ಕರಾವಳಿ

ಯುವತಿಗೆ ಅಮಲು ಪದಾರ್ಥ ನೀಡಿ ಅತ್ಯಾಚಾರ: ಕಾರ್ಕಳದಲ್ಲಿ ಆರೋಪಿಯ ಬಂಧನ

Pinterest LinkedIn Tumblr

ಉಡುಪಿ: ಕಾಲೇಜು ಯುವತಿಯೋರ್ವಳಿಗೆ ಅಮಲು ಪದಾರ್ಥ ನೀಡಿ ಅತ್ಯಾಚಾರವೆಸಗಿ ಜೀವ ಬೆದರಿಕೆ ಹಾಕಿದ ಆರೋಪಿಯನ್ನು ಕಾರ್ಕಳ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಉಪ್ಪಿನಂಗಡಿ ನಿವಾಸಿ ಪ್ರಾಣೇಶ್ (38) ಬಂಧಿತ ಆರೋಪಿ.

ಯುವತಿ ಕಾಲೇಜಿಗೆ ತೆರಳುವ ಸಲುವಾಗಿ ಬಸ್ಸಿಗಾಗಿ ಕಾಯುತ್ತಿದ್ದ ವೇಳೆ ಪ್ರಾಣೇಶ್ ಅದೇ ಮಾರ್ಗದಲ್ಲಿ ಕಾರಿನಲ್ಲಿ ಬಂದಿದ್ದು, ಡ್ರಾಪ್ ಕೊಡುವುದಾಗಿ ಹೇಳಿ ಕರೆದುಕೊಂಡು ಹೋಗಿದ್ದಾನೆ. ಆಕೆಯನ್ನು ಕಾಲೇಜಿಗೆ ಬಿಡದೇ ಕಾರನ್ನು ನಿಲ್ಲಿಸದೆ ಉಪ್ಪಿನಂಗಡಿ ಕಡೆಗೆ ತೆರಳಿ ಕಾರಿನಲ್ಲೆ ಅಮಲು ಬರುವ ಜ್ಯೂಸ್ ನೀಡಿ ಉಪ್ಪಿನಂಗಡಿಯ ಮನೆಯೊಂದಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿದ್ದ. ಅತ್ಯಾಚಾರದ ವೀಡಿಯೋವನ್ನು ಚಿತ್ರೀಕರಣ ಮಾಡಿ ಬಳಿಕ ಘಟನೆಯ ಕುರಿತು ಹೊರಗಡೆ ಹೇಳಿದ್ದಲ್ಲಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಳು.

ಅಲ್ಲದೆ ಇತ್ತೀಚೆಗೆ ಯುವತಿ ಕಾರ್ಕಳಕ್ಕೆ ಕಂಪ್ಯೂಟರ್ ಕ್ಲಾಸಿಗೆ ಬಂದ ಸಮಯ ಬೈಲೂರಿಗೆ ಬರುವಂತೆ ಬೆದರಿಸಿದ್ದು, ಹೆದರಿಕೆಯಿಂದ ಬೈಲೂರಿಗೆ ಹೋದಾಗ ಅಲ್ಲಿಗೆ ಬಂದ ಪ್ರಾಣೇಶ್ ಆಕೆಯನ್ನು ಮೋಟಾರು ಸೈಕಲಿನಲ್ಲಿ ಕುಳ್ಳಿರಿಸಿಕೊಂಡು ಗುಡ್ಡೆಯಂಗಡಿ ಬಳಿ ಆತನು ಕೆಲಸ ಮಾಡುತ್ತಿರುವ ಮಾಲಿಕರ ಮನೆಗೆ ಕರೆದುಕೊಂಡು ಅತ್ಯಾಚಾರ ನಡೆಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

ಯುವತಿಯ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಕಾರ್ಕಳ ನಗರ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

 

 

Comments are closed.