ಕರಾವಳಿ

ಪ್ರತ್ಯೇಕ ಪ್ರಕರಣದಲ್ಲಿ 2 ಮೀನುಗಾರಿಕಾ ದೋಣಿ‌ ಮುಳುಗಡೆ: ಅಪಾರ ನಷ್ಟ, 6 ಮೀನುಗಾರರ ರಕ್ಷಣೆ

Pinterest LinkedIn Tumblr

ಕುಂದಾಪುರ: ಭಾರೀ ಗಾಳಿ ಮಳೆಯ ಪರಿಣಾಮ ಭಾನುವಾರ ಮೀನುಗಾರಿಕೆಗೆ ತೆರಳಿದ್ದ ಎರಡು ನಾಡದೋಣಿಗಳು ಮಗುಚಿ ಬಿದ್ದ ದುರ್ಘಟನೆ ಕಂಚುಗೋಡು ಹಾಗೂ ತ್ರಾಸಿ ಹೊಸಪೇಟೆ ಸಮೀಪದ ಕಡಲಿನಲ್ಲಿ ಸಂಭವಿಸಿದೆ. ಎರಡು ದೋಣಿಯಲ್ಲಿದ್ದ ಆರು ಜನ ಮೀನುಗಾರರನ್ನು ರಕ್ಷಿಸಲಾಗಿದೆ.

ರಾಮ ಖಾರ್ವಿ ಅವರ ಓಂಕಾರ ಪ್ರಸನ್ನ ಎಂಬ ದೋಣಿಯಲ್ಲಿ ಮುಂಜಾನೆ ಮೂವರು ಮೀನುಗಾರಿಕೆಗೆ ತೆರಳಿದ್ದರು. ಬೆಳಗ್ಗೆ 8 ಗಂಟೆ ಸುಮಾರಿಗೆ ಭಾರೀ ಗಾಳಿ ಮಳೆ ಮತ್ತು ಅಲೆಗಳ ಹೊಡೆತದಿಂದ ದೋಣಿಯು ಕಂಚುಗೋಡು ಕಿನಾರೆ ಸಮೀಪ ಸಮುದ್ರದಲ್ಲಿ ಮಗುಚಿ ಬಿದ್ದಿದೆ. ದೋಣಿ ಸಂಪೂರ್ಣ ನೀರಿನಲ್ಲಿ ಮುಳುಗಿದ್ದು, ಮೂವರು ಮೀನುಗಾರರನ್ನು ಸಮೀಪದಲ್ಲಿದ್ದ ದೋಣಿಗಳಲ್ಲಿದ್ದ ಮೀನುಗಾರರು ರಕ್ಷಿಸಿ, ದಡ ಸೇರಿಸಿದ್ದಾರೆ. ಕುಂದಾಪುರ ತಾಲೂಕಿನ ಹೊಸಾಡು ಗ್ರಾಮದ ಕಂಚುಗೋಡು ನಿವಾಸಿ ರಾಮ ಖಾರ್ವಿ (65), ನಾಗರಾಜ ಖಾರ್ವಿ (38) ಮತ್ತು ವಿನಯ ಖಾರ್ವಿ (30) ರಕ್ಷಿಸಲ್ಪಟ್ಟ ಮೀನುಗಾರರಾಗಿದ್ದಾರೆ.ದೋಣಿಯಲ್ಲಿದ್ದ ಇಂಜಿನ್, ಬಲೆ ಹಾಗೂ ಇನ್ನಿತರ ವಸ್ತುಗಳು ಮುಳುಗಿ 5 ಲಕ್ಷ ರೂ. ನಷ್ಟವಾಗಿದೆ ಎಂದು ವಿನಯ ಖಾರ್ವಿ ಕರಾವಳಿ ಕಾವಲು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಮತ್ತೊಂದು ಪ್ರಕರಣ…
ಇನ್ನೊಂದು ಪ್ರಕರಣದಲ್ಲಿ ಮೀನುಗಾರಿಕೆಗೆ ತೆರಳಿದ್ದ ನಾಡದೋಣಿಯೊಂದು ಮಗುಚಿ ಬಿದ್ದ ದುರ್ಘಟನೆ ತ್ರಾಸಿ ಹೊಸಪೇಟೆ ಸಮೀಪದ ಕಡಲಿನಲ್ಲಿ ಸಂಭವಿಸಿದ್ದು, ದೋಣಿಯಲ್ಲಿದ್ದ ಮೂವರನ್ನು ರಕ್ಷಿಸಲಾಗಿದೆ.

ಕುಂದಾಪುರ ತಾಲೂಕಿನ ತ್ರಾಸಿ ಗ್ರಾಮದ ಹೊಸಪೇಟೆ ನಿವಾಸಿ ನಾಗ ಖಾರ್ವಿ (54), ಹೊಸಾಡು ಗ್ರಾಮದ ಭಗತ್ ನಗರ ನಿವಾಸಿ ನಿತ್ಯಾನಂತ ಖಾರ್ವಿ (47) ಮತ್ತು ಗುಜ್ಜಾಡಿ ಗ್ರಾಮದ ರೋಶನ್ (37) ರಕ್ಷಿಸಲ್ಪಟ್ಟ ಮೀನುಗಾರರಾಗಿದ್ದಾರೆ.

ತ್ರಾಸಿ ಹೊಸಪೇಟೆ ಗ್ರಾಮದ ನಾಗ ಖಾರ್ವಿ ಅವರ ಶ್ರೀ ಯಕ್ಷೇಶ್ವರಿ ಅನುಗ್ರಹ ಎಂಬ ದೋಣಿಯಲ್ಲಿ ಮುಂಜಾನೆ ನಾಗ ಖಾರ್ವಿ ಸಹಿತ ಮೂವರು ಮೀನುಗಾರಿಕೆಗೆ ತೆರಳಿದ್ದರು. ಬೆಳಗ್ಗೆ 7.30 ಗಂಟೆ ಸುಮಾರಿಗೆ ದೋಣಿಯಲ್ಲಿ ಬಲೆಯನ್ನು ತೆಗೆದುಕೊಳ್ಳುತ್ತಿರುವ ಸಂದರ್ಭ ಭಾರೀ ಗಾಳಿ ಮಳೆ ಮತ್ತು ಅಲೆಗಳ ಹೊಡೆತದಿಂದ ದೋಣಿಯು ತ್ರಾಸಿ ಹೊಸಪೇಟೆ ಕಡಲ ಕಿನಾರೆ ಸಮೀಪ ಸಮುದ್ರದಲ್ಲಿ ಮಗುಚಿ ಬಿದ್ದಿದೆ. ದೋಣಿಯಲ್ಲಿದ್ದ ಮೂವರು ಮೀನುಗಾರರನ್ನು ಸಮೀಪದಲ್ಲಿದ್ದ ಮೀನುಗಾರಿಕೆ ನಡೆಸುತ್ತಿದ್ದ ದೋಣಿಗಳಲ್ಲಿದ್ದ ಮೀನುಗಾರರು ರಕ್ಷಿಸಿದ್ದಾರೆ.

ದೋಣಿ, ಇಂಜಿನ್, ಬಲೆ ಹಾಗೂ ಇನ್ನಿತರ ವಸ್ತುಗಳು ಸಂಪೂರ್ಣವಾಗಿ ಹಾನಿಗೊಳಗಾಗಿದ್ದು ಸುಮಾರು 3 ಲಕ್ಷ ರೂ. ನಷ್ಟವಾಗಿರಬಹುದೆಂದು ಅಂದಾಜಿಸಲಾಗಿದೆ.

Comments are closed.