜಿಕ ನ್ಯಾಯದ ಪರ ಕೆಲಸಕ್ಕೆ ಸಹಕರಿಸಬೇಕು’ ಎಂದು ಮನವಿ ಮಾಡಿದರು.
ಬ್ರಾಹ್ಮಣ, ಒಕ್ಕಲಿಗ ಸೇರ್ಪಡೆ: ಜನಗಣತಿಯ ಜಾತಿಗಳ ಪಟ್ಟಿಯ 3(ಎ) ಯಲ್ಲಿ ಒಕ್ಕಲಿಗ ಮತ್ತು ಬ್ರಾಹ್ಮಣ ಜಾತಿ ಸೇರಿಸಿರುವುದರಲ್ಲಿ ಯಾರ ಕೈವಾಡವೂ ಇಲ್ಲ. ಅದು ಆಯೋಗ ತಯಾರಿಸಿದ ಪಟ್ಟಿ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ವೀರಶೈವ ಲಿಂಗಾಯತ ಪಂಚಮಸಾಲಿ ಮಹಾಸಭಾದ ಅಧ್ಯಕ್ಷ ಬಸವರಾಜ ತಿಂಡೂರ ಮಾತನಾಡಿ, ‘ವೀರಶೈವ ಲಿಂಗಾಯತ ಜಾತಿ ಅಲ್ಲ. ಅದನ್ನು ಧರ್ಮ ಎಂದು ಜಾತಿಪಟ್ಟಿ ಯಲ್ಲಿ ಸೇರಿಸಬೇಕು. ಜಾತಿ ಪಟ್ಟಿಯಲ್ಲಿ ವೀರಶೈವ ಲಿಂಗಾಯತ ಎಂದು ಬರೆಯಲಾಗಿದೆ. ಅದನ್ನು ವೀರಶೈವ ಲಿಂಗಾಯತ ಪಂಚಮಸಾಲಿ ಎಂದು ಬದಲಾಯಿಸಬೇಕು’ ಎಂದು ಮನವಿ ಮಾಡಿದರು.
‘ನಾನೇ ಮಾದಿಗ ಎನ್ನುತ್ತಿದ್ದೇನೆ…’
ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಅವರು, ‘ಕೊರಗ ಮತ್ತು ಕೊರಚ ಪದವನ್ನು ಕೈ ಬಿಡಬೇಕು’ ಎಂದು ಸಲಹೆ ನೀಡಿದಾಗ, ‘ನಾನೇ ಮಾದಿಗ ಎಂದು ಹೇಳಿಕೊಳ್ಳುತ್ತಿದ್ದೇನೆ. ಹೀಗಿರುವಾಗ ಕೊರಗ, ಕೊರಚ ಎಂದು ಹೇಳಿಕೊಳ್ಳಲು ಹಿಂಜರಿಕೆ ಏಕೆ’ ಎಂದು ಸಚಿವ ಆಂಜನೇಯ ಪ್ರಶ್ನಿಸಿದರು.
ವಿಭಿನ್ನ ಅನಿಸಿಕೆ ನನಗೇ ಒಂಬತ್ತಾಗಿದೆ
ಇತ್ತೀಚೆಗೆ ದೃಶ್ಯ ಮಾಧ್ಯಮವೊಂದು ರಾಜ್ಯದಲ್ಲಿ 25 ಸಾವಿರ ಮುಸಲ್ಮಾನರಿದ್ದಾರೆ ಎಂದು ವರದಿ ಮಾಡಿತ್ತು. ನನಗೇ ಒಂಬತ್ತು ಮಕ್ಕಳಾಗಿವೆ. ಅದು ಹೇಗೆ 25 ಸಾವಿರ ಜನಸಂಖ್ಯೆ ಎಂದು ಹೇಳುತ್ತಾರೆ. ಇದು ಸಮೀಕ್ಷೆಯಿಂದ ಬಯಲಾಗಲಿ.
–ಸಿ.ಎಂ.ಇಬ್ರಾಹಿಂ
ಗುಳೆ ಹೋದವರ ಸಮೀಕ್ಷೆ
ಹಾಡಿ, ತಾಂಡ, ಗೊಲ್ಲರಹಟ್ಟಿಯಿಂದ ಗುಳೆ ಹೋದವರು ದೀಪಾವಳಿ ಸಮಯದಲ್ಲಿ ವಾಪಸ್ ಊರಿಗೆ ಬರುತ್ತಾರೆ. ಆ ಸಮಯದಲ್ಲಿ ಸಮೀಕ್ಷೆ ನಡೆಸುವುದು ಸೂಕ್ತ.
–ಬಿ.ಟಿ.ಲಲಿತಾನಾಯಕ್, ಸಾಹಿತಿ
ನೀವು ಹೇಳಿದ್ದೇ ಜಾತಿ
ಜಾತಿ ಸಮೀಕ್ಷೆಗೆ ಬರುವಾಗ ಪ್ರತಿಯೊಬ್ಬರು ನೀಡಿದ ಜಾತಿಯೇ ಅಂತಿಮ. ಹಾಗಾಗಿ ಸರಿಯಾದ ಜಾತಿ ಹೇಳಿ ಸಹಕರಿಸಬೇಕು. ಜಾತಿಪಟ್ಟಿಯನ್ನು ಸಾರ್ವಜನಿಕರ ಮಾಹಿತಿಯಂತೆ ಸಿದ್ಧಪಡಿಸಲಾಗಿದೆ.
–ಎಚ್. ಕಾಂತರಾಜ್, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ
ಮತಾಂತರಕ್ಕೆ ಕಾರಣ ತಿಳಿಯಿರಿ
ಶೋಷಿತರು ಮತಾಂತರ ಹೊಂದಲು ಕಾರಣವೇನು ಎಲ್ಲರೂ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು. ನಾಯಿ– ನರಿಗೆ ನೀಡುವ ಬೆಲೆ ನಮ್ಮ ಧರ್ಮ ಮನುಷ್ಯರಿಗೆ ನೀಡಿಲ್ಲ. ಹಿಂದೂ ಧರ್ಮದಲ್ಲಿನ ನ್ಯೂನತೆಯಿಂದಾಗಿ ಅಪಮಾನದಿಂದಾಗಿ, ಸಾಮಾಜಿಕ ಗೌರವಕ್ಕೋಸ್ಕರ ಮತಾಂತರವಾಗುತ್ತಿದ್ದಾರೆ.
–ಎಚ್. ಆಂಜನೇಯ
ಸೌಲಭ್ಯ ಕೊಳ್ಳೆಗೆ ಕತ್ತರಿ
ಸಮೀಕ್ಷೆಯಿಂದ ಜಾತಿ ಜನಸಂಖ್ಯೆಯ ನಿಜವಾದ ಲೆಕ್ಕ ಸಿಗಲಿದೆ. ಸುಳ್ಳು ಜಾತಿ ಪ್ರಮಾಣಪತ್ರ ಮಾಡಿಸಿ ಸೌಲಭ್ಯ ಕೊಳ್ಳೆ ಹೊಡೆಯುವುದನ್ನು ತಡೆಯಬಹುದು.
–ಆರ್.ವಿ. ಸುದರ್ಶನ್
ನಿಮ್ಮ ಜಾತಿಯೇ ನಮ್ಮದು
‘ನಿಮ್ಮ ಜಾತಿ ಯಾವುದು’ ಎಂದು ಕೇಳಿದರೆ, ಹಿಂಜರಿಕೆಯಿಂದ ‘ನಿಮ್ಮದು ಯಾವುದು ಎಂದು ಮರುಪ್ರಶ್ನೆ ಹಾಕಿ, ಅದೇ ನಮ್ಮದು’ ಎಂದು ಹೇಳುವ ಸ್ಥಿತಿಯಲ್ಲಿ ದಲಿತರಿದ್ದಾರೆ. ಇದು ಬದಲಾಗಬೇಕಾದರೆ ಆರ್ಥಿಕ ಮತ್ತು ಸಾಮಾಜಿಕ ಸಮಾನತೆ ತರಬೇಕು. ಆಗ ಜಾತಿ ನಾಶವಾಗುತ್ತದೆ.
–ಸಿದ್ದಲಿಂಗಯ್ಯ, ಕವಿ