ಬೆಂಗಳೂರು, ಸೆ. 14: ಸ್ನೇಹಿತರ ಮಧ್ಯೆ ಉಂಟಾದ ಕ್ಷುಲ್ಲಕ ಜಗಳ ವಿಕೋಪಕ್ಕೆ ತಿರುಗಿ ಒಬ್ಬನ ಕೊಲೆಯಲ್ಲಿ ಅದು ಅಂತ್ಯಗೊಂಡಿರುವ ದುರ್ಘಟನೆ ಇಲ್ಲಿನ ಕೆಜಿ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ನಗರದ ಭಾರತ್ ಮಾತಾ ಲೇಔಟ್ನಲ್ಲಿ ರವಿ ವಾರ ನಡೆದಿದೆ.
ಕೊಲೆಯಾದ ವ್ಯಕ್ತಿಯನ್ನು ಕೆಜಿ ಹಳ್ಳಿ, ಭಾರತ್ ಮಾಲಾ ಲೇಔಟ್ನ ನಿವಾಸಿ ಗುಜರಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸಾಧಿಕ್ ಶರೀಫ್ (27) ಎಂದು ಗುರುತಿಸಲಾಗಿದೆ. ಕೊಲೆ ಆರೋಪಿ ಸಜ್ಜಾದ್ (27) ತಲೆ ಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ.
ಕೆಜಿ ಹಳ್ಳಿ, ಭಾರತ್ ಮಾಲಾ ಲೇಔಟ್, 12ನೆ ಕ್ರಾಸ್ನಲ್ಲಿರುವ ಮನೆಯ ಒಂದನೆ ಮಹಡಿಯಲ್ಲಿನ ಅಬ್ದುಲ್ ಜಾವೆದ್ ವಾಸವಾಗಿದ್ದು, ಕೊಲೆಯಾದ ಸಾಧಿಕ್ ಶರೀಪ್ ಕೂಡ ಅವರ ಸಂಬಂಧಿ. ಆತ ಪ್ರತಿನಿತ್ಯ ಇವರ ಮನೆಯಲ್ಲೆ ಬಂದು ಮಲಗುತ್ತಿದ್ದ ಎಂದು ಹೇಳಲಾಗಿದೆ.
ಮೂರು ದಿನಗಳ ಹಿಂದೆ ಸ್ನೇಹಿತರೆಲ್ಲ ಸೇರಿ ಪಾರ್ಟಿ ಮಾಡಿದ್ದಾರೆ. ಈ ಸಂದರ್ಭ ದಲ್ಲಿ ಮದ್ಯದ ಅಮಲಿನಲ್ಲಿ ಕ್ಷುಲ್ಲಕ ವಿಷಯಕ್ಕೆ ಜಗಳ ಮಾಡಿಕೊಂಡಿದ್ದು, ಈ ವೇಳೆ ಆರೋಪಿ ಸಜ್ಜಾದ್ ಸಾಧಿಕ್ ಶರೀಪ್ಗೆ ಚಾಕುವಿನಿಂದ ಇರಿದಿದ್ದು ಇದರಿಂದ ತೀವ್ರವಾಗಿ ಗಾಯಗೊಂಡು ರಕ್ತಸ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಬಸವನಗರದ ನಿವಾಸಿ ಸಿದ್ದಿಕ್ ಶರೀಫ್ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ. ಮೊಕದ್ದಮೆ ದಾಖಲು ಮಾಡಿಕೊಂಡಿರುವ ಕೆಜಿ ಹಳ್ಳಿ ಠಾಣಾ ಪೊಲೀಸರು ಕೊಲೆ ಆರೋಪಿ ಸಜ್ಜಾದ್ ಬಂಧನಕ್ಕೆ ವ್ಯಾಪಕ ಶೋಧ ಕಾರ್ಯ ಕೈಗೊಂಡಿದ್ದಾರೆ.