ಮಧುಗಿರಿ: ಕರಡಿಯೊಂದು ಸೋಮವಾರ ಶೋಭೇನಹಳ್ಳಿ ಸಮೀಪದ ‘ಸರ್ಕಾರಿ ಹಳ್ಳ’ದಲ್ಲಿ ಚನ್ನಮಲ್ಲನಹಳ್ಳಿ ಗ್ರಾಮದ ಸೋಮಣ್ಣ (45) ಎಂಬುವವರನ್ನು ಕೊಂದು ಹಾಕಿದೆ. ಕರಡಿಯನ್ನು ನೋಡಲು ಹೋಗಿದ್ದ ಗರಣಿ ಗ್ರಾಮ ಪಂಚಾಯತಿ ವಾಟರ್ಮನ್ ತಿಮ್ಮಯ್ಯ (55) ಅವರು ಕರಡಿ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ.
ಘಟನೆಯ ವಿವರ: ಸೋಮಣ್ಣ ಹಂದಿಗಳಿಗೆ ಮೇವು ತರಲು ಚೀಲನಹಳ್ಳಿ ಸಮೀಪದ ಹಳ್ಳದಲ್ಲಿರುವ ಕತ್ತಾಳೆ ಗೆಡ್ಡೆ ತೆಗೆಯುತ್ತಿದ್ದರು. ಸಮೀಪದ ಪೊದೆಯಲ್ಲಿದ್ದ ಗಂಡು ಕರಡಿ ಅವರ ಮೇಲೆ ದಿಢೀರನೆ ದಾಳಿ ನಡೆಸಿ ಸಾಯಿಸಿತು. ವಿಷಯ ತಿಳಿದ ನೂರಾರು ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿದರು. ಆದರೆ ಕರಡಿ ಮಾತ್ರ ವಿಚಲಿತಗೊಳ್ಳದೆ ಹೆಣದ ಸಮೀಪವೇ ಕಾವಲು ಕಾಯುತ್ತಿತ್ತು.
ಪೊಲೀಸರು ಮತ್ತು ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕರಡಿ ಹಿಡಿಯಲು ನಡೆಸಿದ ತಂತ್ರಗಳು ಫಲ ನೀಡಲಿಲ್ಲ. ಗಲಾಟೆಯಿಂದ ಕೋಪಗೊಂಡ ಕರಡಿ ಜನರತ್ತ ನುಗ್ಗಿ, ಗರಣಿ ಗ್ರಾ.ಪಂ. ವಾಟರ್ಮನ್ ತಿಮ್ಮಯ್ಯ ಅವರ ಮೇಲೆ ದಾಳಿ ನಡೆಸಿತು. ಕರಡಿ ದಾಳಿಯಿಂದ ಅವರನ್ನು ರಕ್ಷಿಸಲು ಪೊಲೀಸರು ಮೊದಲು ಗಾಳಿಯಲ್ಲಿ ಗುಂಡು ಹಾರಿಸಿದರು. ಅದು ಫಲ ನೀಡದಿದ್ದಾಗ ಕರಡಿಗೆ ನೇರವಾಗಿ ಗುಂಡು ಹೊಡೆದು ಕೊಂದು ಹಾಕಿದರು.
ಪರಿಹಾರ: ಸೋಮಣ್ಣನ ಕುಟುಂಬಕ್ಕೆ ಡಿಸಿಎಫ್ ಎಂ.ವಿ. ಅಮರನಾಥ್ ₨ 2 ಲಕ್ಷದ ಚೆಕ್ ವಿತರಿಸಿದರು. ಗಾಯಾಳು ತಿಮ್ಮಯ್ಯ ಅವರಿಗೂ ಪರಿಹಾರದ ಭರವಸೆ ನೀಡಿದರು.