ಕರ್ನಾಟಕ

ಬೆಂಗಳೂರು: ಕಾವೇರಿಸುತ್ತಿರುವ ಕಿಸ್ ಆಫ್ ಲವ್

Pinterest LinkedIn Tumblr

kochi-kiss-of-love-650

ಬೆಂಗಳೂರು: ತೀವ್ರ ಚರ್ಚೆಗೆ ಗ್ರಾಸವಾಗಿರುವ ‘ಕಿಸ್ ಆಫ್ ಲವ್’ ಕಾರ್ಯಕ್ರಮವನ್ನು ನ.30ರಂದು ನಗರದ ಪುರಭವನ ಬಳಿ ನಡೆಸಲು ನಿರ್ಧರಿಸಿರುವ ಆಯೋಜಕರು, ಈ ಸಂಬಂಧ ಅನುಮತಿ ಕೋರಿ ಬುಧವಾರ ಹಿರಿಯ ಪೊಲೀಸರಿಗೆ ಮನವಿ ಸಲ್ಲಿಸಿದ್ದಾರೆ.

ಈವರೆಗೆ ಅನುಮತಿ ನೀಡದ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಪೊಲೀಸರು ಕೈಗೊಳ್ಳುವ ನಿರ್ಧಾರದ ಮೇಲೆ ‘ಮುತ್ತಿನ ಭವಿಷ್ಯ’ ನಿರ್ಧಾರವಾಗಲಿದೆ. ನೈತಿಕ ಪೊಲೀಸ್‌ಗಿರಿ ವಿರುದ್ಧ ಹೋರಾಟದ ಭಾಗವಾಗಿ ಕೇರಳದಲ್ಲಿ ಆರಂಭವಾದಾಗ ‘ಕಿಸ್ ಆಫ್ ಲವ್’ ಕಾರ್ಯಕ್ರಮವನ್ನು ಬೆಂಗಳೂರಿನಲ್ಲೂ ಆಯೋಜಿಸಲು ಮಾನವ ಹೋರಾಟಗಾರ್ತಿ ರಚಿತಾ ತನೇಜಾ ಮುಂದಾಗಿದ್ದಾರೆ. ಈ ಸಂಬಂಧ ಸಾಮಾಜಿಕ ಜಾಲ ತಾಣದಲ್ಲಿ ವ್ಯಾಪಕ ಪ್ರಚಾರಾಂದೋಲನ ನಡೆಯುತ್ತಿದ್ದು, ಪರ- ವಿರೋಧದ ಚರ್ಚೆ ನಡೆಯುತ್ತಿದೆ.

ಕೆಲ ಸಂಘಟನೆಗಳು ಕಾರ್ಯಕ್ರಮ ಆಯೋಜನೆಯನ್ನು ಬೆಂಬಲಿಸಿ ಪರ ನಿಂತರೆ, ಇನ್ನೂ ಕೆಲ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಕೆಲ ಸಂಘಟನೆಗಳು ಕಾರ್ಯಕ್ರಮಕ್ಕೆ ಅಡ್ಡಿಪಡಿಸುವ ಬೆದರಿಕೆಯೊಡ್ಡಿವೆ. ಈ ಎಲ್ಲ ಬೆಳವಣಿಗೆ ನಡುವೆ ರಚಿತಾ ತನೇಜಾ ಸೇರಿದಂತೆ ಮೂರು ಮಂದಿ ಬುಧವಾರ ಬೆಳಗ್ಗೆ ಕೇಂದ್ರ ವಿಭಾಗದ ಡಿಸಿಪಿ ಸಂದೀಪ್ ಪಾಟೀಲ್ ಅವರನ್ನು ಭೇಟಿ ಮಾಡಿ ನ.30ರಂದು ಕಾರ್ಯಕ್ರಮ ಆಯೋಜಿಸಲು ಅನುಮತಿ ಕೋರಿದ್ದಾರೆ. ಆದರೆ ಪೊಲೀಸರು ಈವರೆಗೆ ಅನುಮತಿ ನೀಡಿಲ್ಲ.

”ಪೊಲೀಸರ ಪ್ರತಿಕ್ರಿಯೆ ನಂತರ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು,” ಎಂದು ರಚಿತಾ ತನೇಜಾ ತಿಳಿಸಿದರು.
—–

ಪರಿಶೀಲಿಸಿ ನಿರ್ಧಾರ
ಈ ಸಂಬಂಧ ಇನ್ನಷ್ಟು ಮಾಹಿತಿ ಪಡೆಯಲಾಗುತ್ತಿದೆ. ಕಾನೂನು ಪ್ರಕಾರ ಪರಿಶೀಲಿಸಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು.
* ಸಂದೀಪ್ ಪಾಟೀಲ್, ಪೂರ್ವ ವಿಭಾಗದ ಡಿಸಿಪಿ

ಅಶ್ಲೀಲವಾದರೆ ಕ್ರಮ
ಇದರಿಂದ ಸಂಸ್ಕೃತಿಗೆ ಯಾವುದೇ ರೀತಿಯಲ್ಲಿ ಧಕ್ಕೆಯಾಗದಿದ್ದರೆ ಅದರ ಆಚರಣೆಗೆ ಅಭ್ಯಂತರವಿಲ್ಲ. ಒಂದೊಮ್ಮೆ ಅಶ್ಲೀಲ, ಅಸಭ್ಯವಾಗಿ ವರ್ತಿಸಿದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು.
* ಸಿದ್ದರಾಮಯ್ಯ, ಮುಖ್ಯಮಂತ್ರಿ

ಕಾನೂನು ಪರಿಶೀಲನೆ: ಜಾರ್ಜ್
ಬೆಂಗಳೂರು: ನೈತಿಕ ಪೊಲೀಸ್‌ಗಿರಿ ವಿರೋಧಿಸಿ ಕೆಲವರು ನಗರದಲ್ಲಿ ನಡೆಸಲು ಉದ್ದೇಶಿಸಿರುವ ‘ಕಿಸ್ ಆಫ್ ಲವ್’ ಸ್ವರೂಪವು ಕಾನೂನು ಮಿತಿಯೊಳಗಿದ್ದರೆ ಮಾತ್ರ ಪರಿಶೀಲಿಸಲಾಗುತ್ತದೆ. ಇಲ್ಲದಿದ್ದರೆ, ಈ ಆಚರಣೆಯಲ್ಲಿ ಪಾಲ್ಗೊಳ್ಳುವವರ ವಿರುದ್ಧ ಸರಕಾರ ನಿರ್ದಾಕ್ಷಿಣ್ಯ ಕ್ರಮ ಜರುಗಿಸುತ್ತದೆ ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ಹೇಳಿದರು.

”ನೈತಿಕ ಪೊಲೀಸ್‌ಗಿರಿ ವಿರುದ್ಧ ‘ಕಿಸ್ ಆಫ್ ಲವ್‌’ ನಡೆಸುವುದಾಗಿ ಹೇಳಲಾಗುತ್ತಿದೆಯಾದರೂ ಸಾಮಾಜಿಕ ಜವಾಬ್ದಾರಿಯ ಹಿನ್ನೆಲೆಯಲ್ಲಿ ಸರಕಾರ ಈ ಆಚರಣೆಯ ಉದ್ದೇಶವನ್ನೇ ಪ್ರಶ್ನಿಸುತ್ತದೆ. ಕೇರಳದಲ್ಲಿ ನೈತಿಕ ಪೊಲೀಸ್‌ಗಿರಿ ನಡೆದಿದೆ ಎಂದ ಮಾತ್ರಕ್ಕೆ ಕರ್ನಾಟಕದಲ್ಲೂ ಇಂತಹ ಸಮಾಜ ಘಾತುಕ ಕೆಲಸಗಳು ನಡೆಯುತ್ತಿವೆ ಎಂಬಂತೆ ಬಿಂಬಿಸಲು ಹೊರಟಿರುವ ಕ್ರಮ ಸರಿಯಲ್ಲ. ಅನುಮತಿ ನೀಡಬೇಕೆ ಬೇಡವೇ ಎಂಬುದನ್ನು ಸರಕಾರ ಪರಿಶೀಲಿಸುತ್ತದೆ,” ಎಂದರು.

ಮಹಿಳಾ ಆಯೋಗದ ಅಧ್ಯಕ್ಷೆ ವಿರೋಧ
ಚಿತ್ರದುರ್ಗ: ಕಿಸ್ ಆಫ್ ಲವ್‌ಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳ ಮಾನಸ ವಿರೋಧ ವ್ಯಕ್ತಪಡಿಸಿದ್ದು, ಇದಕ್ಕೆ ಅವಕಾಶ ನೀಡದಂತೆ ಸರಕಾರಕ್ಕೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.

”ನಮ್ಮದು ಸುಸಂಸ್ಕೃತ ನಾಡು. ಬೆಂಗಳೂರಿನಲ್ಲಿ ಯಾವುದೇ ಕಾರಣಕ್ಕೂ ಕಿಸ್ಸಿಂಗ್ ಡೇಗೆ ಅವಕಾಶ ನೀಡಬಾರದು. ಕಾನೂನು ರೀತಿಯಲ್ಲಿ ಇದು ಅನಾಗರಿಕತನ ಹಾಗೂ ಅಕ್ಷಮ್ಯ ಅಪರಾಧ. ಇಂತಹ ಲಜ್ಜೆಗೆಟ್ಟ ಪದ್ಧತಿಗಳ ಆಚರಣೆ ಸರಿಯಲ್ಲ. ಇದಕ್ಕೆ ನನ್ನ ವಿರೋಧವಿದೆ,” ಎಂದರು.

ಬಿಜೆಪಿಯಿಂದ ವಿರೋಧ ಬೆಂಗಳೂರು: ಕಿಸ್ ಆಫ್ ಲವ್‌ಗೆ ಸಂಸದೆ ಶೋಭಾ ಕರಂದ್ಲಾಜೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದು ಭಾರತೀಯ ಸಂಸ್ಕೃತಿಗೆ ವಿರೋಧವಾಗಿದೆ. ಬಿಜೆಪಿ ಇದನ್ನು ತೀವ್ರವಾಗಿ ಖಂಡಿಸುತ್ತದೆ. ಬೆಡ್ ರೂಮ್‌ನಲ್ಲಿ ಮಾಡುವುದನ್ನು ಬೀದಿಯಲ್ಲಿ ನಿಂತು ಕಾರ್ಯಕ್ರಮ ಮಾಡುವುದು ಶೋಭೆ ತರುವುದಿಲ್ಲ. ಇದಕ್ಕೆ ಸರಕಾರ ಕಡಿವಾಣ ಹಾಕಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಹಿಂಜಾವೇ ಆಕ್ಷೇಪ ‘ಕಿಸ್ ಆಫ್ ಲವ್’ಗೆ ಸರಕಾರ ಅನುಮತಿ ನೀಡಬಾರದು ಎಂದು ಹಿಂದು ಜಾಗರಣ ವೇದಿಕೆ ಆಗ್ರಹಿಸಿದೆ.

”ಈ ಕಾರ್ಯಕ್ರಮ ನಾಡಿನ ಸಂಸ್ಕೃತಿಗೆ ವಿರುದ್ಧವಾದದ್ದು. ಇದು ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಮತ್ತಷ್ಟು ಪ್ರಚೋದನೆಗೆ ದಾರಿಯಾಗುತ್ತದೆ. ಆದ್ದರಿಂದ ಸರಕಾರ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ಅನುಮತಿ ನೀಡಿದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು,” ಎಂದು ವೇದಿಕೆ ಅಧ್ಯಕ್ಷ ಹೊನ್ನೇನಹಳ್ಳಿ ರಾಜಣ್ಣ ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಎಚ್ಚರಿಕೆ ನೀಡಿದರು.

ಗೋಷ್ಠಿಯಲ್ಲಿ ವೇದಿಕೆ ಸದಸ್ಯ ನಾಗೇಂದ್ರ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.

ಒನಕೆ ಚಳವಳಿಯ ಎಚ್ಚರಿಕೆ ಈ ಕಾರ್ಯಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಕರ್ನಾಟಕ ನವನಿರ್ಮಾಣ ಸೇನೆಯು ಕಾರ್ಯಕ್ರಮ ಆಯೋಜಿಸಿದರೆ ಅದೇ ದಿನ ಒನಕೆ ಚಳವಳಿ ನಡೆಸುವ ಎಚ್ಚರಿಕೆ ನೀಡಿದೆ.

”ಇದು ನಮ್ಮ ಸಂಸ್ಕೃತಿಗೆ ಧಕ್ಕೆ ತರುವಂತಿದೆ. ನಗರ ಪೊಲೀಸ್ ಆಯುಕ್ತರು ಯಾವುದೇ ಕಾರಣಕ್ಕೂ ಕಾರ್ಯಕ್ರಮ ಆಯೋಜಿಸಲು ಅನುಮತಿ ನೀಡಬಾರದು,” ಎಂದು ಸಂಘಟನೆಯ ರಾಜ್ಯಾಧ್ಯಕ್ಷ ಭೀಮಾಶಂಕರ ಪಾಟೀಲ ತಿಳಿಸಿದ್ದಾರೆ.

Write A Comment