ಬೆಂಗಳೂರು: ನಿತ್ಯಾನಂದ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ಬಿಡದಿ ನಿತ್ಯಾನಂದ ಸ್ವಾಮಿಯ ಪುರುಷತ್ವ ಪರೀಕ್ಷೆಯ ವರದಿಯನ್ನು ಬುಧವಾರ ಕೋರ್ಟ್ ಗೆ ಸಲ್ಲಿಸಿದ್ದಾರೆ.
ಡಿವೈಎಸ್ಪಿ ಲೋಕೇಶ್ ಕುಮಾರ್ ನೇತೃತ್ವದ ಸಿಐಡಿ ತಂಡ ಇಂದು ರಾಮನಗರ ಜಿಲ್ಲಾ ಸೆಷನ್ಸ್ ಕೋರ್ಟ್ಗೆ ಪುರುಷತ್ವ ವರದಿ ಸಲ್ಲಿಸಿದ್ದು, ಪುರುಷತ್ವ ಪರೀಕ್ಷೆ ವರದಿ ಒಟ್ಟು 31 ಪುಟಗಳನ್ನೊಳಗೊಂಡಿದೆ. ಪ್ರಕರಣದ ವಿಚಾರಣೆಗಾಗಿ ನಿತ್ಯಾನಂದ ಅವರು ರಾಮನಗರ ಸೆಷನ್ಸ್ ಕೋರ್ಟ್ಗೆ ತಮ್ಮ ಐವರು ಶಿಷ್ಯರೊಂದಿಗೆ ಭೇಟಿ ನೀಡಿದ್ದಾರೆ.
ನಿತ್ಯಾನಂದ ತಾನು ಗಂಡಸೂ ಅಲ್ಲ, ಹೆಂಗಸೂ ಅಲ್ಲ, ನಾನೊಬ್ಬ ಪುಟ್ಟ ಬಾಲಕನಿದ್ದಂತೆ ತನಗೆ ಲೈಂಗಿಕ ಕ್ರಿಯೆ ನಡೆಸುವ ಸಾಮರ್ಥ್ಯ ಇಲ್ಲ ಎಂದು ಹೇಳಿದ್ದ. ಇದಕ್ಕೆ ರಾಜ್ಯ ಸರ್ಕಾರ ನಿತ್ಯಾನಂದನಿಗೆ ಪುರುಷತ್ವ ಪರೀಕ್ಷೆಗೆ ಒಳಪಡಿಸಬೇಕು ಎಂದು ಸುಪ್ರೀಂಕೋರ್ಟ್ ಗೆ ಪ್ರಮಾಣ ಪತ್ರ ಸಲ್ಲಿಸಿತ್ತು.
ಆಗಸ್ಟ್ 6 ರಂದು ನಿತ್ಯಾನಂದ ಪುರುಷತ್ವ ಪರೀಕ್ಷೆಗೆ ಹಾಜರಾಗಬೇಕು ಎಂದು ಹೈಕೋರ್ಟ್ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ನಿತ್ಯಾನಂದ ಪರ ವಕೀಲ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಸುಪ್ರೀಂ ಅರ್ಜಿಯನ್ನು ವಜಾಗೊಳಿಸಿ ಹೈಕೋರ್ಟ್ ತೀರ್ಪನ್ನು ಎತ್ತಿಹಿಡಿದಿತ್ತು.
ಸುಪ್ರೀಂಕೋರ್ಟ್ ಆದೇಶದಂತೆ ಸೆ.8 ರಂದು ಸ್ವಯಂ ಘೋಷಿತ ದೇವಮಾನವನನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪ್ರಮುಖ ನಾಲ್ವರು ವೈದ್ಯ ನಿಯೋಜನೆಯೊಂದಿಗೆ ನಿತ್ಯಾನಂದನಿಗೆ ಜನನಾಂಗ, ಚರ್ಮ, ಬೆವರು, ಧ್ವನಿ ಮತ್ತು ವೀರ್ಯಾಣು ಚಲನೆ, ವೃಷಣಗಳ ಬೆಳವಣಿಗಳ ಕುರಿತು ಪರೀಕ್ಷೆ ನಡೆಸಲಾಗಿತ್ತು. ಸೆ.9 ರಂದು ನಿತ್ಯಾನಂದ ಪುರುಷತ್ವ ಪರೀಕ್ಷೆ ಕುರಿತು ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರು ಸಿಐಡಿ ಪೊಲೀಸರಿಗೆ ವರದಿ ಸಲ್ಲಿಸಿದ್ದರು.