ಬೆಂಗಳೂರು, ಸೆ.20: ಕುಡಿದು ಬಂದು ಜಗಳ ಮಾಡುತ್ತಿದ್ದ ಮಗನನ್ನು ಪೋಷಕರೆ ಕೊಲೆ ಮಾಡಿರುವ ಘಟನೆ ಹನುಮಂತನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತಪಟ್ಟ ದುರ್ದೈವಿಯನ್ನು ಬನಶಂಕರಿ ನಿವಾಸಿ ರಾಮಮೂರ್ತಿ (46) ಎಂದು ಗುರುತಿಸಲಾಗಿದೆ. ಅವಿವಾಹಿತನಾಗಿರುವ ಈತ ಯಾವುದೇ ಕೆಲಸವಿಲ್ಲದೆ ಮನೆಯಲ್ಲಿ ತಂದೆ-ತಾಯಿಗೆ ಕಷ್ಟಕೊಡುತ್ತಿದ್ದ ಎನ್ನಲಾಗಿದೆ. ಮನೆಯಲ್ಲಿದ್ದ ಪಾತ್ರೆ, ಸೀರೆ ಮತ್ತಿತರ ಸಾಮನುಗಳನ್ನು ಮಾರಿ ಪ್ರತಿದಿನ ಕುಡಿದು ಬಂದು ತಂದೆ ತಾಯಿಯ ಮೇಲೆ ಹಲ್ಲೆ ನಡೆಸುತ್ತಿದ್ದ ಎಂದು ತಿಳಿದು ಬಂದಿದೆ. ಶುಕ್ರವಾರ ಮನೆಯವರೆಲ್ಲ ತಿಥಿ ಕಾರ್ಯಕ್ಕಾಗಿ ಸಂಬಂಧಿಕರ ಮನೆಗೆ ಹೋದಾಗ ರಾಮಮೂರ್ತಿ ಕುಡಿದು ಬಂದು ಮನೆ ಬೀಗ ಮುರಿದು ಒಳಗೆ ಕುಳಿತಿದ್ದಾನೆ. ತಂದೆ ನಾರಾಯಣರಾವ್(80), ತಾಯಿ ಇಂದಿರಮ್ಮ (78), ತಮ್ಮ ರಾಘವೇಂದ್ರ (42) ಮನೆಗೆ ವಾಪಸಾಗಿದ್ದು, ಬೀಗ ಮುರಿದಿರುವುದು ಗೊತ್ತಾಗಿ ಬೈದಿದ್ದಾರೆ.
ಇದರಿಂದ ಜಗಳವಾಗಿದ್ದು, ತಳ್ಳಾಟದಲ್ಲಿ ರಾಮಮೂರ್ತಿ ಟಿಪಾಯಿ ಮೇಲೆ ಬಿದ್ದು ಮೃತಪಟ್ಟಿದ್ದಾನೆ ಎಂದು ಪೋಷಕರು ಪೋಲಿಸರಿಗೆ ತಿಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿರುವ ಪೊಲೀಸರು ಮೃತನ ಕುತ್ತಿಗೆ ಭಾಗದಲ್ಲಿ ಗಾಯಗಳಾಗಿದ್ದು, ಕೊಲೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಈ ಮೊಕದ್ದಮೆಯನ್ನು ದಾಖಲಿಸಿಕೊಂಡಿರುವ ಹನುಮಂತನಗರ ಠಾಣಾ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ತಂದೆ, ತಾಯಿ ಹಾಗೂ ತಮ್ಮನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಶವವನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇಡಲಾಗಿದೆ.