ಚಿತ್ರದುರ್ಗ, ನ.26: ಮನೆಯಲ್ಲಿ ಮಲಗಿದ್ದ ಇಬ್ಬರು ಬಾಲಕರ ತಲೆಗೆ ದುಷ್ಕರ್ಮಿಗಳು ಕಬ್ಬಿಣದ ರಾಡಿನಿಂದ ಬಡಿದು ಕೊಲೆ ಮಾಡಿರುವ ಘಟನೆ ಮೊಳಕಾಲ್ಮೂರು ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೊಳಕಾಲ್ಮೂರು ತಾಲೂಕಿನ ಚಿಕ್ಕುಂತಿಗ್ರಾಮದ ಚಂದ್ರಪ್ಪ ಅವರ ಮಕ್ಕಳಾದ ನಾಗಮೂರ್ತಿ (12) ಮತ್ತು ತಿಪ್ಪೇಶ (10) ಕೊಲೆಯಾದ ದುರ್ದೈವಿಗಳು.
ಚಂದ್ರಪ್ಪ ಮತ್ತು ಆತನ ಪತ್ನಿ ಕರಿಬಸಮ್ಮ ಚಳ್ಳಕೆರೆ ಬಳಿ ರತ್ನಗಿರಿಯಲ್ಲಿ ಇಟ್ಟಿಗೆ ಕೆಲಸ ಮಾಡುತ್ತಾರೆ. ನಿನ್ನೆ ಪತಿ-ಪತ್ನಿ ಇಬ್ಬರೂ ಗ್ರಾಮಕ್ಕೆ ಬಂದಿದ್ದರು. ಚಂದ್ರಪ್ಪ ಕೆಲಸಕ್ಕೆ ಹೋದರೆ, ಪತ್ನಿ ಇಲ್ಲಿಯೇ ಉಳಿದಿದ್ದಳು. ರಾತ್ರಿ ನಾಗಮೂರ್ತಿ ಕೋಣೆಯ ಹೊರಗೆ ಮಲಗಿದ್ದರೆ, ತಿಪ್ಪೇಶ ಹಾಗೂ ಸಂಬಂಧಿಕರ ಬಾಲಕ ಕರಿಬಸಮ್ಮನೊಂದಿಗೆ ಒಳಕೋಣೆಯಲ್ಲಿ ಮಲಗಿದ್ದರು. ಮಧ್ಯರಾತ್ರಿ 12.30ರ ಸಮಯದಲ್ಲಿ ದುಷ್ಕರ್ಮಿ ಮೊದಲು ನಾಗಮೂರ್ತಿಯನ್ನು ಕೊಲೆ ಮಾಡಿ ನಂತರ ತಿಪ್ಪೇಶನ ತಲೆಗೆ ಹೊಡೆದಿದ್ದಾನೆ. ಆತ ಜೋರಾಗಿ ಕೂಗಿಕೊಂಡಾಗ ಕರಿಬಸಮ್ಮನಿಗೆ ಎಚ್ಚರವಾಗಿದೆ.
ಆಕೆ ನೋಡಿದಾಗ ಪುರುಷನೊಬ್ಬ ಸೀರೆ ಉಟ್ಟು ಜೋರಾಗಿ ಓಡಿದ್ದನ್ನು ಕಂಡು ಕಿರುಚಿದ್ದಾಳೆ. ತಕ್ಷಣ ಸಂಬಂಧಿಕರ ಬಾಲಕ ಓಡಿ ಹೋಗಿ ಗ್ರಾಮಸ್ಥರನ್ನು ಕರೆತಂದಿದ್ದಾನೆ. ಗ್ರಾಮಸ್ಥರು ಬರುವಷ್ಟರಲ್ಲಿ ಎರಡು ಬೈಕ್ಗಳಲ್ಲಿ ನಾಲ್ಕು ಮಂದಿ ರಭಸವಾಗಿ ಪರಾರಿಯಾದದ್ದನ್ನು ನೋಡಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾರೆ. ನಾಗಮೂರ್ತಿ, ತಿಪ್ಪೇಶ ಇಬ್ಬರೂ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚಂದ್ರಪ್ಪ ದಂಪತಿಗೆ ಇವರಿಬ್ಬರೇ ಮಕ್ಕಳಿದ್ದು, ಅವರ ದುಃಖದ ಕಟ್ಟೆ ಒಡೆದಿತ್ತು. ಇಡೀ ಗ್ರಾಮಸ್ಥರೇ ಧಾವಿಸಿ ಮಕ್ಕಳ ಕೊಲೆಗೆ ಮಮ್ಮಲ ಮರುಗಿದರು.
ಚಂದ್ರಪ್ಪ-ಕರಿಬಸಮ್ಮ ಕೆಲಸ ಮಾಡುವ ಇಟ್ಟಿಗೆ ಗೂಡಿನಲ್ಲಿ ಮತ್ತೊಬ್ಬ ಯುವಕ ಕೆಲಸ ಮಾಡುತ್ತಿದ್ದು, ಆತನ ತಂದೆ ತಾವು ಬೆಳೆದಿದ್ದ ಈರುಳ್ಳಿಯನ್ನು ಪಟ್ಟಣದಲ್ಲಿ ಮಾರಲು ೧೫ ದಿನಗಳ ಹಿಂದೆ ಹೋದವರು ವಾಪಸ್ಸಾಗಿಲ್ಲ. ಅವರು ಏನಾದರೆಂದು ಗೊತ್ತಾಗಿಲ್ಲ. ಆತ ಬಾರದೆ ಇರಲು ಚಂದ್ರಪ್ಪನೇ ಕಾರಣ, ಆತನೇ ಏನೋ ಮಾಡಿದ್ದಾನೆಂದು ಕೊಂಡು ಕಳೆದ ಒಂದು ವಾರದಿಂದ ಚಿಕ್ಕುಂತಿಗೆ ಆತನ ಕಡೆಯವರು ಬಂದು ಚಂದ್ರಪ್ಪನ ಮನೆಯನ್ನು ಅವಲೋಕಿಸುತ್ತಿದ್ದರು.
ಅವರಲ್ಲೇ ಯಾರೋ ಜಿದ್ದಿನಿಂದ ಚಂದ್ರಪ್ಪನ ಮಕ್ಕಳನ್ನು ಹತ್ಯೆಗೈದಿದ್ದಾರೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಒಟ್ಟಾರೆ ಕೊಲೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಬೆಳಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಚೇತ್, ಅಡಿಷನಲ್ ಎಸ್ಪಿ ಶಾಂತಕುಮಾರ್, ಸಿಪಿಐ ಜಮೀರ್, ಶಾಸಕ ತಿಪ್ಪೇಸ್ವಾಮಿ ಭೇಟಿ ನೀಡಿ ಚಂದ್ರಪ್ಪ ದಂಪತಿಯನ್ನು ಸಾಂತ್ವನಗೊಳಿಸಿದರು. ಶಾಸಕ ತಿಪ್ಪೇಸ್ವಾಮಿ ಸ್ಥಳದಲ್ಲೇ 10 ಸಾವಿರ ರೂ.ಗಳನ್ನು ಚಂದ್ರಪ್ಪನಿಗೆ ನೀಡಿ ಇನ್ನೂ ಹೆಚ್ಚಿನ ಸಹಾಯ ಮಾಡುವುದಾಗಿ ತಿಳಿಸಿದರು. ಮೊಳಕಾಲ್ಮೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.