ಬೆಂಗಳೂರು: ನಗರದ ಕೆ.ಜಿ. ಹಳ್ಳಿಯ ಬಾಗಲೂರು ಬಡಾವಣೆಯಲ್ಲಿ ರೌಡಿಶೀಟರ್ ವಿನೋದ್ ಅಲಿಯಾಸ್ ಮರಿಸುಸೈ ಎಂಬತನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದಿದ್ದಾರೆ.
ಬಾಗಲೂರು ಬಡಾವಣೆ ನಿವಾಸಿಯಾಗಿದ್ದ ವಿನೋದ್ ಅದೇ ಪ್ರದೇಶದಲ್ಲಿ ಸ್ನೇಹಿತರೊಬ್ಬರ ಹುಟ್ಟುಹಬ್ಬ ಕಾರ್ಯಕ್ರಮಕ್ಕೆ ಆಗಮಿಸಿದ್ದ. ರಾತ್ರಿ 9.30ರ ಸುಮಾರಿಗೆ ದ್ವಿಚಕ್ರ ವಾಹನಗಳಲ್ಲಿ ಬಂದ 5 ರಿಂದ 6 ಜನ ದುಷ್ಕರ್ಮಿಗಳ ತಂಡ ವಿನೋದ್ ಕಣ್ಣಿಗೆ ಖಾರದ ಪುಡಿ ಎರಚಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದೆ.
ಕೊಲೆಯಾದ ವಿನೋದ್ 2012ರಲ್ಲಿ ನಡೆದ ರೌಡಿಶೀಟರ್ ಡೇನಿಯಲ್ ಎಂಬಾತನ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ.ಈ ಸಂಬಂಧ ಆತ ಜೈಲಿಗೂ ಹೋಗಿ, ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದಿದ್ದ. ಹಳೇ ದ್ವೇಷದ ಹಿನ್ನೆಲೆಯಲ್ಲಿ ಡೇನಿಯಲ್ ಸಹಚರರೇ ಈ ಕೃತ್ಯ ಎಸಗಿರುವ ಶಂಕೆಯಿದೆ. ಕಾಡುಗೋಡಿನ ಕೆ.ಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದುಷ್ಕರ್ಮಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ.