ದಾವಣಗೆರೆ: ನಗರದ ಹೊರವಲಯದ ಶಾಮನೂರಿನ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಶನಿವಾರ ಬೆಳಗಿನ ಜಾವ 3ರ ಸುಮಾರಿಗೆ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ ಇಬ್ಬರು ಮೃತಪಟ್ಟು, ಏಳು ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಟ್ರ್ಯಾಕ್ಟರ್, ಲಾರಿ ಹಾಗೂ ಖಾಸಗಿ ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ಯಮನ್ ದೇಶದ ಅನ್ವರ್ (28) ಹಾಗೂ ಆಂಧ್ರಪ್ರದೇಶದ ರಾಮ್ಬಾಬು (32) ಮೃತಪಟ್ಟಿದ್ದಾರೆ. ಅನ್ವರ್, ಆಂಧ್ರಪ್ರದೇಶದ ನಲ್ಲೂರು ಸಮೀಪದ ವೆಂಕಟಾಚಲಂನ ಸ್ವಾತಿ ಫಾರ್ಮಸಿ ಕಾಲೇಜಿನಲ್ಲಿ ಬಿ.ಫಾರ್ಮ ಅಧ್ಯಯನ ಮಾಡುತ್ತಿದ್ದ.
ಘಟನೆ ವಿವರ: ಮುಂಬೈನಿಂದ ಬೆಂಗಳೂರಿಗೆ ತೆರಳುತ್ತಿದ್ದ ಶರ್ಮಾ ಟ್ರಾವೆಲ್ಸ್ಗೆ ಸೇರಿದ ವೋಲ್ವೊ ಬಸ್ನ ಚಾಲಕ, ಶಾಮನೂರು ಬಳಿ ಈರುಳ್ಳಿ ತುಂಬಿಕೊಂಡು ಸಾಗುತ್ತಿದ್ದ ಟ್ರ್ಯಾಕ್ಟರನ್ನು ಓವರ್ಟೇಕ್ ಮಾಡಲು ಯತ್ನಿಸಿದ. ಆದರೆ, ಕೊಳವೆಬಾವಿಗೆ ಅಳವಡಿಸುವ ಕಬ್ಬಿಣದ ಪೈಪ್ಗಳನ್ನು ತುಂಬಿಕೊಂಡು ಹೋಗುತ್ತಿದ್ದ ಲಾರಿಯನ್ನು ಗಮನಿಸದ ಬಸ್ ಚಾಲಕ, ಅದರ ಹಿಂಬದಿಗೆ ಡಿಕ್ಕಿ ಹೊಡೆದಿದ್ದಾನೆ.
ಡಿಕ್ಕಿಯಾದ ರಭಸಕ್ಕೆ ಲಾರಿಯಲ್ಲಿದ್ದ ಕಬ್ಬಿಣದ ಪೈಪ್ಗಳು ಬಸ್ನ ಮುಂಭಾಗವನ್ನು ಸೀಳಿಕೊಂಡು ಒಳನುಗ್ಗಿವೆ. ಇದೇವೇಳೆ, ಟ್ರ್ಯಾಕ್ಟರ್ಗೂ ಬಸ್ ಡಿಕ್ಕಿ ಹೊಡೆದಿದ್ದು, ಅದು ರಸ್ತೆ ಬದಿಗೆ ಬಿದ್ದಿದೆ.