ಬೀದರ್: ‘ರಾಜ್ಯದ ಕಾಂಗ್ರೆಸ್ ಸರ್ಕಾರ ಜನಪರ ಆಡಳಿತ ನೀಡುವಲ್ಲಿ ವಿಫಲವಾಗಿದ್ದು, ಕಾಂಗ್ರೆಸ್ ಮುಕ್ತ ಕರ್ನಾಟಕ ಸ್ಥಾಪಿಸಲು ಮುಖಂಡರು, ಕಾರ್ಯಕರ್ತರು ಸಂಕಲ್ಪ ತೊಡಬೇಕು’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಬುಧವಾರ ಕರೆ ನೀಡಿದರು.
ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕು ಗೋರ್ಟಾ (ಬಿ) ಗ್ರಾಮದಲ್ಲಿ ಬುಧವಾರ ಹುತಾತ್ಮರ ಸ್ಮಾರಕ ನಿರ್ಮಾಣ, ಸರ್ದಾರ್ ವಲ್ಲಭಭಾಯಿ ಪಟೇಲ್ರ ಪ್ರತಿಮೆ ನಿರ್ಮಾಣ ಕಾರ್ಯಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಅವರು, ‘ದೇಶದ ವಿಕಾಸದ ಜೊತೆಗೆ ಕರ್ನಾಟಕವನ್ನೂ ಸೇರಿಸಲು ಕಮಲ ಅರಳಿಸಬೇಕು’ ಎಂದು ಕೋರಿದರು.
ಕಾಂಗ್ರೆಸ್ ಆಡಳಿತವನ್ನು ತರಾಟೆಗೆ ತೆಗೆದುಕೊಂಡ ಅವರು, ಕಾಂಗ್ರೆಸ್ ಸರ್ಕಾರ ಇಷ್ಟು ದಿನದ ಆಡಳಿತದಲ್ಲಿ ನೀಡಿದ ಕೊಡುಗೆ ಏನು ಎಂದು ಸಭಿಕರನ್ನು ಪ್ರಶ್ನಿಸಿದರು. ಹಿಂದೆಯೇ ‘ಕುಚ್ ಭೀ ನಹೀ ನಾ’ ಎಂದು ಹೇಳಿದರು.
ಉಪ ಚುನಾವಣೆ ಫಲಿತಾಂಶ, ಆತಂಕ ಬೇಡ: ಈಚಿನ ಉಪ ಚುನಾವಣೆ ಫಲಿತಾಂಶದಿಂದ ಮುಖಂಡರು, ಕಾರ್ಯಕರ್ತರು ಧೃತಿಗೆಡುವ ಅಗತ್ಯವಿಲ್ಲ. ಇದು ತಾತ್ಕಾಲಿಕ. ಅಕ್ಟೋಬರ್ ತಿಂಗಳಿನಲ್ಲಿ ಹರಿಯಾಣ, ಮಹಾರಾಷ್ಟ್ರದಲ್ಲಿ ನಡೆಯುವ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಎರಡೂ ರಾಜ್ಯಗಳ ಚುನಾವಣೆ ವಿಜಯೋತ್ಸವವನ್ನು ಅ. 19ರಂದು ಆಚರಿಸಲು ಈಗಿನಿಂದಲೇ ಸಜ್ಜಾಗಿ ಎಂದರು.