ಪೌರ್ವಾತ್ಯ ದೇಶಗಳಲ್ಲಿ ಸರ್ವಾಧಿಕಾರವನ್ನ ಕಿತ್ತೊಗೆದು ಪ್ರಜಾಪ್ರಭುತ್ವ ಪ್ರತಿಷ್ಠಾಪಿಸುವಲ್ಲಿಯೂ ಫೇಸ್ ಬುಕ್ ಪ್ರಧಾನ ಪಾತ್ರ ವಹಿಸಿದೆ. ಹಾಗೆ ಸಾಮಾಜಿಕ ಶಕ್ತಿಯಾಗಿ ಹೊರ ಹೊಮ್ಮಿರುವ ಅದೇ ಫೇಸ್ ಬುಕ್ ಇಂದು ಸಂಬಂಧಗಳನ್ನು ಹೊಸಕಿ ಹಾಕುವಲ್ಲೂ ನಿರ್ಣಾಯಕ ಪಾತ್ರ ವಹಿಸಿದೆ. ಮಧುರವಾಗಿದ್ದ ದಾಂಪತ್ಯಗಳನ್ನು ಮುರಿಯುತ್ತಿದೆ. ಮನಸು ಮನಸುಗಳ ನಡುವೆ ಅನುಮಾನವನ್ನು ಹತ್ತಿಕ್ಕಿ, ವಿಶ್ವಾಸ ನಂಬಿಕೆಗಳೆನ್ನುವುದನ್ನೇ ನಿರ್ನಾಮಗೊಳಿಸುತ್ತಿದೆ. ಇದರ ಹೊಡೆತಕ್ಕೆ ಬಲು ಬೇಗ ಸಿಲುಕುವುದು ಹೆಣ್ಣು ಜೀವಗಳೇ. ಈ ಮಾತಿಗೆ ದೇಸೀ ವಲಯದಲ್ಲಿಯೇ ತಾಜಾ ತಾಜಾ ನಿದರ್ಶನಗಳಿವೆ.
ಈವತ್ತು ಶಿಕ್ಷಣಕ್ಕೂ ಕಂಪ್ಯೂಟರ್ ಮತ್ತು ಇಂಟರ್ ನೆಟ್ ಅನಿವಾರ್ಯ ಎಂಬಂತಾಗಿದೆ. ಪಿಯೂಸಿ ತಲುಪಿದರೆಂದರೆ ಮನೇಲಿ ಹಳ್ಳಿಗಳಲ್ಲಿಯೂ ಕಂಪ್ಯೂಟರ್ ನೆಲೆಗೊಳ್ಳುತ್ತದೆ. ಈಗ ಫೇಸ್ ಬುಕ್ಕಿನ ವಿಚಾರ ಯಾಕಪ್ಪಾ ಅಂತೀರಾ? ಹೌದು ಫೇಸ್ ಬುಕ್ ಸಾಧಕ ಬಾಧಕಗಳ ಕುರಿತಾಗೇ ಕನ್ನಡದಲ್ಲಿ ಸಿನಿಮಾವೊಂದು ತಯಾರಾಗಿದೆ. ಜೊತೆಗೆ ಸೆನ್ಸಾರ್ ಮಂಡಳಿಯ ಮೆಚ್ಚುಗೆಗೆ ಪಾತ್ರವಾಗಿ ‘ಯು’ ಸರ್ಟಿಫಿಕೇಟ್ ಪಡೆದಿದೆ.
ಚಿತ್ರದ ಹೆಸರು ‘ಮೆಲೋಡಿ’. ಬುದ್ಧಿವಂತ ಸಂಭಾಷಣೆಕಾರ ಹಾಗೂ ಬರಹಗಾರ ಎನಿಸಿಕೊಂಡಿರುವ ನಂಜುಂಡ ಅವರು 14 ವರ್ಷಗಳ ಬಳಿಕ ‘ಮೇಲೋಡಿ’ ಚಿತ್ರದ ಮೂಲಕ ನಿರ್ದೇಶನಕ್ಕೆ ಮರಳಿದ್ದಾರೆ. ಹೆಸರೇ ಹೇಳುವಂತೆ ಮೆಲೋಡಿ ಚಿತ್ರದಲ್ಲಿ ಸುಮಧುರವಾದ ಹಾಡುಗಳೂ ಇವೆ. ಈ ಚಿತ್ರದ ವಿಶೇಷವೆಂದರೆ ಕನ್ನಡ ಚಿತ್ರರಂಗದ ಖ್ಯಾತ ಹಿನ್ನೆಲೆ ಗಾಯಕ ರಾಜೇಶ್ ಕೃಷ್ಣನ್ ಹೀರೋ ಆಗಿ ನಟಿಸುತ್ತಿದ್ದಾರೆ.
ಹಿಂದೆ `ಗಾಳಿಪಟ’ದ ನಾಯಕರಲ್ಲೊಬ್ಬರಾಗಿ ಕಾಣಿಸಿಕೊಂಡಿದ್ದ ರಾಜೇಶ್ ಕೃಷ್ಣನ್ ಈ ಬಾರಿ ಪೂರ್ಣ ಪ್ರಮಾಣದ ಹೀರೋ ಆಗಿದ್ದಾರೆ. ಜೊತೆಗೆ ಚೇತನ್ ಗಂಧರ್ವ, ಕಾರ್ತಿಕ ಮೆನನ್, ಅಕ್ಷತಾ ಮೂಲ್ರ, ರಾಮಕೃಷ್ಣ, ಮಂಡ್ಯ ರಮೇಶ್, ಸುಧಾಕರ್, ಶಾಮಂತ್, ಯಮುನ ಶ್ರೀನಿಧಿ, ಪ್ರಶಾಂತ್ ಸಂಭರ್ಗಿ ಹಾಗೂ ಇತರರು ತಾರಾಗಣದಲ್ಲಿದ್ದಾರೆ. ಶ್ರೀ ಅಂಭಾ ಭಗವತಿ ಫಿಲ್ಮ್ಸ್ ಅಡಿಯಲ್ಲಿ ಎಸ್ ಕೃಷ್ಣಮೂರ್ತಿ ಅವರು ನಿರ್ಮಾಣದ ಈ ಚಿತ್ರಕ್ಕೆ ಎಲ್ ಎನ್ ಶಾಸ್ತ್ರೀ ಅವರ ಮಾರ್ಗದರ್ಶನ ಜೊತೆ ಸಂಗೀತ ನಿರ್ದೇಶನ ಸಹ ಇದೆ. ಆರ್ ವಿ ನಾಗೇಶ್ವರ ರಾವ್ ಛಾಯಾಗ್ರಹಣ, ವಿ ನಾಗೇಂದ್ರ ಪ್ರಸಾದ್ ಅವರ ಗೀತ ರಚನೆ, ಎಂ ಎಸ್ ಪಾಟೀಲ್ ಅವರ ಚಿತ್ರಕಥೆ, ತ್ರಿಭುವಣ್ ಅವರ ನೃತ್ಯ ನಿರ್ದೇಶನ ‘ಮೆಲೋಡಿ’ ಚಿತ್ರಕ್ಕಿದೆ.