ಕರ್ನಾಟಕ

ಮುಂಬಯಿನಲ್ಲಿ ಬೆಂಗಳೂರು ನಗರ ಪೊಲೀಸರ ಸೆರೆ! ಪೊಲೀಸರನ್ನೇ ಅಪಹರಣಕಾರರು ಎಂದು ಸುಳ್ಳು ಹೇಳಿ ಫಜೀತಿಗೆ ಸಿಲುಕಿಸಿದ ಆರೋಪಿ ಡಾ. ಸಂತೋಷ್ ರೈ

Pinterest LinkedIn Tumblr

hand_cuff_arrest_AP_Photo_0

ಬೆಂಗಳೂರು: ವೈದ್ಯ ಸೀಟು ಕೊಡಿಸುವುದಾಗಿ ವಂಚಿಸಿದ್ದ ಆರೋಪಿಯನ್ನು ಬಂಧಿಸಲು ಮುಂಬಯಿಗೆ ತೆರಳಿದ್ದ ಬೆಂಗಳೂರಿನ ವಿಶೇಷ ಪೊಲೀಸ್ ತಂಡದ ಅಧಿಕಾರಿಗಳನ್ನು ಮುಂಬಯಿ ಪೊಲೀಸರು ಬಂಧಿಸಿ ತಾವು ಮಾಡಿದ ತಪ್ಪಿನ ಅರಿವಾದ ಬಳಿಕ ಅವರನ್ನು ಬಿಡುಗಡೆಗೊಳಿಸಿದ ಘಟನೆ ಮುಂಬಯಿನಲ್ಲಿ ಭಾನುವಾರ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ತಿಲಕನಗರ ನಿವಾಸಿ ಡಾ. ಸಂತೋಷ್ ರೈ ಎಂಬಾತ ಕೆಲ ದಿನಗಳ ಹಿಂದೆ ವೈದ್ಯ ಸೀಟು ಕೊಡಿಸುವುದಾಗಿ 10 ವಿದ್ಯಾರ್ಥಿಗಳಿಂದ ತಲಾ 10 ಲಕ್ಷ ವಸೂಲಿ ಮಾಡಿ ಮುಂಬಯಿನಲ್ಲಿ ತಲೆಮರೆಸಿಕೊಂಡಿದ್ದ. ಈತನ ಹುಡುಕಾಟಕ್ಕಾಗಿ ಬೆಂಗಳೂರಿನ ವಿಶೇಷ ಪೊಲೀಸರ ತಂಡ ಮುಂಬಯಿಗೆ ತೆರಳಿತ್ತು. ಆರೋಪಿಯ ಮೊಬೈಲ್ ನಟ್‌ವರ್ಕ್ ಆಧಾರದಲ್ಲಿ ಮುಂಬಯಿನ ಗುರುಗಾಂವ್ ಪ್ರದೇಶದಲ್ಲಿರುವುದು ಗೊತ್ತಾಗಿತ್ತು. ಭಾನುವಾರ ಮಧ್ಯಾಹ್ನ 12.30ರ ವೇಳೆಗೆ ಡಾ.ಸಂತೋಷ್ ರೈ ಗುರುಗಾಂವ್‌ನಲ್ಲಿ ತಿರುಗಾಡುವುದನ್ನು ಮಫ್ತಿಯಲ್ಲಿರುವ ಪೊಲೀಸರ ತಂಡ ಗಮನಿಸಿದ್ದು, ತಕ್ಷಣ ಆತನನ್ನು ಬಂಧಿಸಿ, ರಾಷ್ಟ್ರೀಯ ಹೆದ್ದಾರಿ-4ರ ಮೂಲಕ ಬೆಂಗಳೂರಿಗೆ ಹೊರಟಿದ್ದಾರೆ.

ಅಲ್ಲಿಂದ ಐದು ಕಿ.ಮೀ ದೂರ ಬರವಷ್ಟರಲ್ಲಿ ತಾನು ಕುಟುಂಬದ ಸದಸ್ಯರ ಜತೆ ಮಾತನಾಡಬೇಕು ಎಂದು ಆರೋಪಿ ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದಾನೆ. ಮನೆಯವರಿಗೆ ಮಾತ್ರ ಮಾಹಿತಿ ನೀಡುವಂತೆ ಪೊಲೀಸರು ಅನುಮತಿ ನೀಡಿದ್ದಾರೆ. ಆದರೆ, ಚಾಣಾಕ್ಷ ಆರೋಪಿ ಮೊಬೈಲ್ ಮೂಲಕ ಮರಾಠಿ ಭಾಷೆಯಲ್ಲಿ ಕರ್ನಾಟಕ ನೋಂದಣಿ ಕಾರಿನಲ್ಲಿ ಕೆಲ ದುಷ್ಕರ್ಮಿಗಳು ನನ್ನನ್ನು ಅಪಹರಿಸಿಕೊಂಡು ಹೋಗುತ್ತಿದ್ದಾರೆಂದು ಪೋಷಕರಿಗೆ ಮಾಹಿತಿ ನೀಡಿದ್ದಾನೆ. ಮರಾಠಿಯಾದ ಕಾರಣ ಪೊಲೀಸರಿಗೆ ಅದು ಅರ್ಥವಾಗಿರಲಿಲ್ಲ. ಆದರೆ, ಆರೋಪಿಯ ಪೋಷಕರು ತಕ್ಷಣ ಮುಂಬಯಿ ಪೊಲೀಸ್ ಕಂಟ್ರೋಲ್ ರೊಂಗೆ ಅಪಹರಣದ ಮಾಹಿತಿ ತಲುಪಿಸಿದ್ದಾರೆ. ಅಲ್ಲಿನ ಪೊಲೀಸರು ರಾಷ್ಟ್ರೀಯ ಹೆದ್ದಾರಿ-4ರ ಸುತ್ತಮುತ್ತ ಹಾಗೂ ಮುಂಬಯಿ ನಗರದ ಎಲ್ಲೆಡೆ ನಾಕಾಬಂದಿ ಹಾಕಿ ವಾಹನಗಳನ್ನು ತಪಾಸಣೆಗೆ ಒಳಪಡಿಸಲು ಆರಂಭಿಸಿದ್ದಾರೆ. ಅದರಂತೆ ನಗರದ ಪೊಲೀಸ್ ತಂಡವಿದ್ದ ಇನೋವಾ ಕಾರನ್ನು ನಿಲ್ಲಿಸಿದ್ದಾರೆ. ಈ ವೇಳೆ ಕಾರಿನಲ್ಲಿದ್ದ ಪೊಲೀಸರು ಸಮವಸ್ತ್ರ ಧರಿಸದ ಕಾರಣ ಮುಂಬಯಿ ಪೊಲೀಸರು ಇವರೇ ಅಪಹರಣಕಾರರಿರಬಹುದೆಂದು ಭಾವಿಸಿ ಬಂಧಿಸಿದ್ದಾರೆ. ತಮ್ಮ ಗುರುತಿನ ಚೀಟಿ ತೋರಿಸಿದರೂ ನಂಬದ ಮುಂಬಯಿ ಪೊಲೀಸರು ಎಲ್ಲರನ್ನೂ ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ನಗರದಿಂದ ಹೊರಟ ಪೊಲೀಸರಿಗೆ ಹಿಂದಿ ಮತ್ತು ಮರಾಠಿ ಭಾಷೆ ಗೊತ್ತಿಲ್ಲದಿರುವುದೂ ಸಮಸ್ಯೆಗೆ ಕಾರಣವಾಗಿತ್ತು.

ತಕ್ಷಣ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ಅವರನ್ನು ಸಂಪರ್ಕಿಸಿ ಮಾಹಿತಿ ನೀಡಿದಾರೆ. ಅವರು ಮುಂಬಯಿಯ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿ, ಪೊಲೀಸರು ಮತ್ತು ಆರೋಪಿಯನ್ನು ಬಿಡುಗಡೆ ಮಾಡಿಸಿದ್ದಾರೆ.

ಬಂಧಿಸಿಲ್ಲ, ಠಾಣೆಗೆ ಕರೆದೊಯ್ದಿರು
ಮುಂಬಯಿ ಪೊಲೀಸರು ಬೆಂಗಳೂರು ಪೊಲೀಸರನ್ನು ಬಂಧಿಸಿಲ್ಲ .ತಪ್ಪು ತಿಳಿವಳಿಕೆಯಿಂದ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದರು. ಇವರು ನಿಜವಾದ ಪೊಲೀಸರೆಂದು ಗೊತ್ತಾಗಿ ಅಲ್ಲಿಂದ ಕಳುಹಿಸಿದ್ದಾರೆ. ನಮ್ಮ ಪೊಲೀಸ್ ತಂಡ ಆರೋಪಿಯನ್ನು ಬಂಧಿಸಿ ಬೆಂಗಳೂರಿಗೆ ಕರೆತಂದಿದೆ.
-ಹೇಮಂತ್ ನಿಂಬಾಳ್ಕರ್, ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ

ಹಲವು ಪ್ರಕರಣಗಳ ಸರದಾರ
ಮುಂಬಯಿಯ ಗುರುಗಾಂವ್ ನಿವಾಸಿಯಾದ ಸಂತೋಷ್ ರೈ, ದಿಲ್ಲಿ , ಮಹಾರಾಷ್ಟ್ರ ಮತ್ತು ಕರ್ನಾಟಕ ಸೇರಿದಂತೆ ಮತ್ತಿತರ ಕಡೆ ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದ. ಬಿಡದಿ ಮಠದ ನಿತ್ಯಾನಂದ ಸ್ವಾಮಿ, ರಾಜಕಾರಣಿಗಳು ಹಾಗೂ ಬಾಲಿವುಡ್‌ನ ನಟರ ಹೆಸರು ಹೇಳಿಕೊಂಡು ಮೋಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಈತ ‘ಗೋಡ್ಸೆ ‘ ಎಂಬ ಹೆಸರಿನ ಚಲನ ಚಿತ್ರವನ್ನು ನಿರ್ಮಾಣ ಮಾಡಿದ್ದು, ಸದ್ಯದಲ್ಲೇ ತೆರೆ ಕಾಣುವುದಷ್ಟೇ ಬಾಕಿ ಇತ್ತು. ಅಲ್ಲದೆ ತನ್ನನ್ನು ಜನ ನಂಬಲಿ ಎಂಬ ಕಾರಣಕ್ಕಾಗಿ ಅಖಿಲ ಭಾರತ ಹಿಂದೂ ಮಹಾಸಭಾ ಹೆಸರು ಹೇಳಿಕೊಂಡು ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದನಲ್ಲದೆ ಸಮಾಜದ ಗಣ್ಯ ವ್ಯಕ್ತಿಗಳ ಜತೆ ಫೋಟೊ ತೆಗೆಸಿಕೊಳ್ಳುತ್ತಿದ್ದ. ವೈದ್ಯಕೀಯ ಪದವಿ ಪಡೆಯದಿದ್ದರೂ ಹೆಸರಿನ ಮುಂದೆ ‘ಡಾ’ ಸೇರಿಸಿಕೊಂಡಿದ್ದ. ಕರ್ನಾಟಕದಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡಲು ಬರುತ್ತಿದ್ದ ಉತ್ತರ ಭಾರತದ ವಿದ್ಯಾರ್ಥಿಗಳನ್ನು ಬಲೆಗೆ ಬೀಳಿಸಿ ವಂಚಿಸುವುದೇ ಈತನ ಕೆಲಸವಾಗಿತ್ತು. ತನಗೆ ಬೆಂಗಳೂರಿನ ಪ್ರತಿಷ್ಠಿತ ಕಾಲೇಜುಗಳ ಆಡಳಿತ ಮಂಡಳಿಗಳ ಪ್ರಮುಖರು ಪರಿಚಯವಿದ್ದು, ವೈದ್ಯ ಸೀಟು ಕೊಡಿಸುವುದಾಗಿ ನಂಬಿಸಿ ವಿದ್ಯಾರ್ಥಿಗಳಿಂದ 10 ಲಕ್ಷ ಹಣ ಪಡೆದು ವಂಚಿಸಿದ್ದ.

ಇಂಟರ್‌ನೆಟ್‌ನಲ್ಲಿ ದಿಲ್ಲಿಯ ಹೆಲ್ತ್ ಮತ್ತು ಹೆಲ್ಪ್ ಸೊಸೈಟಿ ಆಫ್ ಇಂಡಿಯ, ಬ್ರಹ್ಮಶ್ರೀ, ಫಿಲ್ಮಂ ಮೀಡಿಯ ಲಿ., ಸ್ವರ ಸಂಗೀತ್, ಅಖಿಲ ಭಾರತ ಹಿಂದೂ ಮಹಾಸಭಾ ಎಂಬ ನಕಲಿ ಕಂಪನಿಗಳನ್ನು ಸೃಷ್ಟಿಸಿಕೊಂಡು ಮೋಸ ಮಾಡುತ್ತಿದ್ದ. ಬೆಂಗಳೂರಿನ ಡಾ.ಅಂಬೇಡ್ಕರ್ ವೈದ್ಯ ಮಹಾವಿದ್ಯಾಲಯ, ಕಿಮ್ಸ್ , ಬಿಜಿಎಸ್ ವೈದ್ಯ ಆಸ್ಪತ್ರೆ ಸೇರಿದಂತೆ ನಗರದ ಪ್ರತಿಷ್ಠಿತ ಕಾಲೇಜುಗಳ ಆಡಳಿತ ಮಂಡಳಿಯವರ ಸಂಪರ್ಕವಿದ್ದು, ಸೀಟು ಕೊಡಿಸುವುದಾಗಿ ಹೇಳಿ ವಿದ್ಯಾರ್ಥಿಗಳಿಂದ 1 ಕೋಟಿ 20 ಲಕ್ಷ ಹಣ ಪಡೆದುಕೊಂಡು ತಲೆ ಮರೆಸಿಕೊಂಡಿದ್ದ. ಈ ವಿದ್ಯಾರ್ಥಿಗಳು ಚಿಕ್ಕಪೇಟೆ, ಉಪ್ಪಾರಪೇಟೆ, ಜಯನಗರ, ಕಬ್ಬನ್ ಪಾರ್ಕ್ ಸೇರಿದಂತೆ ನಾನಾ ಠಾಣೆಗಳಲ್ಲಿ ದೂರು ನೀಡಿದ್ದರು.

ಈ ಹಿಂದೆ ಈತನ ವಿರುದ್ಧ ಮುಂಬೈ ಮತ್ತು ದೆಹಲಿಯಲ್ಲಿ ದೂರು ದಾಖಲಾಗಿದ್ದವು. ವಂಚನೆ ಪ್ರಕರಣದಲ್ಲಿ ಒಂದು ಬಾರಿ ರೈನನ್ನು ದೆಹಲಿ ಪೊಲೀಸರು ಬಂಧಿಸಿದ್ದರು.

Write A Comment